ಎನ್ಐಎ ಘಟಕ: ಸಂಸದ ತೇಜಸ್ವಿ ಸೂರ್ಯ ಕೇಳಿದ್ದು ಬೆಂಗಳೂರಿಗೆ, ಸಿಕ್ಕಿದ್ದು ಚೆನ್ನೈ, ರಾಂಚಿಗೆ
ಬೆಂಗಳೂರು, ಸೆಪ್ಟೆಂಬರ್ 28: ರಾಜಧಾನಿ ಬೆಂಗಳೂರು ಉಗ್ರರ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗುತ್ತಿದೆ. ಹೀಗಾಗಿ ನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಶಾಶ್ವತ ವಿಭಾಗ ಸ್ಥಾಪನೆ ಮಾಡುವಂತೆ ಗೃಹ ಸಚಿವ ಅಮಿತ್ ಶಾ ಅವರನ್ನು ಮನವಿ ಮಾಡಲಾಗಿದೆ. ರಾಜ್ಯಕ್ಕೆ ಎನ್ಐಎ ಅಗತ್ಯವನ್ನು ಮನವರಿಕೆ ಮಾಡಲಾಗಿದ್ದು, ಅದಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಭಾನುವಾರ ಹೇಳಿಕೆ ನೀಡಿದ್ದರು. ಆದರೆ ಅದು ಹುಸಿಯಾಗಿದೆ.
ಬೆಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿ ಸ್ಥಾಪನೆ ಸಂಬಂಧ ತೇಜಸ್ವಿ ಸೂರ್ಯ ಭರವಸೆಯ ಮಾತನ್ನಾಡಿದ್ದರು. ಎರಡು ದಿನಗಳ ಹಿಂದೆ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ಸುಸಜ್ಜಿತ ಮತ್ತು ಅಗತ್ಯ ಸಿಬ್ಬಂದಿ ಹೊಂದಿರುವ ಕಚೇರಿ ನೀಡುವಂತೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿಯೇ ಎಸ್ಪಿ ಶ್ರೇಣಿಯ ಅಧಿಕಾರಿ ಹೊಂದಿರುವ ಎನ್ಐಎ ಕಚೇರಿ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದರು. ಅದರ ಮರುದಿನವೇ ಕೇಂದ್ರ ಗೃಹ ಸಚಿವಾಲಯ ದೇಶದಲ್ಲಿ ಮೂರು ಕಡೆ ಎನ್ಐಎ ಕಚೇರಿ ಆರಂಭಿಸಲು ಅನುಮೋದನೆ ನೀಡಿದೆ. ಆದರೆ ಅದರಲ್ಲಿ ಬೆಂಗಳೂರಿನ ಹೆಸರೇ ಇಲ್ಲ.
ಬೆಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿ: ಕೇಂದ್ರದಿಂದ ಗ್ರೀನ್ ಸಿಗ್ನಲ್
ಮೂರು ಪ್ರದೇಶಗಳಲ್ಲಿ ಎನ್ಐಎದ ಹೆಚ್ಚುವರಿ ಕಚೇರಿಗಳನ್ನು ತೆರೆಯಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಇಂಫಾಲ, ಚೆನ್ನೈ ಮತ್ತು ರಾಂಚಿಯಲ್ಲಿ ಈ ಕಚೇರಿಗಳು ಆರಂಭವಾಗಲಿವೆ. ಮುಂದೆ ಓದಿ...
ತನಿಖೆಗೆ ಅನುಕೂಲ
ಸಂಬಂಧಿತ ದೇಶಗಳಲ್ಲಿನ ಯಾವುದೇ ತುರ್ತು ಸಂದರ್ಭದಲ್ಲಿ ತ್ವರಿತ ಸ್ಪಂದನೆಯನ್ನು ನೀಡಲು ದೇಶದ ಪ್ರಮುಖ ಭಯೋತ್ಪಾದನಾ ನಿಗ್ರಹ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಇದು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ಕುರಿತಾದ ವಿಷಯಗಳ ತನಿಖೆಯಲ್ಲಿ ಎನ್ಐಎ ಸಾಮರ್ಥ್ಯವನ್ನು ಬಲಪಡಿಸಲಿದೆ. ಜತೆಗೆ ಅಂತಹ ಅಪರಾಧಗಳಲ್ಲಿ ಮಹತ್ವದ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಸೂಕ್ತ ಸಮಯದಲ್ಲಿ ಪಡೆದುಕೊಳ್ಳಲು ನೆರವಾಗಲಿದೆ ಎಂದು ಎನ್ಐಎ ಹೇಳಿದೆ.
ಒಂಬತ್ತು ಕಡೆ ಎನ್ಐಎ ಕಚೇರಿ
ಪ್ರಸ್ತುತ ಎನ್ಐಎ ಒಂಬತ್ತು ಶಾಖೆಗಳನ್ನು ಹೊಂದಿದೆ. ಗುವಾಹಟಿ, ಮುಂಬೈ, ಜಮ್ಮು, ಕೋಲ್ಕತಾ, ಹೈದರಾಬಾದ್, ಕೊಚ್ಚಿ, ಲಕ್ನೋ, ರಾಯ್ಪುರ ಮತ್ತು ಚಂಡೀಗಡದಲ್ಲಿ ಶಾಖೆಗಳಿವೆ. ನವದೆಹಲಿಯಲ್ಲಿ ವಿಶೇಷ ಪರಿಣತ ಕೇಂದ್ರ ಕಚೇರಿಯಿದೆ. ಹೊಸ ಕಚೇರಿಗಳನ್ನು ಆರಂಭಿಸುವುದರಿಂದ ಭಯೋತ್ಪಾದನೆ ವಿರುದ್ಧ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.
ಡಿ.ಜೆ ಹಳ್ಳಿ ಗಲಭೆ ಪ್ರಕರಣ: NIAಯಿಂದ 30 ಕಡೆ ದಾಳಿ, ಪ್ರಮುಖ ಆರೋಪಿ ಬಂಧನ
ಬೆಂಗಳೂರಿಗೆ ಕಚೇರಿ ಅಗತ್ಯ
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರಾಗಿ ನೇಮಕವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ತೇಜಸ್ವಿ ಸೂರ್ಯ, ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರನಲ್ಲಿ ಉಗ್ರರ ಅನೇಕ ಚಟುವಟಿಕೆಗಳು ನಡೆಯುತ್ತಿದೆ. ಬೆಂಗಳೂರು ಉಗ್ರರ ಅಡಗುದಾಣವಾಗುತ್ತಿದೆ. ಹೀಗಾಗಿ ರಾಜ್ಯಕ್ಕೆ ಸುಸಜ್ಜಿತ, ಅತ್ಯಾಧುನಿಕ ಎನ್ಐಎ ಘಟಕದ ಅಗತ್ಯವಿದೆ ಎಂದು ಹೇಳಿದ್ದರು.
Recommended Video
ಹೈದರಾಬಾದ್ಗಿಂತ ಹತ್ತಿರ!
ಪ್ರಸ್ತುತ ಹೈದರಾಬಾದ್ನಲ್ಲಿ ಎನ್ಐಎ ದೊಡ್ಡ ಕಚೇರಿ ಹೊಂದಿದ್ದು, ಅಲ್ಲಿನ ಅಧಿಕಾರಿಗಳೇ ಬೆಂಗಳೂರಿನಲ್ಲಿ ಎನ್ಐಎ ಶಿಬಿರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಅನೇಕರನ್ನು ಬಂಧಿಸಿದೆ. ಹೀಗಾಗಿ ಬೆಂಗಳೂರಿಗೇ ಒಂದು ಘಟಕ ಬೇಕು ಎಂದು ಅಮಿತ್ ಶಾ ಅವರ ಬಳಿ ಚರ್ಚಿಸಿದ್ದಾಗಿ ತಿಳಿಸಿದ್ದರು. ಆದರೆ ಈಗ ಹೈದರಾಬಾದ್ಗಿಂತಲೂ ಬೆಂಗಳೂರಿಗೆ ಹತ್ತಿರವಿರುವ ಚೆನ್ನೈಗೆ ಎನ್ಐಎ ಕಚೇರಿ ಅನುಮೋದನೆಯಾಗಿದೆ.