ಉಗ್ರನ ಜೇಬಿನಲ್ಲಿ ವಾಯುನೆಲೆಯ ಮ್ಯಾಪ್: ಮೇ 23ರಂದು ತಪ್ಪಿದ ಭಾರೀ ದುರಂತ
ಉಗ್ರನ ಜೇಬಿನಲ್ಲಿ ವಾಯುನೆಲೆಯ ಮ್ಯಾಪ್:ಮೇ 23ರಂದು ತಪ್ಪಿದ ಭಾರೀ ದುರಂತ
ಶ್ರೀನಗರ, ಮೇ 17: ಸಾರ್ವತ್ರಿಕ ಚುನಾವಣೆಯ ಮತಎಣಿಕೆಯ ದಿನವಾದ ಮೇ 23ರಂದು ಭಾರೀ ದಾಳಿ ನಡೆಸಲು ಮುಂದಾಗಿದ್ದ ಉಗ್ರರ ಕೃತ್ಯವನ್ನು ಭದ್ರತಾ ಪಡೆ ತಪ್ಪಿಸಿದೆ.
ಗುಪ್ತಚರ ಇಲಾಖೆ ನೀಡಿದ್ದ ಅಲರ್ಟ್ ಪ್ರಕಾರ, ಮತಎಣಿಕೆಯ ದಿನದಂದು ಪಾಕಿಸ್ತಾನ ಮೂಲದ ಉಗ್ರರು ದಾಳಿ ನಡೆಸಲು ಸ್ಕೆಚ್ ಹಾಕಿದ್ದರು.
ಐಬಿ ಅಲರ್ಟ್ ಪ್ರಕಾರ, ಶ್ರೀನಗರ ಮತ್ತು ಆವಂತಿಪುರದ ಆರ್ಮಿ ಬೇಸ್ ಇವರ ಟಾರ್ಗೆಟ್ ಆಗಿತ್ತು. ಗುರುವಾರ (ಮೇ 16) ಶೊಪಿಯಾನ್ ನಲ್ಲಿ ಭದ್ರತಾ ಪಡೆಯ ಗುಂಡಿಗೆ ಸತ್ತ ಉಗ್ರನ ಜೇಬಿನಲ್ಲಿ, ದಾಳಿಯ ರೂಪುರೇಷೆ ಮತ್ತು ಮ್ಯಾಪ್ ಭದ್ರತಾ ಪಡೆಗಳಿಗೆ ದೊರೆತಿದೆ.
ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಒಬ್ಬ, ಜೈಶ್-ಇ- ಮೊಹಮ್ಮದ್ ಸಂಘಟನೆಯ ಇಬ್ಬರು ಮತ್ತು ಲಷ್ಕರ್-ಇ-ತೊಯ್ಬಾ ಸಂಘಟನೆಯ ಒಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಇವರೆಲ್ಲಾ, ವಾಯು ನೆಲೆಗಳ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದರು.
ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ ದಾಳಿ ನಡೆಸುವ ಸಲುವಾಗಿ ಸಭೆ ಸೇರಿದ್ದ ಉಗ್ರರು, ರಮ್ಜಾನ್ ಮಾಸ ಮತ್ತು ಭಾರತದ ಸಾರ್ವತ್ರಿಕ ಚುನಾವಣೆಯ ಮತಎಣಿಕೆಯ ದಿನದಂದು ದಾಳಿ ನಡೆಸಲು ಯೋಜನೆ ರೂಪಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಆವಂತಿಪುರ ವಾಯು ಸೇನೆಯ ಶಿಬಿರಗಳಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎನ್ನುವ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿ, ಕಟ್ಟೆಚ್ಚರ ವಹಿಸುವಂತೆ ಸೂಚಿಸಿತ್ತು.