ರಾಮ್ ರಹೀಮ್ ಸಿಂಗ್ ದತ್ತುಪುತ್ರಿಗಾಗಿ ಹುಡುಕಾಟ ತೀವ್ರ
ನವದೆಹಲಿ, ಸೆಪ್ಟೆಂಬರ್ 20 : ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಬಾಬಾ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿ ಪ್ರೀತ್ ಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ. ಭಾರತ-ನೇಪಾಳ ಗಡಿಯಲ್ಲಿ ಆಕೆ ಇರುವ ಸಾಧ್ಯತೆ ಇದ್ದು, ನೇಪಾಳ ಬಿಟ್ಟು ತೆರಳದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶ ಮತ್ತು ನೇಪಾಳದಲ್ಲಿರುವ ಡೇರಾ ಸಚ್ಚಾ ಸೌಧಕ್ಕೆ ಸಂಬಂಧಿಸಿದ ವ್ಯಕ್ತಿಗಳು, ರಾಮ್ ರಹೀಮ್ ಸಿಂಗ್ ಬೆಂಬಲಿಗರ ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಹರ್ಯಾಣ ಪೊಲೀಸರು ಭಾರತ-ನೇಪಾಳ ಗಡಿ, ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಹನಿಪ್ರೀತ್ಗಾಗಿ ಶೋಧ ನಡೆಸುತ್ತಿದ್ದಾರೆ.
ಹನಿಪ್ರೀತ್ ನಂತರ, ರಾಮ್ ರಹೀಂ ಮತ್ತೊಬ್ಬ ಆಪ್ತೆ ವಿಪಾಸನಾ ನಾಪತ್ತೆ
ನೇಪಾಳ ಗಡಿ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಹನಿಪ್ರೀತ್ ಭಾವಚಿತ್ರಗಳನ್ನು ಅಂಟಿಸಲಾಗಿದೆ. ನೇಪಾಳದಿಂದ ಬೇರೆ ಕಡೆ ಪರಾರಿಯಾಗದಂತೆ ಎಚ್ಚರ ವಹಿಸಲು ಗುಪ್ತಚರ ಇಲಾಖೆಯ ಸಹಕಾರವನ್ನು ಪಡೆಯಲಾಗಿದೆ. ಸೆ.1ರಂದು ಹರ್ಯಾಣ ಪೊಲೀಸರು ಹನಿಪ್ರೀತ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಅಂದಿನಿಂದಲೂ ಆಕೆಗಾಗಿ ಹುಡುಕಾಟ ನಡೆಸಲಾಗುತ್ತದೆ.
ಉತ್ತರ ಪ್ರದೇಶ ರಾಜ್ಯ 599.3 ಕಿ.ಮೀ.ಗಡಿಯನ್ನು ನೇಪಾಳದೊಂದಿಗೆ ಹಂಚಿಕೊಂಡಿದೆ. ರಾಜ್ಯದ ಏಳು ಜಿಲ್ಲೆಗಳು ಭಾರತ-ನೇಪಾಳ ಗಡಿಯಲ್ಲಿವೆ. ಈ ಗಡಿಯ ಮೂಲಕವೇ ಹನಿಪ್ರೀತ್ ನೇಪಾಳಕ್ಕೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಗಡಿಯಲ್ಲಿರುವ ನೇಪಾಳ ಪೊಲೀಸ್ ಠಾಣೆಗಳ ಜೊತೆಗೂ ಹರ್ಯಾಣ ಪೊಲೀಸರು ಸಂಪರ್ಕದಲ್ಲಿದ್ದಾರೆ.
ಹನಿಪ್ರೀತ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
2002ರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಜೈಲು ಸೇರಿದ್ದಾನೆ. ಎರಡು ಪ್ರಕರಣಗಳಲ್ಲಿ ಅವರಿಗೆ ತಲಾ 10 ವರ್ಷದ ಜೈಲು ಶಿಕ್ಷೆ ಮತ್ತು 15 ಲಕ್ಷ ರೂ. ದಂಡವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಹನಿಪ್ರೀತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗಿದೆ. ಆದರೆ, ಬಂಧನದಿಂದ ತಪ್ಪಿಸಿಕೊಳ್ಳಲು ಹನಿಪ್ರೀತ್ ಪರಾರಿಯಾಗಿದ್ದಾರೆ. ಆದ್ದರಿಂದ, ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.