ಬಿಜೆಪಿಯೇತರ ಸಿಎಂಗಳ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ನವದೆಹಲಿ, ಆಗಸ್ಟ್ 26: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಬಿಜೆಪಿಯೇತರ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಆನ್ಲೈನ್ ಸಭೆ ನಡೆಸಿದರು. ಇದರಲ್ಲಿ ನಾಲ್ಕು ಕಾಂಗ್ರೆಸ್ ಮುಖ್ಯಮಂತ್ರಿಗಳು ಹಾಗೂ ಮೂವರು ಕಾಂಗ್ರೆಸ್ಸೇತರ ಪಕ್ಷಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಅನೇಕರು ಕೊರೊನಾ ವೈರಸ್ ಭೀತಿಯ ನಡುವೆಯೇ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಕಳವಳ ವ್ಯಕ್ತವಾಯಿತು. ಜತೆಗೆ ಇದುವರೆಗೂ ಜಿಎಸ್ಟಿಯ ರಾಜ್ಯವಾರು ಹಂಚಿಕೆಯನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಸುಪ್ರೀಂಕೋರ್ಟ್ಗೆ ಹೋಗೋಣ ಬನ್ನಿ: ಮುಖ್ಯಮಂತ್ರಿಗಳಿಗೆ ಮಮತಾ ಬ್ಯಾನರ್ಜಿ ಕರೆ
ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಮಮತಾ ಬ್ಯಾನರ್ಜಿ, ಈ ಸಂಕಷ್ಟದ ಸಮಯದಲ್ಲಿ ನಾವು ಉಚಿತವಾಗಿ ಒದಗಿಸುತ್ತಿರುವ ಎಲ್ಲ ಸೇವೆಗಳಿಗೆ ಪಾವತಿಸಬೇಕಾದ ಹಣ ಎಲ್ಲಿದೆ? ನಾವು ವೆಂಟಿಲೇಟರ್, ವೈದ್ಯಕೀಯ ಸವಲತ್ತುಗಳ ಮೇಲೆ ಭಾರಿ ಹಣವನ್ನು ವ್ಯಯಿಸಿದ್ದೇವೆ. ಕೆಲಸಗಾರರಿಗೆ ವೇತನ ನೀಡಬೇಕಿದೆ. ಹಣಕಾಸಿನ ಚಟುವಟಿಕೆಯನ್ನು ನಿರ್ವಹಿಸುವುದು ಬಹಳ ಕಷ್ಟಕರವಾಗಿದೆ ಎಂದು ಹೇಳಿದರು. ಮುಂದೆ ಓದಿ.
ರಾಜ್ಯಗಳಿಗೆ ಕೇಂದ್ರದಿಂದ ದ್ರೋಹ
ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತಹ ಘೋಷಣೆಗಳು ನಮಗೆ ದೊಡ್ಡ ಹಿನ್ನಡೆಯಾಗಿದ್ದು, ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ ಇತರೆ ಸಮಸ್ಯೆಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದ ಸೋನಿಯಾ ಗಾಂಧಿ, ರಾಜ್ಯಗಳಿಗೆ ಅವುಗಳ ಪಾಲಿನ ಜಿಎಸ್ಟಿ ಹಣ ನೀಡದೆ ಇರುವುದು ದ್ರೋಹ ಎಂದು ಟೀಕಿಸಿದರು.
ಸುಪ್ರೀಂಕೋರ್ಟ್ಗೆ ಹೋಗಬೇಕಿದೆ
ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಜಿಇಇ-ನೀಟ್ ಪರೀಕ್ಷೆಗಳ ವಿರುದ್ಧ ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸದೆ ಹೋದರೆ ರಾಜ್ಯಗಳು ಸೇರಿಕೊಂಡು ಸುಪ್ರೀಂಕೋರ್ಟ್ಗೆ ಮನವಿ ಮಾಡಬೇಕಾಗಿದೆ. ಇಂತಹ ಅನಿಶ್ಚಿತತೆಗಳ ನಡುವೆಯೇ ಕೇಂದ್ರ ಸರ್ಕಾರ ಪರೀಕ್ಷೆಗಳ ದಿನಾಂಕ ಘೋಷಿಸಿದೆ. ರೈಲುಗಳು ಓಡಾಡುತ್ತಿಲ್ಲ. ವಿಮಾನ ಸಂಚಾರವು ಸುಲಭವಲ್ಲ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳಿಗೆ ಹಾನಿ ಮಾಡಲಿದೆ. ಅವರು ಹೇಗೆ ಪರೀಕ್ಷೆಗೆ ಕೂರುತ್ತಾರೆ ಎನ್ನುವುದು ಗೊತ್ತಿಲ್ಲ ಎಂದು ಮಮತಾ ಕಿಡಿಕಾರಿದರು.
ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಬಂಗಾಳಕ್ಕೆ 4,100 ಕೋಟಿ ರೂ ಬಾಕಿ
ಎಲ್ಲ ಮುಖ್ಯಮಂತ್ರಿಗಳೂ ಒಟ್ಟಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೇಂದ್ರದೊಂದಿಗೆ ಜಿಎಸ್ಟಿ ವಿಷಯವನ್ನು ಕೊಂಡೊಯ್ಯಬೇಕಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟರು.
ಬಂಗಾಳ ಸರ್ಕಾರ ಕೇಂದ್ರದಿಂದ 4,100 ಕೋಟಿ ರೂ ಬರುವುದು ಬಾಕಿ ಇದೆ. ಆದರೆ ಇದುವರೆಗೂ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ ಎಂದು ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದರು. ಆಗಸ್ಟ್ 27ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ಈ ಸಭೆಯಲ್ಲಿ ಜಿಎಸ್ಟಿ ಹಂಚಿಕೆ ಕುರಿತು ಚರ್ಚೆ ನಡೆದಿದೆ.
ಒಬ್ಬರಿಂದಲೇ ನಿಯಂತ್ರಣ
'ಸಂವಿಧಾನವು ನಮಗೆ ಒಕ್ಕೂಟ ರಚನೆಯ ಭರವಸೆ ನೀಡಿದೆ. ಆದರೆ ನಾವು ಪ್ರತಿಯೊಂದನ್ನೂ ಒಬ್ಬನೇ ವ್ಯಕ್ತಿ ನಿಯಂತ್ರಿಸುವ ವ್ಯವಸ್ಥೆಯತ್ತ ಸಾಗುತ್ತಿದ್ದೇವೆ. ರಾಜ್ಯ ಸರ್ಕಾರಗಳ ಪ್ರಸ್ತುತತೆಯನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ' ಎಂದು ಉದ್ಧವ್ ಠಾಕ್ರೆ ಕಿಡಿಕಾರಿದರು. ಜೂನ್ ತಿಂಗಳಲ್ಲಿ ನಮಗೆ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದೆ ಇದ್ದಾಗ, ಈಗ ಹೇಗೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರು.
NEET, JEE ಪರೀಕ್ಷೆ ಆಯೋಜನೆ ಈಗ ಏಕೆ? ಸ್ವಾಮಿ ಪ್ರಶ್ನೆ
ಪರೀಕ್ಷೆ ನಡೆದರೆ ಕೋವಿಡ್ ಹೆಚ್ಚಳ
ರಾಜ್ಯ ಸರ್ಕಾರಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಅಧಿಕ ತೈಲ ಬೆಲೆಯಿಂದ ಜನಸಾಮಾನ್ಯರ ಜೀವನ ತತ್ತರಿಸಿದೆ. ಜತೆಗೆ ನಿರುದ್ಯೋಗ ಮತ್ತು ಇತರೆ ಸಮಸ್ಯೆಗಳು ಅವರನ್ನು ಕಾಡುತ್ತಿದೆ ಎಂದು ಆರೋಪಿಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ನೀಟ್ ಮತ್ತು ಜೆಇಇ ಪರೀಕ್ಷೆಗಳು ನಡೆದರೆ ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಗುಂಪು ಗುಂಪಾಗಿ ಪರೀಕ್ಷಾ ಕೇಂದ್ರಗಳಿಗೆ ಬರುವಂತಾಗುತ್ತದೆ. ಇದು ಕೊರೊನಾ ವೈರಸ್ ಹರಡುವ ಭಾರಿ ಅಪಾಯಕ್ಕೆ ಎಡೆಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಬಳಿ ಹಣವೇ ಇಲ್ಲ
ಕೇಂದ್ರ ಸರ್ಕಾರವು ರಾಜ್ಯಗಳ ಪಾಲಿನ ಜಿಎಸ್ಟಿ ಹಣವನ್ನು ಬಿಡುಗಡೆ ಮಾಡಿಲ್ಲ. ಕೊರೊನಾ ವೈರಸ್ ಈಗ ನಗರಗಳಿಂದ ಹಳ್ಳಿಗಳಿಗೆ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲದಂತಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದರು.
ಕೊರೊನಾ ವೈರಸ್ ಸಂಕಷ್ಟವನ್ನು ನಿರ್ವಹಿಸಲು ಪಂಜಾಬ್ ಸರ್ಕಾರ ಇದುವರೆಗೂ 500 ಕೋಟಿ ರೂ ವ್ಯಯ ಮಾಡಿದೆ. ಆದರೆ ಕೇಂದ್ರ ಸರ್ಕಾರ 30 ಕೋಟಿ ರೂ ನೀಡುವುದಾಗಿ ಭರವಸೆ ನೀಡಿದೆ. ಮುಂದೇನಾಗುವುದೋ ನಮಗೆ ತಿಳಿದಿಲ್ಲ ಎಂದರು.
ಸಿಕ್ಕಿರುವುದು ಸಭೆ ಮಾತ್ರ
'ವಿಡಿಯೋ ಕಾನ್ಫರೆನ್ಸ್ಗಳ ಹೊರತಾಗಿ ರಾಜ್ಯಗಳಿಗೆ ಕೇಂದ್ರದಿಂದ ಏನೂ ಸಿಗುತ್ತಿಲ್ಲ' ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಸಮಾಧಾನ ವ್ಯಕ್ತಪಡಿಸಿದರು. ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಪುದುಚೆರಿಯ ವಿ. ನಾರಾಯಣಸಾಮಿ ಸಭೆಯಲ್ಲಿ ಹಾಜರಿದ್ದರು.