ಉತ್ತರಾಖಂಡ: ಬೃಹತ್ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭ
ಡೆಹರಾಡೂನ್, ಫೆಬ್ರವರಿ 8: ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟ ದುರ್ಘಟನೆ ಬಳಿಕ ಸುರಂಗ ಒಂದರ ಒಳಗೆ ಸಿಲುಕಿಕೊಂಡಿರುವ 30ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲು ಬೃಹತ್ ಕಾರ್ಯಾಚರಣೆ ಆರಂಭವಾಗಿದೆ. ಹಿಮಪಾತದಿಂದ ಇದುವರೆಗೂ 18 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಚಮೋಲಿಯ ತಪೋವನದಲ್ಲಿರುವ 12 ಅಡಿ ಎತ್ತರ ಮತ್ತು 15 ಅಡಿ ಅಗಲದ ಸುರಂಗದಲ್ಲಿ ಕೆಸರು ಹಾಗೂ ಅವಶೇಷಗಳು ತುಂಬಿಕೊಂಡಿದ್ದು, ಕಾರ್ಮಿಕರು ಒಳಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಈ ಸುರಂಗಕ್ಕೆ ಒಂದೇ ಒಂದು ಪ್ರವೇಶ ದ್ವಾರವಿದ್ದು, 1.6 ಕಿಮೀ ಉದ್ದವಿದೆ. ಹೀಗಾಗಿ ಸುರಂಗದ ಒಳಗೆ ಪ್ರವೇಶಿಸಿ ಕಾರ್ಯಾಚರಣೆ ನಡೆಸುವುದು ಸವಾಲಾಗಿದೆ. ಸುರಂಗದ ಯಾವ ಭಾಗದಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ, ಅವರೆಲ್ಲರೂ ಜತೆಯಾಗಿದೆಯೇ ಇದ್ದಾರೆಯೇ ಎನ್ನುವುದನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ.
ಉತ್ತರಾಖಂಡ್ ಕಥೆ: ಹಿಮನದಿ ಸ್ಫೋಟ ಎಂದರೇನು, ಹೇಗೆ ಸಂಭವಿಸುತ್ತೆ?
ಅರ್ಥ್ ಮೂವರ್ಗಳು, ಸಲಿಕೆಗಳನ್ನು ಬಳಸಿ ನೂರಾರು ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸುರಂಗವನ್ನು ತೆರವುಗೊಳಿಸಲು ಇಂಡೋ-ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್ಡಿಎಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಹಗಲು ರಾತ್ರಿ ಕೆಲಸ ನಿರ್ವಹಿಸಿವೆ.
ಸುರಂಗದ ನೂರು ಮೀಟರ್ನಷ್ಟು ಮಾರ್ಗವನ್ನು ತೆರವುಗೊಳಿಸಿದ್ದು, ಒಳಗೆ ಪ್ರವೇಶಿಸಬಹುದಾಗಿದೆ. ಇನ್ನೂ ನೂರು ಮೀಟರ್ನಷ್ಟು ಅವಶೇಷಗಳನ್ನು ತೆರವುಗೊಳಿಸಬೇಕು ಎನಿಸುತ್ತದೆ. ಇದಕ್ಕೆ ಮತ್ತಷ್ಟು ಗಂಟೆಗಳು ಬೇಕಾಗಲಿದೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ಹೇಳಿದ್ದಾರೆ.
#Uttarakhand#Update: #UttarakhandGlacialBurst
— ADG PI - INDIAN ARMY (@adgpi) February 8, 2021
टनल में फंसे लोगों के लिए बचाव कार्य जारी। टनल के अंदर पहुंच कर रास्ता खोलने का प्रयास किया जा रहा है। pic.twitter.com/coCBZGsjUS
ಇದೇ ಪ್ರದೇಶದಲ್ಲಿ ಕಿರಿದಾದ ಸುರಂಗವೊಂದರಿಂದ ಕನಿಷ್ಠ 12 ಕೆಲಸಗಾರರನ್ನು ಭಾನುವಾರ ಸಂಜೆ ರಕ್ಷಿಸಲಾಗಿತ್ತು. 300ಕ್ಕೂ ಅಧಿಕ ಐಟಿಬಿಪಿ ಸಿಬ್ಬಂದಿ ಮತ್ತು ಸೇನೆ, ವಿಪತ್ತು ನಿರ್ವಹಣಾ ತಂಡಗಳ 200 ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.