ಗೋವಾದ ಕದಂಬ ಬಸ್ ನಿಲ್ದಾಣದಲ್ಲಿ ಬೆಂಕಿ; ಕೋಟಿಗೂ ಅಧಿಕ ನಷ್ಟ
ಕಾರವಾರ, ಅಕ್ಟೋಬರ್ 3: ನೆರೆಯ ಗೋವಾದ ಪಣಜಿಯಲ್ಲಿರುವ ಕದಂಬ ಬಸ್ ನಿಲ್ದಾಣ ಕಟ್ಟಡದಲ್ಲಿ ಸೋಮವಾರ (ಅ.02) ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ಸಾರಿಗೆ ಸಂಸ್ಥಯೆ ಕಚೇರಿ ಸೇರಿದಂತೆ ಆವರಣದಲ್ಲಿನ ಕೆಲವು ಮಳಿಗೆಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬಸ್ ನಿಲ್ದಾಣದ ನೆಲ ಮಹಡಿಯಲ್ಲಿರುವ ಸೂಪರ್ ಮಾರ್ಕೆಟ್ಟಿನಲ್ಲಿ ಬೆಳಿಗ್ಗೆ ಸುಮಾರು 5.45ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ತಳಕ್ಕೆ ಸುಮಾರು 10 ರಿಂದ 12 ಅಗ್ನಿ ಶಾಮಕ ದಳದ ತಂಡಗಳು ಧಾವಿಸಿ ಮೂರು ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿವೆ.
ಬೆಂಕಿಯಿಂದಾಗಿ ಗೋವಾ ರಾಜ್ಯ ಸಾರಿಗೆ ಸಂಸ್ಥೆಯ ಬಹುತೇಕ ದಾಖಲೆಗಳು ಸುಟ್ಟು ಹೋಗಿದ್ದು, ಒಟ್ಟಾರೆ ಸುಮಾರು 1 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಕದಂಬ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾರಿಕ್ ನ್ಯಾಟೋ ಹೇಳಿದ್ದಾರೆ.
ಜಾರ್ಖಂಡ್: ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ, 8 ಮಂದಿ ಸಾವು
ಮುಖ್ಯ ದಾಖಲೆಗಳು ಬೆಂಕಿಯಲ್ಲಿ ಸುಟ್ಟುಹೋಗಿದ್ದು, ಮುಂದಿನ ಕೆಲವು ದಿನಗಳವರೆಗೆ ಕಚೇರಿಯನ್ನು ಸ್ಥಗಿತಗೊಳಿಸುವುದಾಗಿ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಾವು ಕಚೇರಿಯನ್ನು ಅನಿವಾರ್ಯವಾಗಿ ಮುಚ್ಚಬೇಕಾಗಿದೆ ಎಂದು ರಾಜ್ಯ ಸಾರಿಗೆ ನಿರ್ದೇಶಕ ನಿಖಿಲ್ ದೇಸಾಯಿ ಕೂಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೊದಲ ಮಹಡಿಯಲ್ಲಿರುವ ಸೂಪರ್ ಮಾರ್ಕೆಟ್ಟಿನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಅವರು ಊಹಿಸಿದ್ದಾರೆ. ಅದೃಷ್ಟವಶಾತ್ ಕೆಲ ದಿನಗಳ ಹಿಂದೆಯಷ್ಟೇ ಕೆಲವು ಅಗತ್ಯ ದಾಖಲೆಗಳನ್ನು ಆನ್ ಲೈನ್ ನಲ್ಲಿ ಶೇಖರಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.