ಹೋಳಿ ಹಬ್ಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದು ಯಾಕೆ?
ಮಥುರಾ, ಫೆ. 26 : ರಸ್ತೆ ಮಾಡಿಕೊಟ್ಟಿಲ್ಲ, ಸೇತುವೆಯಿಲ್ಲ, ಕುಡಿವ ನೀರಿಲ್ಲ, ಮೂಲಸೌಕರ್ಯಗಳಿಲ್ಲ ಎಂದು ಜನರು ಪ್ರತಿಭಟನೆ ಮಾಡುವುದು, ಚುನಾವಣೆ ಬಹಿಷ್ಕಾರ ಮಾಡುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ಒಂದು ಗ್ರಾಮದ ಜನರು ತಾವಿರುವ ಪ್ರದೇಶವನ್ನು ಮದ್ಯ ಮುಕ್ತ ಎಂದು ಘೋಷಿಸದಿದ್ದರೆ ಹಬ್ಬ ಆಚರಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ.
ಮಥುರಾ ಸಮೀಪದ ಬರ್ಸಾನಾ ಸುತ್ತಮುತ್ತಲಿನ ಜನರೇ ಇಂಥ ಬೇಡಿಕೆ ಇಟ್ಟಿದ್ದು ಹೋಳಿ ಹಬ್ಬ ಆಚರಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಸ್ಥಳೀಯ ಪಂಚಾಯಿತಿಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.[ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1]
ಗ್ರಾಮದ ಸುತ್ತಮುತ್ತಲ ಮದ್ಯ ಮುಕ್ತ ಪ್ರದೇಶ ಎಂದು ಘೋಷಿಸಬೇಕು. ಇಲ್ಲವಾದರೆ ನಾವು 'ಲತ್ ಮಾರ್ ಹೋಳಿ' ಹಬ್ಬ ಆಚರಿಸುವುದಿಲ್ಲ ಎಂದು ಸಾಧುಗಳು, ಮಹಾಂತ್ ಗಳು, ವಕೀಲರು ಮತ್ತು ಪ್ರದೇಶದ ನಿವಾಸಿಗಳು ಒಕ್ಕೋರಲಿನಿಂದ ಹೇಳಿದ್ದಾರೆ.
ಫೆಬ್ರವರಿ 27 ರಂದು ಗ್ರಾಮಸ್ಥರು ವಾರ್ಷಿಕ ಲಥ್ ಮಾರ್ ಹೋಳಿ ಆಚರಿಸಬೇಕಿತ್ತು. ಆದರೆ ಈ ಬಾರಿ ಮದ್ಯ ನಿಷೇಧವಾದಂತೂ ಹಬ್ಬ ಆಚರಣೆ ಮಾಡಬಾರದು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪಂಚಾಯಿತಿ ಪ್ರಮುಖ ರಾಮ್ ರಾಜ್ ದಾಸ್ ಬಾಬಾ ಹೇಳಿದ್ದಾರೆ. ಹಬ್ಬ ಬಹಿಷ್ಕಾರ ನಿರ್ಧಾರಕ್ಕೆ ಮಹಿಳಾ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ.[ಹೋಳಿ ಹಬ್ಬದ ವಿಶೇಷತೆಯೇನು?]
ಗ್ರಾಮದ ಶಾಲೆ ಮತ್ತು ದೇವಾಲಯದ ಸಮೀಪ ಮದ್ಯದ ಅಂಗಡಿಗಳನ್ನು ತೆರೆಯಲಾಗಿದೆ. ಇದು ಕಾನೂನಿನ ಉಲ್ಲಂಘನೆಯಾಗಿದ್ದು ಸಂಬಂಧಿಸಿದವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮದ್ಯ ಮುಕ್ತ ಪ್ರದೇಶ ಎಂದು ಘೋಷಣೆ ಮಾಡುವ ಅಧಿಕಾರ ನನಗಿಲ್ಲ. ಆದರೆ ಮಾರ್ಚ್ 1 ರವರೆಗೆ ಮದ್ಯದಂಗಡಿಗಳಿಗೆ ಬಾಗಿಲು ಹಾಕುವಂತೆ ಸೂಚನೆ ನೀಡಲಾಗಿದೆ. ಜನರ ಬೇಡಿಕೆಗೆ ಸಂಬಂಧಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಜಿಲ್ಲಾ ಆಡಳಿತಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಆಡಳಿತಾಧಿಕಾರಿ ಹೇಳಿಕೆಗೆ ಗ್ರಾಮದಲ್ಲಿ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನಮ್ಮ ವಾರ್ಷಿಕ ಹಬ್ಬದ ಸಂಭ್ರಮ ಹಾಳು ಮಾಡಿಕೊಳ್ಳಲು ಸಾಧ್ಯವಿಲ್ಲ. ಆಡಳಿತ ನೀಡಿದ ಭರವಸೆಗೆ ಬೆಲೆ ನೀಡಬೇಕಾಗುತ್ತದೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.