ಮೋದಿ ಆಪ್ತೆ ಮಾಯಾ ಕೊಡ್ನಾನಿ ಮತ್ತೆ ಬಚಾವ್!
ಅಹಮದಾಬಾದ್, ಜುಲೈ 25: 2002ರ ನರೋಡಾ ಪಾಟಿಯಾ ಕೋಮುಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಗುಜರಾತ್ನ ಮಾಜಿ ಸಚಿವೆ ಮಾಯಾ ಕೊಡ್ನಾನಿಗೆ ಮತ್ತೆ ರಿಲೀಫ್ ಸಿಕ್ಕಿದೆ.
ನರಮೇಧ: ಬಿಜೆಪಿ ಮಾಜಿ ಸಚಿವೆಗೆ 28 ವರ್ಷ ಶಿಕ್ಷೆ
ಒಂದು ಕಾಲದಲ್ಲಿ ಅಂದಿನ ಸಿಎಂ ಮೋದಿ ಅವರ ಆಪ್ತ ವರ್ಗದ ಸದಸ್ಯೆಯಾಗಿದ್ದ ಮಾಯಾ ಅವರಿಗೆ ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಜಾಮೀನು ಗಳಿಸಿದ್ದಾರೆ.
ಈಗ ಈ ಪ್ರಕರಣದ ಸಾಕ್ಷಿಯೊಬ್ಬರು ಹೇಳಿಕೆ ದಾಖಲಿಸಿದ್ದು, ಘಟನೆ ನಡೆದಾಗ ಮಾಯಾ ಅವರು ಆಸ್ಪತ್ರೆಯಲ್ಲಿದ್ದರು ಎಂದು ಹೇಳಿದ್ದಾರೆ. ರಾಯಿಬೆನ್ ಠಾಕೊರ್ ಅವರ ಹೇಳಿಕೆಯನ್ನು ಕೊಡ್ನಾನಿ ಅವರ ವಕೀಲರು, ವಿಶೇಷ ತನಿಖಾ ತಂಡ(ಎಸ್ ಐಟಿ)ಯ ಪರ ವಕೀಲ ಪಿಬಿ ದೇಸಾಯಿ ಅವರು ದಾಖಲಿಸಿಕೊಂಡಿದ್ದಾರೆ.
ಕೊಡ್ನಾನಿ ಅವರು ಘಟನೆ ನಡೆದ ದಿನ ಶಿವಮ್ ಮೆಟರ್ನಿಟಿ ಹಾಗೂ ಸರ್ಜನಿಕಲ್ ನರ್ಸಿಂಗ್ ಹೋಮ್ ನಲ್ಲಿದ್ದರು. ಕೊಡ್ನಾನಿ ಅವರ ಸೊಸೆ ಮಗುವಿಗೆ ಜನ್ಮ ನೀಡುತ್ತಿದ್ದರು. 2002ರ ಫೆಬ್ರವರಿ 28ರಂದು ಹಾಗೂ ಮರುದಿನ ಬೆಳಗ್ಗೆ ತನಕ ಆಸ್ಪತ್ರೆಯಲ್ಲಿದ್ದರು. 5.30ರ ವೇಳೆಗೆ ಮಗುವಿನ ಜನನವಾಯಿತು. ಡಾಕ್ಟರ್ ಧವಳ್ ಶಾ ಹಾಗೂ ಕೊಡ್ನಾನಿ ಅವರು ಆಪರೇಷನ್ ಥಿಯೇಟರ್ ನಲ್ಲಿದ್ದರು ಎಂದು ಕೊಡ್ನಾನಿ ಅವರ ಪತಿ ಸುರೇಂದ್ರ ಅವರು ಕೋರ್ಟಿಗೆ ತಿಳಿಸಿದ್ದಾರೆ.
ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿ ಯಾಗಿದ್ದಾಗ ಅವರ ಸಂಪುಟದಲ್ಲಿ ಮಾಯಾ ಕೊಡ್ನಾನಿ ಮಹಿಳಾ ಹಾಗೂ ಶಿಶು ಕಲ್ಯಾಣ ಸಚಿವೆಯಾಗಿದ್ದರು. 2002ರಲ್ಲಿ ನಡೆದ ಗುಜರಾತ್ ಹಿಂಸಾಚಾರದ ವೇಳೆ ನರೋಡಾದಲ್ಲಿ ನಡೆದ ಹತ್ಯಾಕಾಂಡದಲ್ಲಿ ಆಕೆ ಮುಖ್ಯ ಸೂತ್ರಧಾರಿಯೆಂದು ನ್ಯಾಯಾಲಯ ತೀರ್ಪು ನೀಡಿತ್ತು ಹಾಗೂ ಆಕೆಗೆ 28 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿತ್ತು.
ನರೋಡಾ ಪಾಟಿಯಾ ಹತ್ಯಾಕಾಂಡ: ಈ ದುರ್ಘಟನೆಯಲ್ಲಿ 97 ಮುಸ್ಲಿಮರ ಹತ್ಯೆಯಾಗಿತ್ತು. ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರ ಗುಂಪೇ ಹೊಣೆಯೆಂದು ಆರೋಪಿಸಲಾಗಿತ್ತು.ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದಾರೆ.