ಪಂಜಾಬ್ನಲ್ಲಿ ವಲಸೆ ಕೃಷಿ ಕಾರ್ಮಿಕರಿಗೆ ಡ್ರಗ್ಸ್ ನೀಡಲಾಗುತ್ತಿದೆ: ಕೇಂದ್ರ ಗೃಹ ಇಲಾಖೆ ಪತ್ರ
ನವದೆಹಲಿ, ಏಪ್ರಿಲ್ 3: ಉತ್ತರ ಪ್ರದೇಶ ಮತ್ತು ಬಿಹಾರಗಳಿಂದ ಬಂದ ವಲಸೆ ಕಾರ್ಮಿಕರಿಗೆ ಮಾದಕವಸ್ತುಗಳನ್ನು ನೀಡಿ ಅವರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪಂಜಾಬ್ ಸರ್ಕಾರಕ್ಕೆ ಕೇಂದ್ರ ಸರ್ಕಾರ ಪತ್ರೆ ಬರೆದಿರುವುದು ಸಂಚಲನ ಮೂಡಿಸಿದೆ. ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ನ ರೈತ ಸಂಘಟನೆಗಳನ್ನು ಈ ಪತ್ರ ಮತ್ತೆ ಕೆರಳಿಸಿದೆ.
ಮಾರ್ಚ್ 17ರಂದು ಪಂಜಾಬ್ನ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಪತ್ರ ಬರೆದಿದ್ದ ಗೃಹ ಸಚಿವಾಲಯ, 2019-20ರಲ್ಲಿ ಪಂಜಾಬ್ನ ಗಡಿ ಜಿಲ್ಲೆಗಳಿಂದ ಅಂತಹ 58 ಕಾರ್ಮಿಕರನ್ನು ಬಿಎಸ್ಎಫ್ ಪಡೆ ಬಂಧಿಸಿವೆ ಎಂದು ತಿಳಿಸಿದೆ. ಬಿಎಸ್ಎಫ್ ನಡೆಸಿದ ತನಿಖೆ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಈ ಪತ್ರಕ್ಕೆ ಕಿಡಿಕಾರಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರು ಎಂದು ಬಿಂಬಿಸಲು ಪ್ರಯತ್ನಿಸಿದ್ದ ಸರ್ಕಾರ, ಈಗ ರೈತರ ವರ್ಚಸ್ಸಿಗೆ ಕಳಂಕ ತರಲು ಈ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದ ರೈತರಿಗೆ ಕೆಟ್ಟ ಹೆಸರು ತರಲೆಂದೇ ಇಂತಹ ಕ್ಷುಲ್ಲಕ ಕಲ್ಪನೆಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಬಿಜೆಪಿಯ ಮಾಜಿ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ ಟೀಕಿಸಿದೆ.
ಗುರುದಾಸಪುರ, ಅಮೃತಸರ, ಫೆರೋಜ್ಪುರ ಮತ್ತು ಅಬೋಹರ್ನ ಗಡಿ ಭಾಗಗಳಲ್ಲಿ ಬಿಎಸ್ಎಫ್ 58 ಜನರನ್ನು ಬಂಧಿಸಿದೆ. ಅವರ ವಿಚಾರಣೆಯ ವೇಳೆ, ಅವರಲ್ಲಿ ಹೆಚ್ಚಿನವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡ ಅಥವಾ ಅಸ್ವಸ್ಥ ಸ್ಥಿತಿಯಲ್ಲಿದ್ದರು. ಅವರೆಲ್ಲರೂ ಪಂಜಾಬ್ನ ಗಡಿ ಗ್ರಾಮಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುವವರು. ಈ ವ್ಯಕ್ತಿಗಳು ಬಿಹಾರ ಮತ್ತು ಉತ್ತರ ಪ್ರದೇಶಗಳ ಕುಗ್ರಾಮಗಳಿಂದ ಬಂದ ತೀವ್ರ ಬಡ ಕುಟುಂಬದ ಹಿನ್ನೆಲೆಯವರು ಎಂದು ಕೇಂದ್ರ ಸರ್ಕಾರ ಪತ್ರದಲ್ಲಿ ತಿಳಿಸಿದೆ.
ಪಂಜಾಬ್ನಲ್ಲಿ ಉತ್ತಮ ವೇತನದ ಕೆಲಸ ನೀಡುವುದಾಗಿ ನಂಬಿಸಿ ಅಂತಹ ಕಾರ್ಮಿಕರನ್ನು ಅವರ ಮೂಲ ಊರಿನಿಂದ ಕರೆದುಕೊಂಡು ಹೋಗಲಾಗುತ್ತಿದೆ. ಆದರೆ ಪಂಜಾಬ್ ತಲುಪಿದ ಬಳಿಕ ಅವರನ್ನು ತೀವ್ರವಾಗಿ ಶೋಷಿಸಲಾಗುತ್ತದೆ. ಅವರಿಗೆ ಸರಿಯಾಗಿ ವೇತನ ನೀಡುವುದಿಲ್ಲ. ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ಅವರು ಹೊಲದಲ್ಲಿ ಇನ್ನಷ್ಟು ಸಮಯ ದುಡಿಯುವಂತೆ ಮಾಡಲು ಈ ಕಾರ್ಮಿಕರಿಗೆ ಡ್ರಗ್ಸ್ ನೀಡಲಾಗುತ್ತಿದೆ. ಇದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಕ್ಷಿಸಿದ ವ್ಯಕ್ತಿಗಳನ್ನು ಮುಂದಿನ ಕ್ರಮಕ್ಕಾಗಿ ರಾಜ್ಯ ಪೊಲೀಸರಿಗೆ ಬಿಎಸ್ಎಫ್ ಒಪ್ಪಿಸುತ್ತಿದೆ ಎಂದು ಅದು ಹೇಳಿದೆ.