ಮೇಘಾಲಯದಲ್ಲಿ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮಂತ್ರ ಪಠಿಸಿದ ಮೋದಿ
ಶಿಲ್ಲಾಂಗ್, ಫೆಬ್ರವರಿ 23: ಮೇಘಾಲಯದಲ್ಲಿ ಗುರುವಾರ ಭರ್ಜರಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಆಡಳಿತರೂಢ ಕಾಂಗ್ರೆಸ್ ಸರಕಾರದ ಮೇಲೆ ಹರಿಹಾಯ್ದರು. ಇಲ್ಲಿ ಸರಕಾರ ಜನರನ್ನು ಕಡೆಗಣಿಸಿ ತಾವು ಆಡಿದ್ದೇ ಆಟ ಎಂದುಕೊಂಡಿದೆ. ರಾಜಕೀಯ ಎದುರಾಳಿಗಳಿಲ್ಲದೆ ಇರುವುದರಿಂದ ಹೀಗೆ ಆಟವಾಡುತ್ತಿವೆ ಎಂದು ಕಿಡಿಕಾರಿದರು.
ಫುಲ್ಬಾರಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಸರಕಾರದಿಂದ ಯಾವುದೇ ಉಪಯೋಗವಿಲ್ಲ. ಬಿಜೆಪಿಗೆ ಒಂದು ಅವಕಾಶ ನೀಡಿ ಎಂದು ಕೇಳಿಕೊಂಡರು.
'ಪ್ರಜಾಪ್ರಭುತ್ವವವನ್ನೇ ಕಣ್ಮರೆ ಮಾಡಬಹುದಾದ ಜಾದೂಗಾರ ಮೋದಿ'
"ರಾಜ್ಯದಲ್ಲಿ ಆಡಳಿತ ನಡೆಸಲು ನಮಗೂ ಒಂದು ಅವಕಾಶ ನೀಡಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವದಂತೆ ನಾವು ಆಡಳಿತ ನಡೆಸುತ್ತೇವೆ. ಹಾಲಿ ಸರಕಾರ ನಿಮ್ಮ 50 ವರ್ಷಗಳನ್ನು ಸುಮ್ಮನೆ ವ್ಯರ್ಥ ಮಾಡಿದೆ. ನಮಗೆ ಮತ ನೀಡಿ ಎಂದು ನಾನು ಕೇಳೀಕೊಳ್ಳುತ್ತೇನೆ," ಎಂದು ಪ್ರಧಾನಿ ಹೇಳಿದರು.
"ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಾವು 1,100 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ರೂ. 470 ಕೋಟಿ ರೂಪಾಯಿ ಹಣ ನೀಡಿದ್ದೆವು. ಆದರೆ ಹಾಲಿ ಮೇಘಾಲಯ ಸರಕಾರಕ್ಕೆ ಇದರ ಅರ್ಧದಷ್ಟನ್ನೂ ಬಳಸಿಕೊಳ್ಳಲಾಗಿಲ್ಲ. ನಾವು 180 ಕೋಟಿ ರುಪಾಯಿ ವೆಚ್ಚದಲ್ಲಿ ಶಿಲ್ಲಾಂಗ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇದರಿಂದ ಉದ್ಯಮ ಅಭಿವೃದ್ಧಿಯಾಗಲಿದ್ದು ಒಂದು ತಲೆಮಾರಿಗೆ ಉದ್ಯೋಗ ಸಿಗಲಿದೆ," ಎಂದರು.
ತ್ರಿಪುರ: ಮಾಣಿಕ್ ಅಧಿಪತ್ಯಕ್ಕೆ ಅಂತ್ಯ ಹಾಡಲು ಮೋದಿ ಕರೆ
"ನಾವು ಮೇಘಾಲಯದಲ್ಲಿ 21,000 ಮನೆ ನಿರ್ಮಾಣಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಅನುದಾನ ನೀಡಿದ್ದೆವು. ಆದರೆ ಅಗತ್ಯದಷ್ಟು ಮನೆ ನಿರ್ಮಾಣ ಮಾಡುವಲ್ಲಿ ಸರಕಾರ ವಿಫಲವಾಗಿದೆ," ಎಂದು ಅವರು ದೂರಿದರು.
ಶಿಕ್ಷಕರ ನೇಮಕದಲ್ಲಿ ಹಾಲಿ ಸರಕಾರ ಭ್ರಷ್ಟಾಚಾರ ನಡೆಸಿದೆ. ಈ ಸರಕಾರವನ್ನು ಕಿತ್ತೊಗೆಯಿರಿ ಎಂದು ಅವರು ಅಬ್ಬರಿಸಿದರು. ನಾವು 'ಆ್ಯಕ್ಟ್ ಈಸ್ಟ್ ಪಾಲಿಸಿ'ಯನ್ನು ಮತ್ತಷ್ಟು ಬಲಗೊಳಿಸಲಿದ್ದೇವೆ. ಇದು ಸಂಪೂರ್ಣ ಈಶಾನ್ಯ ಭಾರತದಲ್ಲಿ ಬದಲಾವಣೆ ತರಲಿದೆ. ಜನರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ಅವರು ವಿವರಿಸಿದರು.
ಮೇಘಾಲಯ: ಮತದಾರರ ಮೋಡಿ ಮಾಡಲು ಮೋದಿ 'ಮ್ಯೂಸಿಕ್'
"ಮೇಘಾಲಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಆದರೆ ಪ್ರವಾಸಿಗರಿಲ್ಲದೆ ಈ ಕ್ಷೇತ್ರ ಸೊರಗಿದೆ. ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯ ಸರಕಾರ ಏನನ್ನೂ ಮಾಡಿಲ್ಲ. ನಾವು ಇಲ್ಲಿಗೆ ಹೆಚ್ಚಿನ ಪ್ರವಾಸಿಗರನ್ನು ಕರೆತರುವ ಭರವಸೆ ನಿಡುತ್ತೇವೆ," ಎಂದು ಅವರು ತಿಳಿಸಿದರು.
ಇನ್ನು ಹಾಲಿ ಮುಖ್ಯಮಂತ್ರಿ ವೈದ್ಯರಾದರೂ ರಾಜ್ಯದ ಆರೋಗ್ಯ ಕ್ಷೇತ್ರ ಪೂರ್ತಿ ಹದಗೆಟ್ಟಿದೆ. ತಾಯಂದಿರು ಮನೆಯಲ್ಲೇ ಹೆರಿಗೆಗೆ ಒಳಗಾಗುತ್ತಿದ್ದಾರೆ. ನಾವು ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಫೆಬ್ರವರಿ 27ರಂದು ಮೇಘಾಲಯದ 60 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾರ್ಚ್ 3 ರಂದು ಫಲಿತಾಂಶ ಹೊರ ಬೀಳಲಿದೆ. 2013ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ 29, ಎನ್ ಸಿಪಿ 2, ಯುಡಿಪಿ 8, ಎನ್ ಪಿಪಿ 2, ಎಚ್ಎಸ್ ಪಿಡಿಪಿ 4 ಮತ್ತು ಇತರರು 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಒಂದೂ ಸ್ಥಾನ ಗೆದ್ದಿರಲಿಲ್ಲ. ಹೀಗಿದ್ದೂ ಈ ಬಾರಿ ಅಧಿಕಾರಕ್ಕೇರುವ ಹವಣಿಕೆಯಲ್ಲಿದೆ ಕೇಸರಿ ಪಕ್ಷ.