ಗುಜರಾತ್ ಸಿಎಂ ಕಣ್ಣೆದುರಲ್ಲೇ ಹುತಾತ್ಮ ಯೋಧನ ಪುತ್ರಿಗೆ ಅವಮಾನ
ಅಹಮದಾಬಾದ್, ಡಿಸೆಂಬರ್ 2: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಮ್ಮುಖದಲ್ಲೇ ಹುತಾತ್ಮ ಯೋಧರ ಮಗಳನ್ನು ಪೊಲೀಸರು ಎಳೆದೊಯ್ದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸೇನೆಯಲ್ಲಿದ್ದಾಗ ಮರಣವನ್ನಪ್ಪಿದ ಸೈನಿಕರ 26 ವರ್ಷದ ಮಗಳು ರೂಪಲ್ ದೇವಿ ಗುಜರಾತ್ ಮುಖ್ಯಮಂತ್ರಿಯನ್ನು ಭೇಟಿಯಾಗಲು ಶುಕ್ರವಾರ ಆಗಮಿಸಿದ್ದರು. ನರ್ಮದಾ ಕೆವಾಡಿಯಾ ಕಾಲೊನಿಯಲ್ಲಿ ನಡೆಯುತ್ತಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ರೂಪಾಣಿಯನ್ನು ಭೇಟಿಯಾಗಲು ಯತ್ನಿಸಿದರು.
ಆದರೆ ಇದಕ್ಕೆ ಅವಕಾಶ ನೀಡದ ಮಹಿಳಾ ಪೊಲೀಸ್ ಅಧಿಕಾರಿಗಳು ಆಕೆಯನ್ನು ಅಲ್ಲಿಂದ ಎಳೆದೊಯ್ದರು. ಇದನ್ನೆಲ್ಲಾ ವೇದಿಕೆ ಮೇಲಿದ್ದ ಮುಖ್ಯಮಂತ್ರಿ ವಿಜಯ್ ರೂಪಾನಿ ನೋಡುತ್ತಾ ಹಾಗೇ ನಿಂತಿದ್ದರು. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಆಕೆ ಉರುಳಾಡುತ್ತಿದ್ದರೂ ರೂಪಾನಿ ಏನೂ ಸೂಚನೆ ನೀಡಲೇ ಇಲ್ಲ.
ತನ್ನ ತಂದೆ ಅಶೋಕ್ ತದ್ವಿ ನಿಧನರಾದ ನಂತರ ಸರಕಾರ ಜಮೀನು ನೀಡುವುದಾಗಿ ಹೇಳಿತ್ತು. ಆದರೆ 7 ವರ್ಷವಾದರೂ ಜಮೀನು ನೀಡದ ಹಿನ್ನಲೆಯಲ್ಲಿ ಅಶೋಕ್ ತದ್ವಿ ಮಗಳು ರೂಪಲ್ ದೇವಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಹೀಗಿದ್ದೂ ಜಮೀನು ಇನ್ನೂ ಸಿಕ್ಕಿಲ್ಲ.
ದೂಪಲ್ ದೇವಿಯನ್ನು ಮಹಿಳಾ ಪೊಲೀಸರು ಎಳೆದೊಯ್ಯುತ್ತಿರುವುದನ್ನು ನೋಡಿದ ರೂಪಾನಿ ಕೊನೆಗೆ ತಾವು ಕಾರ್ಯಕ್ರಮದ ನಂತರ ಆಕೆಯನ್ನು ಭೇಟಿಯಾಗುವುದಾಗಿ ಘೋಷಿಸಿದರು.ಆದರೆ ಆಕೆಯನ್ನು ಭೇಟಿಯಾಗಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, "ಬಿಜೆಪಿ ಅಹಂಕಾರ ಪರಾಕಾಷ್ಠೆಯನ್ನು ಮುಟ್ಟಿದೆ," ಎಂದು ಝಾಡಿಸಿದ್ದಾರೆ.
भाजपा का घमंड अपने चरम पर है।
— Office of RG (@OfficeOfRG) December 1, 2017
‘परम देशभक्त’ रुपाणीजी ने शहीद की बेटी को सभा से बाहर फिंकवा कर मानवता को शर्मसार किया।
15 साल से परिवार को मदद नहीं मिली, खोखले वादे और दुत्कार मिली। इंसाफ़ माँग रही इस बेटी को आज अपमान भी मिला।
शर्म कीजिए,न्याय दीजिए। pic.twitter.com/w8k7TYQrDt
"ಪರಮ ದೇಶಭಕ್ತ ಎಂದು ಬಿಂಬಿಸಿಕೊಳ್ಳುತ್ತಿರುವ ವಿಜಯ್ ರೂಪಾಣಿ ಹುತಾತ್ಮ ಯೋಧರ ಮಗಳನ್ನು ದೂರ ತಳ್ಳಿ ಮಾನವೀಯತೆಯನ್ನೇ ಅವಮಾನಿಸಿದ್ದಾರೆ," ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.