ಗೃಹ ಸಚಿವಾಲಯದ ಹೊಸ ಮಾರ್ಗಸೂಚಿ: ಯಾವುದಕ್ಕೆ ಅವಕಾಶ? ಯಾವುದಕ್ಕೆ ನಿರ್ಬಂಧ?
ನವದೆಹಲಿ, ಡಿಸೆಂಬರ್ 1: ದೇಶದ ಹಲವು ಭಾಗಗಳಲ್ಲಿ ಕೊರೊನಾ ವೈರಸ್ ಸೋಂಕಿನ ಹೆಚ್ಚಳದ ನಡುವೆ ಕೇಂದ್ರ ಗೃಹ ಸಚಿವಾಲಯ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು 'ಕಣ್ಗಾವಲು, ಹದ್ದುಬಸ್ತು ಮತ್ತು ಎಚ್ಚರಿಕೆ'ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾರ್ಗದರ್ಶಿಗಳು ಮಂಗಳವಾರದಿಂದಲೇ (ಡಿ 1) ಜಾರಿಗೆ ಬಂದಿವೆ.
ಹೊಸ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾತ್ರಿ ನಿಷೇಧಾಜ್ಞೆಯಂತಹ ಸ್ಥಳೀಯ ನಿರ್ಬಂಧಗಳನ್ನು ವಿಧಿಸುವ ಅಧಿಕಾರ ನೀಡಲಾಗಿದೆ. ಆದರೆ ಅವುಗಳು ಕೇಂದ್ರ ಸರ್ಕಾರವನ್ನು ಸಂಪರ್ಕಿಸದೆ ಲಾಕ್ಡೌನ್ ಹೇರುವಂತಿಲ್ಲ. ಹಾಗೆಯೇ ರಾಜ್ಯಗಳು ತಮ್ಮ ಗಡಿಗಳನ್ನು ಬಂದ್ ಮಾಡದಂತೆಯೂ ಗೃಹ ಸಚಿವಾಲಯ ಸೂಚನೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಕೊವಿಡ್ 19 ಮಾರ್ಗಸೂಚಿ ಬಿಡುಗಡೆ
ಈ ಮಾರ್ಗದರ್ಶಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಪೊಲೀಸರು ಮತ್ತು ಮುನಿಸಿಪಲ್ ಪಾಲಿಕೆಗಳ ಜವಾಬ್ದಾರಿ ಎಂದು ಕೂಡ ಮಾರ್ಗದರ್ಶಿ ಹೇಳಿದೆ.
ಭಾರತದ ಕಂಟೇನ್ಮೆಂಟ್ ಝೋನ್ ಮಾರುಕಟ್ಟೆಗಳಿಗೆ ಹೊಸ ಮಾರ್ಗಸೂಚಿ
ಕಂಟೇನ್ಮೆಂಟ್ ವಲಯಗಳ ಹೊರಗೆ ಎಲ್ಲ ಚಟುವಟಿಕೆಗಳಿಗೆ ಸಚಿವಾಲಯ ಅನುಮತಿ ನೀಡಿದೆ. ಆದರೆ ಕೆಲವು ನಿರ್ಬಂಧಗಳು ಜಾರಿಯಲ್ಲಿವೆ. ಇನ್ನು ಕೆಲವು ಚಟುವಟಿಕೆಗಳಿಗೆ ಕೆಲವು ನಿಬಂಧನೆಗಳ ಸಹಿತ ಅನುಮತಿ ನೀಡಲಾಗುತ್ತದೆ. ಮುಂದೆ ಓದಿ.
ಶೇ 50 ಪ್ರೇಕ್ಷಕರಿಗೆ ಅವಕಾಶ
* ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ
* ಸಿನಿಮಾ ಹಾಲ್ಗಳು ಮತ್ತು ಚಿತ್ರಮಂದಿರಗಳನ್ನು ಶೇ 50ರಷ್ಟು ಸಾಮರ್ಥ್ಯದವರೆಗೆ ತೆರೆಯಲು ಅವಕಾಶ.
* ಈಜುಕೊಳಗಳು ತರಬೇತಿಯಲ್ಲಿರುವ ಕ್ರೀಡಾಪಟುಗಳಿಗೆ ಮಾತ್ರ.
* ಪ್ರದರ್ಶನ ಸಭಾಂಗಣಗಳನ್ನು ಉದ್ಯಮದಿಂದ ಉದ್ಯಮ (ಬಿ 2 ಬಿ) ಚಟುವಟಿಕೆಗಳಿಗೆ ಮಾತ್ರ ಬಳಸಬಹುದು.
ಅಂತಾರಾಜ್ಯ ಓಡಾಡಕ್ಕೆ ಅಡ್ಡಿಯಿಲ್ಲ
* ಸಾಮಾಜಿಕ/ಧಾರ್ಮಿಕ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಂಪುಗೂಡುವಿಕೆಗೆ ಸಭಾಂಗಣ ಸಾಮರ್ಥ್ಯದ ಶೇ 50ರಷ್ಟು ಮಾತ್ರವೇ ಅವಕಾಶ. ಮುಚ್ಚಿದ ಪ್ರದೇಶಗಳಲ್ಲಿ ಗರಿಷ್ಠ 200 ಮಂದಿಗೆ ಅವಕಾಶ.
* ಅಂತರ್ ರಾಜ್ಯ, ಅಂತಾರಾಜ್ಯ ಚಲನವಲನಗಳ ಮೇಲೆ ನಿರ್ಬಂಧವಿಲ್ಲ.
* 65 ವರ್ಷದ ದಾಟಿದ ವ್ಯಕ್ತಿಗಳು, ಅನಾರೋಗ್ಯ ಸಮಸ್ಯೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು ಹತ್ತು ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರುವಂತೆ ಸಲಹೆ ನೀಡಲಾಗಿದೆ.
ಮಹಾರಾಷ್ಟ್ರಕ್ಕೆ ಬರುವಾಗ ಪರೀಕ್ಷೆ ಕಡ್ಡಾಯ
ಮಹಾರಾಷ್ಟ್ರವು ಹೊಸ ಪ್ರಯಾಣ ಮಾರ್ಗದರ್ಶಿ ಹೊರಡಿಸಿದ್ದು, ದೆಹಲಿ-ಎನ್ಸಿಆರ್, ರಾಜಸ್ಥಾನ, ಗುಜರಾತ್ ಮತ್ತು ಗೋವಾಗಳಿಂದ ಮಹಾರಾಷ್ಟ್ರಕ್ಕೆ ಬರುವವರು ಆರ್ಟಿ-ಪಿಸಿಆರ್ ಕೋವಿಡ್ ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ. ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾಗಳಿಂದ ವಿಮಾನಗಳಲ್ಲಿ ಬರುವ ಆಂತರಿಕ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ತರುವುದು ಕಡ್ಡಾಯ. ಮಹಾರಾಷ್ಟ್ರಕ್ಕೆ ಪ್ರವೇಶಿಸುವ ಪ್ರಯಾಣದ 72 ಗಂಟೆ ಮುಂಚೆ ಪರೀಕ್ಷೆ ಮಾಡಿಸಿರಬೇಕು.
Recommended Video
ಪಂಜಾಬ್ನಲ್ಲಿ ದುಪ್ಪಟ್ಟು ದಂಡ
ಪಂಜಾಬ್ನಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚುವುದನ್ನು ತಡೆಯಲು ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ಮಂಗಖವಾರದಿಂದ ಎಲ್ಲ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಹಾಗೆಯೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡವನ್ನು ದುಪ್ಪಟ್ಟು ಮಾಡಲಾಗಿದೆ.