ರಾಷ್ಟ್ರಪತಿ, ರಾಜ್ಯಸಭೆ ಚುನಾವಣೆ: ಬಿಜೆಪಿ ಸರಣಿ ಸಭೆ
ನವದೆಹಲಿ ಮೇ 24: ಮುಂಬರುವ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಚುನಾವಣೆ ಪೂರ್ವಭಾವಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಸೋಮವಾರ 4 ಗಂಟೆಗಳ ಕಾಲ ಸುಧೀರ್ಘ ಸಭೆ ನಡೆಸಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧಿಕಾರವಧಿ ಜುಲೈ 25ರಂದು ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ನಂತರ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಪ್ರತಿಪಕ್ಷವು ಪ್ರತ್ಯೇಕವಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಮುಂಬರುವ 2024 ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಗೆಲುವು ದಿಕ್ಸೂಚಿ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಗೆ ಹಾರ್ದಿಕ್ ಪಟೇಲ್ ದುಷ್ಮನ್ ಕಾ ದುಷ್ಮನ್, 'ದೋಸ್ತ್'
ಜೂನ್ 10ರಂದು ಉಮೇದುವಾರಿಕೆ ಆರಂಭ:
ಜೂನ್ 10 ರಂದು ರಾಜ್ಯಸಭೆಯ 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನಿವಾಸದಲ್ಲಿ ಬಿಜೆಪಿಯ ಉನ್ನತ ನಾಯಕರು ಸಭೆ ನಡೆಸಿದ್ದಾರೆ. ಈ ವೇಳೆ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ, ರಾಜ್ಯಸಭೆ ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕೆಸಿಆರ್-ಶರದ್ ಪವಾರ್ ಭೇಟಿ
ಇನ್ನೂ ಪತ್ರಿಪಕ್ಷಗಳು ಜಂಟಿಯಾಗಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಬೇಕಿದೆ. ಇದಕ್ಕೆ ಪೂರ್ವ ತಯಾರಿಯಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್ ರಾವ್ ಹಾಗೂ ಎನ್ ಪಿಪಿ ಮುಖ್ಯಸ್ಥ ಶರದ್ ಪವಾರ್ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಅನ್ನು ಹೊರಗಿಟ್ಟು ರಾಷ್ಟ್ರಪತಿ ಅಭ್ಯರ್ಥಿ ಘೋಷಣೆಗೆ ಕಸರತ್ತು ನಡೆಸಲಾಗುತ್ತಿದೆ. ಆದರೆ ಪ್ರತಿಪಕ್ಷ ಅಭ್ಯರ್ಥಿ ಜಯಗಳಿಸಬೇಕಾದರೆ ಕಾಂಗ್ರೆಸ್ ಬೆಂಬಲವೂ ಅಗತ್ಯ.
ಕಾಂಗ್ರೆಸ್ ಯೇತರ ತೃತೀಯ ರಂಗ ರಚನೆಗೆ ಮುಂದು
2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸೇತರ, ಬಿಜೆಪಿಯೇತರ ತೃತೀಯ ರಂಗ ರಚನೆಗೆ ಕೆಸಿಆರ್ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಸಿಆರ್, ಅದಕ್ಕೆ ಅಡಿಪಾಯವಾಗಿ ಪ್ರತಿಪಕ್ಷಗಳನ್ನು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಬಿಜೆಪಿಗೆ ಒಂದು ಪಕ್ಷದ ಬೆಂಬಲ ಅಗತ್ಯ
ಸಂಸದರು ಮತ್ತು ಶಾಸಕರ ಮತಗಳು ಸೇರಿದಂತೆ ಬಿಜೆಪಿ ಬಳಿ ಶೇ.48.9 ರಷ್ಟು ಮತಗಳಿವೆ. ಪ್ರತಿಪಕ್ಷಗಳು ಮತ್ತು ಇತರೆ ಪಕ್ಷಗಳ ಬಳಿ ಶೇ.51.1 ರಷ್ಟು ಮತಗಳಿವೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ (ಬಿಜು ಜನತಾ ದಳ) ಅಥವಾ ಅಥವಾ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ತನ್ನ ಅಭ್ಯರ್ಥಿಗೆ ಬಿಜೆಪಿ ಬೆಂಬಲ ಪಡೆಯಬೇಕಿದೆ.
ಉದ್ಧವ್ ಠಾಕ್ರೆ ಅವರೊಂದಿಗೆ ಕೆಸಿಆರ್ ಮಾತುಕತೆ
ಕಳೆದ ವಾರ ಕೆಸಿಆರ್ ದೆಹಲಿ ಮುಖ್ಯಯಮಂತ್ರಿ ಅರವಿಂದ ಕೇಜ್ರಿವಾಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅಲ್ಲದೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್ರನ್ನು ಪೋನ್ ಮೂಲಕ ಸಂಪರ್ಕಿಸಿದ್ದರು. ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಭೇಟಿಯಾಗುವ ನಿರೀಕ್ಷೆಯಿದೆ.
ನಿತೀಶ್ ಕುಮಾರ್ ನಡೆ ನಿಗೂಢ ?
ಎನ್ಡಿಎಯೊಂದಿಗೆ ನಿತೀಶ್ ಕುಮಾರ್ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಕಳೆದ ಹಲವು ರಾಷ್ಟ್ರಪತಿ ಚುನಾವಣೆಗಳಲ್ಲಿ ಎನ್ಡಿಎ ಅಭ್ಯರ್ಥಿಯನ್ನು ನಿತೀಶ್ ಬೆಂಬಲಿಸಿಲ್ಲ. ಇನ್ನೊಂದೆಡೆ ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸಿ ನಿತೀಶ್ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಆದರೆ ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಸಂಬಂಧ ನಿತೀಶ್ ಕುಮಾರ್ ನಡೆ ನಿಗೂಢವಾಗಿದೆ.