ರೈತರ ಮಹಾಪಂಚಾಯತ್: ಮುತ್ತಿಗೆ ಬೆದರಿಕೆ ಹಿನ್ನೆಲೆ ಭಾರೀ ಭದ್ರತೆ ನಿಯೋಜನೆ
ಹರಿಯಾಣ, ಸೆಪ್ಟೆಂಬರ್ 07: ರೈತರು ಮಹಾ ಪಂಚಾಯತ್ ನಡೆಸುವ ಹಿನ್ನೆಲೆ ಹರಿಯಾಣದ ಕರ್ನಾಲದಲ್ಲಿ ಭದ್ರತಾ ನಿಯೋಜನೆಯನ್ನು ಅಧಿಕ ಮಾಡಲಾಗಿದೆ ಎಂದು ವರದಿಯಾಗಿದೆ. ರೈತರು ಮಹಾ ಪಂಚಾಯತ್ ನಡೆಸುವುದ ಮಾತ್ರವಲ್ಲದೇ ಆಗಸ್ಟ್ 28 ರಂದು ಪೊಲೀಸರು ಲಾಠಿ ಚಾರ್ಜ್ ನಡೆಸಿದ ವಿಚಾರದಲ್ಲಿ ಮಿನಿ ಕಾರ್ಯಾಲಯಕ್ಕೆ (ಜಿಲ್ಲಾ ಕಚೇರಿಗೆ) ಮುತ್ತಿಗೆ ಹಾಕುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪೊಲೀಸರು ಈಗಲೇ ಭದ್ರತೆಯನ್ನು ಹೆಚ್ಚಳ ಮಾಡಿದ್ದಾರೆ ಎಂದು ವರದಿಯಾಗಿದೆ.
ರೈತರು ಕರ್ನಾಲ್ನ ಹೊಸ ಅನಾಜ್ ಮಂಡಿಯ ಬಳಿ ಸಭೆ ಸೇರಿ ಬಳಿಕ ಜಿಲ್ಲಾಡಳಿತದ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆ ಹರಿಯಾಣ ಪೊಲೀಸರು ಹಾಗೂ ಕರ್ನಾಲ್ನ ಕೇಂದ್ರ ಪಡೆಯು ತನ್ನ ಭದ್ರತೆಯನ್ನು ಮತ್ತಷ್ಟು ಹೆಚ್ಚಳ ಮಾಡಿಕೊಂಡಿದೆ.
'ಪ್ರಧಾನಿ ಹೆಸರಲ್ಲಿ ಪ್ರಚಾರ ಮಾಡುತ್ತೇವೆ': ಬಿಜೆಪಿಯನ್ನು ಅಣಕಿಸಿದ ಟಿಕಾಯತ್
ಇನ್ನು ಈ ನಡುವೆ ದೆಹಲಿ-ಕರ್ನಾಲ್-ಅಂಬಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರದಟ್ಟಣೆ ಬೆಳಿಗ್ಗೆಯ ಹೊತ್ತು ಸಾಮಾನ್ಯ ಎಂದು ಹೇಳಿದ್ದಾರೆ. ಇನ್ನು ಹರಿಯಾಣ ಬಿಕೆಯು ಮುಖ್ಯಸ್ಥ ಗುರುನಾಮ್ ಸಿಂಗ್ ಚಾಧುನಿ ಅನಾಜ್ ಮಂಡಿಯ ಬಳಿ ಶಾಂತಿಯುತವಾಗಿ ಬಂದು ಸೇರುವಂತೆ ರೈತರಿಗೆ ತಿಳಿಸಿದ್ದಾರೆ. "ನಾವು ಅನಾಜ್ ಮಂಡಿಯಲ್ಲಿ ಮಹಾಪಂಚಾಯತ್ ಅನ್ನು ನಡೆಸಲಿದ್ದೇವೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
"ಎಲ್ಲರೂ ಶಾಂತಿಯುತವಾಗಿ ಅನಾಜ್ ಮಂಡಿಗೆ ಬಂದು ಸೇರಬೇಕು ಎಂದು ನಾನು ಮನವಿ ಮಾಡುತ್ತೇನೆ. ಮಂಡಿಯಲ್ಲಿ ನಮ್ಮನ್ನು ಸೇರಲು ಪೊಲೀಸರು ಅವಕಾಶ ಮಾಡಿಕೊಡುತ್ತಾರೆ ಎಂಬ ಮಾಹಿತಿ ನಮಗೆ ಲಭಿಸಿದೆ. ಮುಂದಿನ ಕ್ರಮದ ಬಗ್ಗೆ ಮಹಾಪಂಚಾಯತ್ನಲ್ಲಿ ನಾವು ನಿರ್ಧಾರ ಮಾಡೋಣ," ಎಂದು ವಿಡಿಯೋ ಸಂದೇಶದಲ್ಲಿ ಗುರುನಾಮ್ ಸಿಂಗ್ ಚಾಧುನಿ ತಿಳಿಸಿದ್ದಾರೆ.
ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕರ್ನಾಲ್ಗೆ ತಲುಪುತ್ತಿರುವ ನಡುವೆಯೇ ರೈತರು ಅನಾಜ್ ಮಂಡಿಗೆ ಬರಲು ಆರಂಭ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಹೊಸ ಅನಾಜ್ ಮಂಡಿಯಲ್ಲಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಹಾಗೂ ಭದ್ರತಾ ಪಡೆಗಳು ಕೂಡಾ ಇದೆ. ಇನ್ನು ರೈತರು ಮುತ್ತಿಗೆ ಹಾಕುತ್ತಾರೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಂತೆ ಭದ್ರತೆ ಪಡೆಯಲು ನಿಯೋಜನೆ ಮಾಡಲಾಗಿತ್ತು. ಹಾಗೆಯೇ ಮೊಬೈಲ್ ನೆಟ್ವರ್ಕ್ ಅನ್ನು ಬ್ಲಾಕ್ ಮಾಡಲಾಗಿತ್ತು. ಇನ್ನು ಜನರು ಗುಂಪು ಸೇರುವುದನ್ನು ಕೂಡಾ ನಿಷೇಧ ಮಾಡಲಾಗಿತ್ತು.
ಹರಿಯಾಣದಲ್ಲಿ 'ರೈತರ ತಲೆ ಒಡಿಯಿರಿ' ಎಂದಿದ್ದ ಅಧಿಕಾರಿ ವರ್ಗಾವಣೆ
ಸೋಮವಾರ ರಾತ್ರಿ 12:30 ರಿಂದ ಮಂಗಳವಾರ ತಡರಾತ್ರಿಯವರೆಗೆ ಈ ಪ್ರದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲು ಹರಿಯಾಣ ಸರ್ಕಾರ ಆದೇಶ ಮಾಡಿತ್ತು. ಪ್ರಮುಖ ನಾಲ್ಕು ಜಿಲ್ಲೆಗಳಾದ ಕುರುಕ್ಷೇತ್ರ, ಖೈತಾಲ್, ಜಿಂದ್ ಹಾಗೂ ಪಾಣಿಪತ್ನಲ್ಲಿ ಈ ಇಂಟರ್ನೆಟ್ ಸ್ಥಗಿತಕ್ಕೆ ಹರಿಯಾಣ ಸರ್ಕಾರ ನಿರ್ಧರಿಸಿತ್ತು.
''ಕರ್ನಾಲ್ನಲ್ಲಿ ಸುಮಾರು ನಲ್ವತ್ತರಷ್ಟು ಸಂಸ್ಥೆಗಳ ಭದ್ರತಾ ಪಡೆಗಳು ಹಾಗೂ ಈ ಪೈಕಿ ಹತ್ತು ಕೇಂದ್ರ ಭದ್ರತಾ ಪೊಲೀಸ್ ಪಡೆಯ ಗುಂಪನ್ನು ಕರ್ನಾಲ್ ಜಿಲ್ಲೆಯಲ್ಲಿ ನಿಯೋಜನೆ ಮಾಡಲಾಗಿದೆ. ಇಲ್ಲಿ ಸ್ಥಳೀಯ ಆಡಳಿತವು ನಿರ್ಬಂಧಗಳನ್ನು ಕೂಡಾ ಹೇರಿಕೆ ಮಾಡಿದೆ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ರಲ್ಲಿ ಸಂಚಾರದಟ್ಟಣೆ ಆಗುವ ಸಾಧ್ಯತೆ ಇದೆ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ. "ಈ ಹಿನ್ನೆಲೆ ಜನರು ಬದಲಿ ದಾರಿಯಲ್ಲಿ ಸಂಚಾರ ಮಾಡಿ," ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ನಡುವೆ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ಸಪ್ಟೆಂಬರ್ 8ರಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಂಗ ಸಂಸ್ಥೆ ಭಾರತೀಯ ಕಿಸಾನ್ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಆಗಸ್ಟ್ 31ರೊಳಗೆ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಎದುರಿಗೆ ರೈತರು ಹಲವು ಬೇಡಿಕೆಗಳನ್ನು ಇರಿಸಿದ್ದರು. ರೈತರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ಹಿಂದೇಟು ಹಾಕಿರುವುದನ್ನು ಖಂಡಿಸಿ ಇದೀಗ ದೇಶದಲ್ಲಿ ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.
(ಒನ್ ಇಂಡಿಯಾ ಸುದ್ದಿ)