ವಾಜಪೇಯಿ ನೆನೆದು ಮೋದಿ ವಿರುದ್ಧ ಹರಿಹಾಯ್ದ ಮೆಹಬೂಬ ಮುಫ್ತಿ
ಜಮ್ಮು, ಜುಲೈ 30: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಅವಧಿಯ ಕಾಲವನ್ನು ಸ್ಮರಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾಗಿ ಅಲವತ್ತುಕೊಂಡಿದ್ದಾರೆ.
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) 19ನೇ ಸಂಸ್ಥಾಪನಾ ದಿನಾಚರಣೆ ವೇಳೆ ಸೋಮವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಿಡಿಪಿ ಒಡೆದರೆ ಉಗ್ರರು ಹುಟ್ಟುತ್ತಾರೆ: ಮುಫ್ತಿ ಹೇಳಿಕೆಗೆ ವ್ಯಾಪಕ ಖಂಡನೆ
ಈ ಸಂದರ್ಭದಲ್ಲಿ ಅವರು ಕಳೆದುಕೊಂಡಿರುವ ನೆಲೆಯನ್ನು ಮತ್ತೆ ಮರಳಿ ಪಡೆಯುವ ಪ್ರಯತ್ನವನ್ನು ಬಲಪಡಿಸುವುದಾಗಿ ಹೇಳಿದರು.
ಬಳಿಕ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಯಾಗಿ ಸಮ್ಮಿಶ್ರ ಸರ್ಕಾರ ನಡೆಸುವ ವೇಳೆ ಎದುರಾದ ಸಂಕಷ್ಟಗಳು ಮತ್ತು ತೊಂದರೆಗಳ ಕುರಿತು ಹೇಳಿಕೊಂಡರು.
ವಾಜಪೇಯಿ ಆಡಳಿತದಲ್ಲಿ ಸಮೃದ್ಧಿ
'ವಾಜಪೇಯಿ ಅವರ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದರೂ, ಪಿಡಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರವು ಸಮೃದ್ಧವಾಗಿತ್ತು.
'ಮುಫ್ತಿ ಸಾಹೇಬ್ ಮತ್ತು ಅವರ ಸರ್ಕಾರದ ಅವಧಿ ರಾಜ್ಯದ ಸುವರ್ಣಕಾಲವಾಗಿತ್ತು. ಈ ಅವಧಿಯಲ್ಲಿ ಸರ್ಕಾರ ಅಭಿವೃದ್ಧಿ ಹೊಂದಿತು ಮತ್ತು ಸಮೃದ್ಧವಾಗಿತ್ತು.
ಉಗ್ರರ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿದ್ದವು ಮತ್ತು ಶಾಂತಿ ನೆಲೆಸಿತ್ತು. ಗಡಿಯಲ್ಲಿ ಕದನವಿರಾಮ ಇತ್ತು. ರಸ್ತೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದೆವು ಎಂದು ಮುಫ್ತಿ, ವಾಜಪೇಯಿ ಅವರ ಆಡಳಿತಾವಧಿಯನ್ನು ನೆನೆಸಿಕೊಂಡಿದ್ದಾರೆ.
ಆದರೆ, ಮೈತ್ರಿ ಅಂತ್ಯಗೊಳ್ಳುತ್ತಿದ್ದಂತೆ ಹಾಗೂ ಸರ್ಕಾರ ಬದಲಾಗುತ್ತಿದ್ದಂತೆಯೇ ಶಾಂತಿ ನೆಲೆಸುವ ಕೆಲಸಗಳು ಸ್ಥಗಿತಗೊಂಡವು ಎಂದಿದ್ದಾರೆ.
ಮೋದಿ ಆಡಳಿತದಲ್ಲಿ ಸಂಕಷ್ಟ
ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಅವರೊಂದಿಗೆ ಉತ್ತಮ ಹೊಂದಾಣಿಕೆ ಇದ್ದ ಕಾರಣ 2015ರಲ್ಲಿ ಬಿಜೆಪಿ ಜತೆ ಕೈಜೋಡಿಸಲು ಮುಫ್ತಿ ಸಾಹೇಬರು (ಮುಫ್ತಿ ಮಹಮ್ಮದ್ ಸಯೀದ್) ಒಪ್ಪಿಕೊಂಡಿದ್ದರು.
ಆದರೆ, ಈ ಸಂದರ್ಭದಲ್ಲಿ (ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದು) ಇದು ಅತ್ಯಂತ ಕ್ಲಿಷ್ಟಕರ ನಿರ್ಧಾರವಾಗಿತ್ತು. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದೆಂದರೆ ವಿಷ ಕುಡಿದಂತೆ. ಮೈತ್ರಿಯ ಎರಡು ವರ್ಷ, ಎರಡು ತಿಂಗಳ ಅವಧಿಯಲ್ಲಿ ತುಂಬಾ ಸಂಕಷ್ಟ ಅನುಭವಿಸಿದ್ದೇನೆ' ಎಂದು ಮುಫ್ತಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಮಾತ್ರ ರಾಜ್ಯಪಾಲರ ಆಳ್ವಿಕೆ ಏಕೆ?
ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯ
'ಎರಡು ವರ್ಷದಲ್ಲಿ ನಾನೇನು ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ನಡುವೆ ನಾನು ತಾರತಮ್ಯ ಮಾಡಿಲ್ಲ.
ಎರಡೂ ಭಾಗಗಳಲ್ಲಿ ಸಮಾನ ಸಂಖ್ಯೆಯ ಕಾಲೇಜುಗಳನ್ನು ಆರಂಭಿಸಿದೆವು. ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರ ಇರಲಿಲ್ಲ' ಎಂದ ಮೆಹಬೂಬ, ಮೂಲಸೌಕರ್ಯ ಮತ್ತು ಅಭಿವೃದ್ಧಿಯಲ್ಲಿ ತಾರತಮ್ಯ ಎಸಗಲಾಗಿತ್ತು ಎಂಬ ಆರೋಪಕ್ಕೆ ಪ್ರತಿಯಾಗಿ ಪಕ್ಷದ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದರು.
ಅಧಿಕಾರಕ್ಕಾಗಿ ಸರ್ಕಾರ ರಚಿಸಿದ್ದಲ್ಲ
'ಮೈತ್ರಿ ಸರ್ಕಾರದ ಎರಡು ವರ್ಷದ ಆಡಳಿತದಲ್ಲಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ. ಆಗ ನಾನು ಎಂದಿಗೂ ಮಾತನಾಡಿರಲಿಲ್ಲ. ಆದರೆ, ಇಂದು ಮಾತನಾಡುತ್ತಿದ್ದೇನೆ. ಇದನ್ನು ತಡೆದಿಟ್ಟುಕೊಳ್ಳುವುದಿಲ್ಲ' ಎಂದು ತಿಳಿಸಿದರು.
ತಮ್ಮ ಆಡಳಿತದ ಕುರಿತಾದ ಅನುಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಮೇಲೆಯೂ ಹೊರೆ ಹಾಕಲಿಲ್ಲ. ರಾಜ್ಯದ ಒಳಿತಿಗಾಗಿ ಕೆಲಸ ಮಾಡಲು ಬದ್ಧಳಾಗಿದ್ದೆ. ಮೈತ್ರಿ ಅಂತ್ಯಗೊಂಡರೂ ನಾವು ಅದರ ಬಗ್ಗೆ ಬೇಸರಪಟ್ಟುಕೊಳ್ಳಲಿಲ್ಲ.
ಏಕೆಂದರೆ, ನಾವು ಅಧಿಕಾರಕ್ಕೆ ಬರುವ ಸಲುವಾಗಿ ಮೈತ್ರಿ ಮಾಡಿಕೊಂಡಿರಲಿಲ್ಲ. ನಮಗೆ ಬಹುದೊಡ್ಡ ಗುರಿಯಿತ್ತು, ಅದು ರಾಜ್ಯದ ಅಭಿವೃದ್ಧಿ ಎಂದು ಮೆಹಬೂಬ ಮುಫ್ತಿ ಹೇಳಿದ್ದಾರೆ.
ಬಿಜೆಪಿಯು ಕಾಶ್ಮೀರದಲ್ಲಿ ಸರಕಾರ ಕೆಡವಿದ ನಂತರ ಯಾರು, ಏನು ಹೇಳಿದರು?
ಕತುವಾ ಅತ್ಯಾಚಾರಕ್ಕೆ ಕೋಮುವಾದಿ ಬಣ್ಣ
ಕತುವಾ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡಿದ ಅವರು, ಅತ್ಯಾಚಾರಿಗೆ ಯಾವುದೇ ಧರ್ಮವಿಲ್ಲ. ಈ ಘಟನೆಗೆ ಕೋಮು ಬಣ್ಣ ಹಚ್ಚುವವರು ಧೈರ್ಯಶಾಲಿ ಡೋಗ್ರಾ ಸಮುದಾಯದ ಶೌರ್ಯವನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್-ಪಿಡಿಪಿ ಮೈತ್ರಿ ಸರ್ಕಾರ
2002ರಲ್ಲಿ ರಾಜ್ಯದಲ್ಲಿ ಪಿಡಿಪಿ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚಿಸಿದ್ದವು. ಮುಫ್ತಿ ಮಹಮ್ಮದ್ ಸಯೀದ್ ಅವರು ಮುಖ್ಯಮಂತ್ರಿಯಾದರು. ಆದರೆ, ಮುಖ್ಯಮಂತ್ರಿ ಹುದ್ದೆಯು ಎರಡೂ ಪಕ್ಷಗಳ ನಡುವೆ ಹಂಚಿಕೆಯಾಗಬೇಕು ಎನ್ನುವ ಒಪ್ಪಂದ ನಡೆದಿತ್ತು.
ಹೀಗಾಗಿ ಆರು ವರ್ಷದ ರಾಜ್ಯ ವಿಧಾನಸಭೆಯಲ್ಲಿ ಮೊದಲ ಮೂರು ವರ್ಷ ಮುಫ್ತಿ ಹಾಗೂ 2005-08ರವರೆಗೆ ಕಾಂಗ್ರೆಸ್ನ ಗುಲಾಂ ನಬಿ ಆಜಾದ್ ಮುಖ್ಯಮಂತ್ರಿಯಾಗಿದ್ದರು. ಆಗ ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಸರ್ಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು.