ಮಾಯಾವತಿ ಪ್ರಧಾನಿಯಾಗಲು ಸೂಕ್ತರು, ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದ ಅಜಿತ್ ಜೋಗಿ
ರಾಯ್ ಪುರ್, ನವೆಂಬರ್ 9: ಬಹುಜನ ಸಮಾಜ ಪಕ್ಷ ಹಾಗೂ ಎಡಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ನ ಭಿನ್ನಮತೀಯ ನಾಯಕ- ಛತ್ತೀಸ್ ಗಢದ ಮೊದಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಅಜಿತ್ ಜೋಗಿ ಹೇಳಿದ್ದಾರೆ.
ಪ್ರಧಾನಿ ಹುದ್ದೆಗೆ ಮಾಯಾವತಿಯೇ ಸೂಕ್ತರು ಎಂದಿರುವ ಅವರು, ಮುಂಬರು ಲೋಕಸಭೆ ಚುನಾವಣೆ ನಂತರ ಬಿಜೆಪಿಯೇತರ ಹಾಗೂ ಕಾಂಗ್ರೆಸ್ಸೇತರ ಮೈತ್ರಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಆಗ ಪ್ರಧಾನಿ ಯಾರು ಎಂಬುದನ್ನು ತೀರ್ಮಾನಿಸಲಾಗುತ್ತದೆ. ಆದರೆ ವೈಯಕ್ತಿಕವಾಗಿ ನಾನು ಅಂದುಕೊಳ್ಳುತ್ತೇನೆ, ಮಾಯಾವತಿ ಪಿಎಂ ಆಗಲು ಅರ್ಹರು. ಮೊದಲ ದಲಿತ ಮಹಿಳೆ ಪ್ರಧಾನಿ ಆಗಲಿ ಎಂದಿದ್ದಾರೆ ಅಜಿತ್ ಜೋಗಿ.
ಎಬಿಪಿ-ಸಿಎಸ್ ಡಿಎಸ್ ಸಮೀಕ್ಷೆ: ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ
ಅಜಿತ್ ಜೋಗಿ ಅವರು ಐಪಿಎಸ್ ಹಾಗೂ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. 1986ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದ ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದರು. ಪಕ್ಷದಲ್ಲಿ ಊಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿ, 2016ರಲ್ಲಿ ಕಾಂಗ್ರೆಸ್ ತೊರೆದು, ಹೊಸ ಪಕ್ಷ ಸ್ಥಾಪನೆ ಮಾಡಿದರು.
ಛತ್ತೀಸ್ ಗಢ ಚುನಾವಣೆಯಲ್ಲಿ ಬಿಎಸ್ ಪಿ ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ. ಎಲ್ಲಿ ಅಜಿತ್ ಜೋಗಿ ಹಾಗೂ ಅವರ ಮಗ ಕಾಂಗ್ರೆಸ್ ಗೆ ಹಾನಿ ಮಾಡುತ್ತಾರೋ ಎಂಬ ಆತಂಕದಲ್ಲಿ ಇಂಥ ನಿರ್ಧಾರ ಮಾಡಿದೆ. ಕಳೆದ ಮೂರು ಅವಧಿಯಿಂದ ಛತ್ತೀಸ್ ಗಢದಲ್ಲಿ ಅಧಿಕಾರಲ್ಲಿರುವ ಬಿಜೆಪಿ ವಿರುದ್ಧ ಆಡಳಿತವಿರೋಧಿ ಅಲೆ ಇದೆ. ಆದ್ದರಿಂದ ಈ ಬಾರಿ ಸುಲಭ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನಲ್ಲಿದೆ.
ಚುನಾವಣೆಗೆ ತಿಂಗಳಿಲ್ಲ,ಛತ್ತೀಸ್ ಗಢದಲ್ಲಿ ಪಕ್ಷಾಂತರಕ್ಕೆ ಎಲ್ಲೆಯಿಲ್ಲ!
90 ಸದಸ್ಯ ಬಲದ ಛತ್ತೀಸ್ ಗಢ ವಿಧಾನಸಭೆಗೆ ನವೆಂಬರ್ 12 ಹಾಗೂ 20ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.