ಹುತಾತ್ಮರ ದಿನ: ಅಹಿಂಸೆಯ ಪ್ರತಿಪಾದಕನಿಗೆ ಶ್ರದ್ಧಾಂಜಲಿ
ನವದೆಹಲಿ, ಜನವರಿ 30: ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ 70 ನೇ ಪುಣ್ಯತಿಥಿ ಇಂದು(ಜ.30). ಭಾರತದಾದ್ಯಂತ ಈ ದಿನವನ್ನು ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ.
ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ, ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದ್ದು ಗುಜರಾತಿನ ಪೋರಬಂದರಿನಲ್ಲಿ. 1869 ಅಕ್ಟೋಬರ್ 2 ರಂದು ಜನಿಸಿದ ಗಾಂಧಿ, ಭೋಗಿಯಾಗಿ ಕೆಲಕಾಲ ಬದುಕಿ, ನಂತರ ವಿಷಯ ಸುಖಗಳ ಕುರಿತು ಜಿಗುಪ್ಸೆ ಹುಟ್ಟಿ ಯೋಗಿಯಾಗಿ ಬದಲಾದವರು.
ಗಾಂಧೀಜಿಗೆ 'ಮಹಾತ್ಮಾ' ಬಿರುದು ಕೊಟ್ಟಿದ್ದು ಯಾರು?
ಅವರ ಹಲವು ನಡೆಗಳು ವಿಮರ್ಶೆಗೊಳಪಟ್ಟು, ವಿವಾದ ಸೃಷ್ಟಿಸಿದ್ದರೂ, ತನ್ನ ಬದುಕೇ ತನ್ನ ಸಂದೇಶ ಎಂಬ ಅವರ ಆತ್ಮವಿಶ್ವಾಸ ನುಡಿ ಅವರನ್ನು ರಾಷ್ಟ್ರಪಿತನನ್ನಾಗಿ ಮಾಡಿದೆ.
1948 ಜನವರಿ 30ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್ ಗೆ ತೆರಳಿದ್ದ ಅವರ ಮೇಲೆ ನಾಥುರಾಮ್ ಗೋಡ್ಸೆ ಮೂರು ಬಾರಿ ಗುಂಡಿಕ್ಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ದಿನ ಇಡೀ ಭಾರತವೂ ಶೋಕ ಸಾಗರದಲ್ಲಿ ಮುಳುಗಿತ್ತು. ಆ ದಿನವನ್ನು ಇಂದಿಗೂ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ.
ಬಾಪೂ ಇನ್ನೂ ಸತ್ತಿಲ್ಲ, ಇಲ್ಲೊಂದು ಪತ್ರ ಬರೆದಿದ್ದಾರೆ ಓದಿ!
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನೂರಾರು ಗಣ್ಯರು ಬಾಪು ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಲ್ಲದೆ, ದೇಶಕ್ಕಾಗಿ ಪ್ರಾಣ ಅರ್ಪಿಸುವ ಹುತಾತ್ಮರಿಗೆ ಋಣಿ ಎಂದಿದ್ದಾರೆ.
|
ಎಲ್ಲ ಹುತಾತ್ಮರಿಗೂ ನಮನ
ಹಿತಾತ್ಮರ ದಿನದಂದು ಪ್ರತಿ ಭಾರತೀಯರೂ ಮಹಾತ್ಮಾ ಗಾಂಧಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಮಡಿದ ಅಸಂಖ್ಯ ಹುತಾತ್ಮರಿಗೆ ನಮನ ಸಲ್ಲಿಸೋಣ ಎಂದಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್.
|
ಹುತಾತ್ಮರಿಗೆ ನಮನ
ಪೂಜ್ಯ ಬಾಪು ಅವರಿಗೆ ಅವರ ಪುಣ್ಯ ತಿಥಿಯಂದು ನಮ್ಮ ಶ್ರದ್ಧಾಂಜಲಿ. ದೇಶ ಸೇವೆಗಾಗಿ ತಮ್ಮ ಬದುಕನ್ನು ತ್ಯಾಗ ಮಾಡುವ ಎಲ್ಲ ಹುತಾತ್ಮರಿಗೂ ನಾವು ತಲೆಬಾಗುತ್ತೇವೆ. ದೇಶದ ಕುರಿತು ಅವರಿಗಿರುವ ಸಮರ್ಪಣಾ ಭಾವ ಮತ್ತು ಅವರ ಧೈರ್ಯವನ್ನು ನಾವೆಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
|
ರಾಮರಾಜ್ಯ ಕಲ್ಪನೆ ಸಾಕಾರವಾಗಲಿ
ಭಾರತ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹಿಂಸೆಯಿಲ್ಲದೆ ಹೋರಾಡಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಗೆ ನಮನಗಳು. ನಾವು ಎಂದಿಗೂ ಅವರ ಕನಸಿನ ರಾಮರಾಜ್ಯವನ್ನು ಸಾಕಾರಗೊಳಿಸಲು ಬದ್ಧರಾಗಿದ್ದೇವೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
|
ಮರಳ ಮೇಲೆ ಗಾಂಧಿ ಸ್ಮರಣೆ
ಅವರ 70 ನೇ ಪುಣ್ಯತಿಥಿಯಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ನೆನಪಿಸಿಕೊಳ್ಳುತ್ತೇನೆ ಎಂದು ಸುಂದರ ಮರಳು ಶಿಲ್ಪದ ಮೂಲಕ ನಮನ ಸಲ್ಲಿಸಿದ್ದಾರೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್.
|
ಅನಂತ ನಮನ
ಅಹಿಂಸಾತ್ಮಕ ಹೋರಾಟದ ಮಹತ್ವವನ್ನು ಜಗತ್ತಿಗೆ ಸಾರಿದ ಪೂಜ್ಯ ಬಾಪೂಜಿಗೆ ಅವರ ಪುಣ್ಯತಿಥಿಯಂದು ಅನಂತ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ.