ವೇದ, ರಾಮಾಯಣ ಆಯ್ತು, ಉತ್ತರಾಖಂಡ್ನಲ್ಲಿ ಹಿಂದಿ ಮಾಧ್ಯಮ ಎಂಬಿಬಿಎಸ್
ಡೆಹ್ರಾಡೂನ್, ಮೇ 15: ಕೆಲ ದಿನಗಳ ಹಿಂದಷ್ಟೇ ಶಾಲಾ ಪಠ್ಯಕ್ರಮಗಳಲ್ಲಿ ವೇದ, ರಾಮಾಯಣ, ಭಗವದ್ಗೀತೆ ಇತ್ಯಾದಿ ಧಾರ್ಮಿಕ ಗ್ರಂಥಗಳನ್ನು ಅಳವಡಿಸುವ ಯೋಜನೆ ಘೋಷಿಸಿದ್ದ ಉತ್ತರಾಖಂಡ್ ಸರಕಾರ ಇದೀಗ ಹಿಂದಿ ಮಾಧ್ಯಮಗಳಲ್ಲಿ ಎಂಬಿಬಿಎಸ್ ಕೋರ್ಸ್ ನಡೆಸುವ ಚಿಂತೆ ಮಾಡುತ್ತಿದೆ. ಈ ವಿಚಾರವನ್ನು ಇಂದು ಭಾನುವಾರ ಉತ್ತರಾಖಂಡ್ ರಾಜ್ಯ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ತಿಳಿಸಿದ್ದಾರೆ ಎಂದು ದಿ ಪ್ರಿಂಟ್ ವೆಬ್ಸೈಟ್ ವರದಿ ಮಾಡಿದೆ.
ಭಾರತೀಯ ಜ್ಞಾನ ಭಂಡಾರ ಮತ್ತು ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹಾಗು ಮಾತೃಭಾಷೆಯಲ್ಲಿ ಕಲಿಕಾ ವ್ಯವಸ್ಥೆ ರೂಪಿಸಲು ಒತ್ತು ನೀಡುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy) ಅನುಸಾರ ಹಿಂದಿಯಲ್ಲಿ ಎಂಬಿಬಿಎಸ್ ಶಿಕ್ಷಣ ನೀಡುವ ಯೋಜನೆ ರೂಪಿಸುತ್ತಿದ್ದೇವೆ ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ. ಉತ್ತರಾಖಂಡ್ ರಾಜ್ಯದಲ್ಲಿ ಮೂರು ಸರಕಾರಿ ವೈದ್ಯಕೀಯ ಕಾಲೇಜುಗಳಿವೆ. ರಾಜಧಾನಿ ಡೆಹರಾಡೂನ್, ಹಲದ್ವಾನಿ ಮತ್ತು ಋಷಿಕೇಶದಲ್ಲಿ ಮೆಡಿಕಲ್ ಕಾಲೇಜುಗಳಿವೆ. ಋಷಿಕೇಶದಲ್ಲಿ ಏಮ್ಸ್ ಕಾಲೇಜು ಇದೆ. ಉತ್ತರಾಖಂಡ್ ಸರಕಾರದ ಈ ಯೋಜನೆ ಜಾರಿಗೆ ಬಂದರೆ ಈ ಮೂರು ಕಾಲೇಜುಗಳಲ್ಲಿ ಹಿಂದಿಯಲ್ಲಿ ಎಂಬಿಬಿಎಸ್ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಸಿಕ್ಕಲಿದೆ.
ಬೆಂಗಳೂರು; ವೇಗ ಪಡೆದ ಮನೆಗೆ ಪಿಎನ್ಜಿ ಸಂಪರ್ಕಿಸುವ ಯೋಜನೆ
ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ಯಾಕೆ?
ಉತ್ತರಾಖಂಡ್ ರಾಜ್ಯದಲ್ಲಿ ಬಹುತೇಕ ಮಂದಿಗೆ ಹಿಂದಿ ಮಾತೃಭಾಷೆಯಾಗಿದೆ. ಹೀಗಾಗಿ, ಅಲ್ಲಿ ಹಿಂದಿ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. "ಕೇಂದ್ರದ ಹೊಸ ಶಿಕ್ಷಣ ನೀತಿಯ ಆಶಯದಂತೆ ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲು ಬದ್ಧರಾಗಿದ್ದೇವೆ. ಇದರಿಂದ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಸಮನಾಗಿ ಹಿಂದಿ ಮಾಧ್ಯಮದವರು ವೈದ್ಯಕೀಯ ಶಿಕ್ಷಣ ಪಡೆಯಲು ಸಹಾಯವಾಗುತ್ತದೆ" ಎಂದು ಉತ್ತರಾಖಂಡ್ ಶಿಕ್ಷಣ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
"ಸಾಮಾನ್ಯವಾಗಿ ಹಿಂದಿ ಮಾಧ್ಯಮದಲ್ಲಿ ಓದಿ ಬಂದು ಎಂಬಿಬಿಎಸ್ ಕೋರ್ಸ್ ಸೇರಿಕೊಳ್ಳುವ ವಿದ್ಯಾರ್ಥಿಗಳಿಗೆ ಹಲವು ತೊಂದರೆಗಳಿರುತ್ತವೆ. ಇಂಗ್ಲೀಷ್ ಮಾಧ್ಯಮದಲ್ಲೇ ಕಲಿಯುವ ಅನಿವಾರ್ಯತೆ ಅವರಿಗೆ ಇರುತ್ತದೆ" ಎಂದು ಅವರು ವಿವರಿಸಿದ್ದಾರೆ.
ಯಾವಾಗ ಹಿಂದಿ ಮಾಧ್ಯಮ ಕೋರ್ಸ್?
2023-24ರ ಶೈಕ್ಷಣಿಕ ವರ್ಷದಲ್ಲೇ ಹಿಂದಿ ಮಾಧ್ಯಮದಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸುವ ಗುರಿ ಉತ್ತರಾಖಂಡ್ ಸರಕಾರದ್ದಾಗಿದೆ. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ (Action Plan) ರೂಪಿಸಲಾಗುತ್ತಿದ್ದು, ಶೀಘ್ರದಲ್ಲೇ ಅದನ್ನು ಅಂತಿಮಗೊಳಿಸಿ ಕಾರ್ಯರೂಪಕ್ಕೆ ತರುವ ಪ್ರಯತ್ನವಾಗಲಿದೆ ಎಂಬ ಮಾಹಿತಿ ಸದ್ಯ ಮಾಧ್ಯಮಗಳಿಗೆ ಸಿಕ್ಕಿದೆ.
ಕೋರ್ಸ್ ಪಠ್ಯ ಸಿದ್ಧಗೊಳ್ಳಲು ಸಾಧ್ಯವಾ?
ಇನ್ನೊಂದು ವರ್ಷದೊಳಗೆ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣದ ಕ್ಲಿಷ್ಟಕರ ಪಠ್ಯಗಳನ್ನು ರಚಿಸುವ ಕಾರ್ಯ ಸಾಮಾನ್ಯವಲ್ಲ. ಹಿಂದಿ ಮಾತ್ರವಲ್ಲ ಬೇರಾವುದೇ ಭಾರತೀಯ ಭಾಷೆಗಳಲ್ಲೂ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಬೇಕಾದ ಪುಸ್ತಕಗಳು, ಪಠ್ಯಗಳು ಕಡಿಮೆಯೇ. ಎಂಬಿಬಿಎಸ್ನಂಥ ಬಹಳ ಕಷ್ಟಕರ ಮತ್ತು ಮುಖ್ಯವಾದ ಪದವಿ ಶಿಕ್ಷಣಕ್ಕೆ ಹಿಂದಿಯಲ್ಲಿ ಪಠ್ಯ ತಯಾರಿಸುವ ಕಾರ್ಯಕ್ಕೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನದ ಅಗತ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಉತ್ತರಾಖಂಡ್ ಸರಕಾರ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡುವ ವಿಶ್ವಾಸದಲ್ಲಿದೆ.
"ನುರಿತ ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರು ರಾಜ್ಯ ಸರಕಾರದ ಈ ಕೆಲಸದಲ್ಲಿ ಕೈ ಜೋಡಿಸುತ್ತಿದ್ದು ಹಿಂದಿಯಲ್ಲಿ ಪಠ್ಯ ರಚಿಸಲು ನೆರವಾಗುತ್ತಿದ್ದಾರೆ. ಕೇಂದ್ರ ಸರಕಾರ ಮತ್ತು ವೈದ್ಯಕೀಯ ಪರಿಣಿತರ ಸಹಾಯದಿಂದ ಬಹಳ ಯೋಜಿತ ರೀತಿಯಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಹಿಂದಿಯಲ್ಲಿ ತಯಾರಿಸುತ್ತೇವೆ" ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
"ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಸಾಕಷ್ಟು ಅಧ್ಯಯನ ಪಠ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ತಜ್ಞರಿಂದ ಹಿಂದಿಯಲ್ಲಿ ಹೊಸ ಎಂಬಿಬಿಎಸ್ ಪುಸ್ತಕಗಳನ್ನು ರಚಿಸಲಾಗುವುದು" ಎಂದ ಅವರು, ತಮ್ಮ ರಾಜ್ಯದಲ್ಲಿ ಮಾಡಲಾಗುವ ಹಿಂದಿ ಪಠ್ಯ ಪುಸ್ತಕಗಳು ಇತರ ಹಿಂದಿ ಭಾಷಿಕ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತವೆ ಎಂದೂ ಮಾಹಿತಿ ನೀಡಿದ್ದಾರೆ.
ಹಿಂದೂ ಧರ್ಮಶಾಸ್ತ್ರಗಳ ಅಳವಡಿಕೆ
ಶಾಲಾ ಪಠ್ಯಕ್ರಮದಲ್ಲಿ ಹಿಂದೂ ಧರ್ಮಶಾಸ್ತ್ರಗಳ ಪರಿಚಯ ಮಾಡಿಸುವ ಯೋಜನೆಯನ್ನು ಉತ್ತರಾಖಂಡ್ ಈಗಾಗಲೇ ಘೋಷಿಸಿಯಾಗಿದೆ. ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಭಾರತೀಯ ಜ್ಞಾನಭಂಡಾರವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು ಎಂದು ಒಂದೆರಡು ವಾರದ ಹಿಂದೆ ಉತ್ತರಾಖಂಡ್ ಸರಕಾರ ಹೇಳಿತ್ತು.
"ವೇದ, ರಾಮಾಯಣ, ಭಗವದ್ಗೀತೆಯನ್ನು ಶಾಲಾ ಶಿಕ್ಷಣದಲ್ಲಿ ಒಳಗೊಳ್ಳಲು ಸರಕಾರ ಬದ್ಧವಾಗಿದೆ. ಮಾತೃಭಾಷೆಯಲ್ಲಿ ಮಕ್ಕಳು ಭಾರತೀಯ ಸಾಂಪ್ರದಾಯಿಕ ಜ್ಞಾನವನ್ನು ಪಡೆಯಬೇಕೆಂಬುದು ಎನ್ಇಪಿಯ ಆಶಯವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2022-23ರ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ತಂದ ಮೊದಲ ರಾಜ್ಯ ನಮ್ಮದಾಗುತ್ತದೆ" ಎಂದು ಉತ್ತರಾಖಂಡ್ ಶಿಕ್ಷಣ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಶಾಲೆಗೂ ಅನ್ವಯವಾಗುತ್ತಾ?
ಭಾರತದ ಸಾಂಪ್ರದಾಯಿಕ ಜ್ಞಾನದ ಪಠ್ಯಕ್ರಮ ಅಳವಡಿಕೆ ಕಾರ್ಯ ಕೇವಲ ಸರಕಾರಿ ಶಾಲೆಗಳಿಗೆ ಮಾತ್ರ ಅನ್ವಯ ಆಗುತ್ತದಾ ಅಥವಾ ಖಾಸಗಿ ಶಾಲೆಗಳಲ್ಲೂ ಅದರ ಅಳವಡಿಕೆ ಆಗುತ್ತದಾ ಎಂಬ ಗೊಂದಲಕ್ಕೆ ಉತ್ತರಾಖಂಡ್ ಸರಕಾರ ಪರಿಹಾರ ಹುಡುಕಿಲ್ಲ. "ಅದಿನ್ನೂ ಅಂತಿಮಗೊಂಡಿಲ್ಲ. ಖಾಸಗಿ ಶಾಲೆಗಳಲ್ಲೂ ಭಾರತೀಯ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯನ್ನು ಜಾರಿಗೆ ಬರುವ ಬಗ್ಗೆ ಮಾರ್ಗೋಪಾಯ ಹುಡುಕಲಾಗುವುದು" ಎಂದು ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)