ಅಯೋಧ್ಯೆ ಭೂ ವಿವಾದ, ಸುಪ್ರೀಂಕೋರ್ಟಿನಲ್ಲಿಂದು ಮಹತ್ವದ ವಿಚಾರಣೆ
ನವದೆಹಲಿ, ಆಗಸ್ಟ್ 02: ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿರುವ ಸಂಧಾನಕಾರರು ತಮ್ಮ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟಿಗೆ ಸಲ್ಲಿಸಿದ್ದಾರೆ.
ಗುರುವಾರ(ಆಗಸ್ಟ್ 01)ದಂದು ವರದಿ ಸ್ವೀಕರಿಸಿದ ನ್ಯಾಯಪೀಠವು, ಶುಕ್ರವಾರ ಆಗಸ್ಟ್ 02ರಂದು ಈ ಬಗ್ಗೆ ತೀರ್ಪು ನೀಡಲಿದೆ. ಈ ಹಿಂದೆ ಜುಲೈ 18ರಂದು ಮೊದಲ ವರದಿ ಪಡೆಯಲಾಗಿತ್ತು. ಆದರೆ, ಜುಲೈ 31ರ ತನಕ ಸಂಧಾನಕಾರರು ತಮ್ಮ ಸಂಧಾನಸಭೆಗಳನ್ನು ನಡೆಸಬಹುದು ಎಂದು ಸೂಚಿಸಲಾಗಿತ್ತು.
ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಸಂಧಾನ ಪ್ರಗತಿ ವರದಿಯನ್ನು ಪರಿಶೀಲಿಸಿ, ವಿಚಾರಣೆಯನ್ನು ಆಗಸ್ಟ್ 02ಕ್ಕೆ ಮುಂದೂಡಿತ್ತು.
ಅಯೋಧ್ಯೆ- ಬಾಬ್ರಿ ಮಸೀದಿ ಭೂ ವಿವಾದದ ಟೈಮ್ ಲೈನ್
ಈ ಪ್ರಕರಣವನ್ನು ಮಾತುಕತೆಯ ಮೂಲಕ ಆಗಸ್ಟ್ 15ರೊಳಗೆ ಪರಿಹಾರ ಕಂಡುಕೊಳ್ಳುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠವು ಮಧ್ಯಸ್ಥಿಕೆ ಸಂಧಾನಕಾರರಿಗೆ ಸೂಚಿಸಲಾಗಿತ್ತು. ಆದರೆ, ಸಂಧಾನ ಪ್ರಕ್ರಿಯೆ ವಿಳಂಬವಾಗಿದ್ದು, ಸರಿಯಾದ ಮಾರ್ಗದಲ್ಲಿ ಸಾಗುತ್ತಿಲ್ಲ, ಕೋರ್ಟ್ ಮೂಲಕವೇ ನ್ಯಾಯ ಪಡೆಯುವುದೊಂದೇ ಪರಿಹಾರ ಎಂದು ಅರ್ಜಿದಾರ ಗೋಪಾಲ್ ಸಿಂಗ್ ವಿಶಾರದ್ ಹೇಳಿದ್ದರು.
ಅಯೋಧ್ಯೆ ವಿವಾದ : ಸುಪ್ರೀಂ ನೇಮಿಸಿರುವ ಮೂವರು ಸಂಧಾನಕಾರರು ಯಾರು?
ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದುಮ್ ಈ ಸಮಿತಿ ನೀಡಿದ ವರದಿ ಮೇಲೆ ವಿಚಾರಣೆ ನಡೆಯಲಿದೆ.