ರೈತರ ಪ್ರತಿಭಟನೆ ವಿವಾದ: ಸರ್ಕಾರದ ಪ್ರಯತ್ನ ಶ್ಲಾಘಿಸಿದ ಕೆನಡಾ ಪ್ರಧಾನಿ ಟ್ರುಡೋ
ನವದೆಹಲಿ, ಫೆಬ್ರವರಿ 12: ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಯ ಕಗ್ಗಂಟನ್ನು ಬಗೆಹರಿಸಲು ನಡೆಸುತ್ತಿರುವ ಪ್ರಯತ್ನವನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಶ್ಲಾಘಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು. ಕೆನಡಾಕ್ಕೆ ಕೋವಿಡ್ ಲಸಿಕೆಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಬಗ್ಗೆ ಕೂಡ ಚರ್ಚಿಸಿದರು ಎನ್ನಲಾಗಿದೆ.
ಕೋವಿಡ್ ಲಸಿಕೆ ಕಳಿಸಿಕೊಡಿ: ಮೋದಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮನವಿ
'ಪ್ರಧಾನಿ ಟ್ರುಡೋ ಅವರು ರೈತರ ಪ್ರತಿಭಟನೆಯ ವಿಚಾರದಲ್ಲಿ, ಪ್ರಜಾಪ್ರಭುತ್ವದಲ್ಲಿ ಯೋಗ್ಯವಾದ ಮಾತುಕತೆಯ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಭಾರತ ಸರ್ಕಾರದ ಪ್ರಯತ್ನವನ್ನು ಶ್ಲಾಘಿಸಿದರು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಟ್ರುಡೋ ಅವರು ಕೆನಡಾದಲ್ಲಿರುವ ಭಾರತದ ರಾಜಭಾರ ಕಚೇರಿ ಆವರಣ ಮತ್ತು ಸಿಬ್ಬಂದಿಗೆ ರಕ್ಷಣೆ ಒದಗಿಸುವುದು ತಮ್ಮ ಸರ್ಕಾರದ ಜವಾಬ್ದಾರಿ ಎಂಬುದನ್ನು ಕೂಡ ಒಪ್ಪಿಕೊಂಡರು' ಎಂದಿದ್ದಾರೆ.
ಉಭಯ ದೇಶಗಳು ಪ್ರಜಾಪ್ರಭುತ್ವದ ತತ್ವಗಳು, ಇತ್ತೀಚಿನ ಪ್ರತಿಭಟನೆಗಳು ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮಹತ್ವ ಸೇರಿದಂತೆ ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಚರ್ಚೆ ನಡೆಸಿದ್ದಾಗಿ ಟ್ರುಡೋ ತಿಳಿಸಿದ್ದಾರೆ.
ಕೆನಡಾ ಪ್ರಧಾನಿ ಹೇಳಿಕೆಗೆ ಭಾರತದ ಪ್ರತಿಭಟನೆ: ಹೈಕಮಿಷನರ್ಗೆ ಸಮನ್ಸ್
ರೈತರ ಪ್ರತಿಭಟನೆ ಬೆಂಬಲಿಸಿ ಜಸ್ಟಿನ್ ಟ್ರುಡೋ ಅವರು ಈ ಹಿಂದೆ ಮಾಡಿದ್ದ ಟ್ವೀಟ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. 'ರೈತರ ಪ್ರತಿಭಟನೆಯ ಬಗ್ಗೆ ಭಾರತದಿಂದ ಸುದ್ದಿ ಬರುತ್ತಿದೆ. ಪರಿಸ್ಥಿತಿಯು ಕಳವಳಕಾರಿಯಾಗಿದೆ ಮತ್ತು ಕುಟುಂಬಗಳು ಹಾಗೂ ಸ್ನೇಹಿತರ ಬಗ್ಗೆ ನಮಗೆ ಬಹಳ ಚಿಂತೆಯಾಗುತ್ತಿದೆ. ನಾವು ಮಾತುಕತೆಯ ಮಹತ್ವದ ಬಗ್ಗೆ ನಂಬಿಕೆ ಇರಿಸಿದ್ದೇವೆ. ನಮ್ಮ ಕಳವಳಗಳನ್ನು ತಿಳಿಸಲು ನಾವು ಭಾರತದ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುತ್ತಿದ್ದೇವೆ. ಇದು ನಾವೆಲ್ಲರೂ ಜತೆಗೂಡಬೇಕಾದ ಸಮಯ' ಎಂದು ಟ್ರುಡೋ ಹೇಳಿಕೆ ನೀಡಿದ್ದರು.