ಕತುವಾ ಪ್ರಕರಣ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ: 90 ದಿನಗಳ ಗಡುವು
ಶ್ರೀನಗರ, ಏಪ್ರಿಲ್ 14: ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ತ್ವರಿತ ನ್ಯಾಯಾಲಯ ರಚಿಸುವಂತೆ ಜಮ್ಮು ಕಾಶ್ಮೀರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಾಮಲಿಂಗಂ ಸುಧಾಕರ್ ಅವರಿಗೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರ ರಾಜ್ಯದಲ್ಲಿ ರಚಿಸಲಾಗುತ್ತಿರುವ ಮೊದಲ ತ್ವರಿತ ನ್ಯಾಯಾಲಯ ಇದಾಗಿದ್ದು, 90 ದಿನಗಳೊಳಗೆ ಪ್ರಕರಣ ಇತ್ಯರ್ಥಗೊಳಿಸುವಂತೆ ನ್ಯಾಯಾಲಯಕ್ಕೆ ಗಡುವು ನೀಡಲಾಗುತ್ತಿದೆ.
ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ: ಮೇನಕಾ ಗಾಂಧಿ
ಪ್ರಕರಣದ ಕುರಿತು ತಿಳಿಯುತ್ತಿದ್ದಂತೆಯೇ ತೀವ್ರ ವಿಷಾದ, ಆಕ್ರೋಶ ವ್ಯಕ್ತಪಡಿಸಿದ ಮುಫ್ತಿ, ಅಪ್ರಾಪ್ತರ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ನೀಡುವ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕಿದೆ ಎಂದು ಹೇಳಿದ್ದರು.
ಈ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗುವವರಿಗೆ ಅತ್ಯುಗ್ರ ಶಿಕ್ಷೆ ನೀಡುವುದಾಗಿ ಈಗಾಗಲೇ ಮುಫ್ತಿ ಹೇಳಿದ್ದಾರೆ.
ಕಾಮುಕರಿಗೆ ಬಲಿಯಾದ ಮುಗ್ಧ ಬಾಲಕಿ ಪರ ಒಗ್ಗೂಡಿದ ಧ್ವನಿ
ಜನವರಿ ತಿಂಗಳಿನಲ್ಲಿ ಜಮ್ಮು ಕಾಶ್ಮೀರದ ಕತುವಾ ಪ್ರದೇಶದಲ್ಲ ಎಂಟು ವರ್ಷದ ಮಗುವನ್ನು ಅಪಹರಿಸಿ, ಆಕೆಗೆ ಮತ್ತು ಬರುವ ಔಷಧ ನೀಡಿ, ಹಲವು ದಿನಗಳ ಕಾಲ ದೇವಾಲಯವೊಂದರಲ್ಲಿಟ್ಟು ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ನಂತರ ಆಕೆಯನ್ನು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 60 ವರ್ಷದ ನಿವೃತ್ತ ಸರ್ಕಾರಿ ನೌಕರ ಮತ್ತು ಓರ್ವ ಪೊಲಿಸ್ ಅಧಿಕಾರಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ. ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(SIT)ವನ್ನು ರಚಿಸಿದೆ.