ಮಹಾರಾಷ್ಟ್ರ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್ ನಿಧನ
ಬೆಂಗಳೂರು, ಮೇ 31: ಮಹಾರಾಷ್ಟ್ರದ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಸಚಿವ ಪಾಂಡುರಂಗ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡು ಕೊನೆಯುಸಿರೆಳೆದಿದ್ದಾರೆ.
ಪಾಂಡುರಂಗ ಫುಂಡ್ಕರ್ ಅವರು 1950ರಲ್ಲಿ ಜನಿಸಿದ್ದರು. ಮೂರು ಬಾರಿ ಲೋಕಸಭಾ ಸದಸ್ಯರಾಗಿ, ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಖಾಮ್ ಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವರು, ಸಿಎಂ ಫಢ್ನವಿಸ್ ಸರ್ಕಾರದಲ್ಲಿ ಕೃಷಿ ಇಲಾಖೆಯನ್ನು ನಿರ್ವಹಿಸುತ್ತಿದ್ದರು. ಇದೀಗ ಅಲ್ಲೂ ಕೂಡ ಉಪ ಚುನಾವಣೆ ನಡೆಯಬೇಕಿದೆ.
ಕರ್ನಾಟಕದಲ್ಲಿ ಎರಡು ಉಪಚುನಾವಣೆ: ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12 ರಂದು ನಡೆದಿದೆ. ಎಚ್ಡಿ ಕುಮಾರಸ್ವಾಮಿಯವರು ಚೆನ್ನಪಟ್ಟಣವನ್ನು ಉಳಿಸಿಕೊಂಡು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಆಯ್ಕೆಯಾಗಿದ್ದ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಒಬ್ಬರು ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶವಿದ್ದು ಈ ಕಾರಣಕ್ಕೆಎಚ್ಡಿಕೆ ರಾಜಿನಾಮೆ ನೀಡುವುದು ಅನಿವಾರ್ಯವಾಗಿತ್ತು. ಇದೀಗ ಆ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿಯವರು ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ.
ಜಮಖಂಡಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ: ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ನಿಧನ ಹಿನ್ನೆಲೆಯಲ್ಲಿ ಆ ಕ್ಷೇತ್ರದಲ್ಲೂ ಉಪ ಚುನಾವಣೆ ನಡೆಯಲಿದೆ. ಒಟ್ಟು ಕರ್ನಾಟಕದಲ್ಲಿ ಎರಡು ವಿಧಾನಸಭೆ ಹಾಗೂ 3 ಲೋಕಸಭೆ ಉಪಚುನಾವಣೆ ನಡೆಯಲಿದೆ.