ಉತ್ತರ ಭಾರತ ಧೂಳು ಬಿರುಗಾಳಿ: ಸಾವಿಗೀಡಾದವರ ಸಂಖ್ಯೆ 124 ಕ್ಕೆ ಏರಿಕೆ
ಆಗ್ರಾ, ಮೇ 03:ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸುರಿದ ಬಿರುಗಾಳಿ, ಮಳೆ ಮತ್ತು ಮೇಘಸ್ಫೋಟಕ್ಕೆ ಸಾವಿಗೀಡಾದವರ ಸಂಖ್ಯೆ 124 ಕ್ಕೆ ಏರಿಕೆಯಾಗಿದೆ.
ಉತ್ತರ ಪ್ರದೇಶದಲ್ಲಿ ನಿನ್ನೆ(ಮೇ 03) ಸುರಿದ ಭಾರಿ ಮಳೆ ಮತ್ತು ಮೇಘಸ್ಫೋಟಕ್ಕೆ ಕನಿಷ್ಠ 45 ಮಂದಿ ಮೃತರಾಗಿದ್ದಾರೆ. ಕಳೆದ ರಾತ್ರಿ ರಾಜ್ಯದಾದ್ಯಂತ ಬಿರುಗಾಳಿಯಿಂದ ಕೂಡಿದ ಭಾರೀ ಮಳೆ ಸುರಿದ ಪರಿಣಾಮ ಆಗ್ರಾವೊಂದರಲ್ಲೇ 36 ಮಂದಿ ಮೃತರಾಗಿದ್ದಾರೆ.
ಬಿಜ್ನೋರ್ ನಲ್ಲಿ 3, ಸಹರಾನ್ಪುರದಲ್ಲಿ 2, ಬರೇಲಿ, ಮೋರದಾಬಾದ್ ಚಿತ್ರಕೂಟ್ ಮತ್ತು ರಾಂಪುರಗಳಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ರಾಜ್ಯದಾದ್ಯಂತ ರಕ್ಷಣಾ ಕಾರ್ಯಕ್ಕೆ ಆದೇಶ ನೀಡಲಾಗಿದೆ.
ಧೂಳು ಮಿಶ್ರಿತ ಬಿರುಗಾಳಿ ಉತ್ತರ ಭಾರತ ತತ್ತರ! ಸ್ಥಿತಿ ಹೇಗಿದೆ?
ಮೃತರ ಕುಟುಂಬಕ್ಕೆ 4 ಲಕ್ಷ ರೂ. ವರೆಗೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ 50,000 ರೂ.ವರೆಗೆ ಪರಿಹಾರ ನೀಡಲಾಗಿದೆ.
ರಾಜಸ್ಥಾನ, ಉತ್ತರಖಾಂಡಗಳಲ್ಲೂ ಸಾಕಷ್ಟು ಮಳೆ ಸುರಿದಿದ್ದು, ರಾಜಸ್ಥಾನದಲ್ಲಿ ಮಳೆಗೆ 12 ಜನ ಬಲಿಯಾಗಿದ್ದಾರೆ. ಸಾಕಷ್ಟು ಆಸ್ತಪಾಸ್ತಿ ಹಾನಿಯಾಗಿದೆ. ನೂರಾರು ಜನ ಗಾಯಗೊಂಡಿದ್ದಾರೆ ಇಷ್ಟು ದಿನ ಬಿಸಿಲ ಝಳದಿಂದ ಬಳಲುತ್ತಿದ್ದ ಉತ್ತರ ಭಾರತದ ಹಲವು ರಾಜ್ಯಗಳು ಇದೀಗ ಮಳೆಯ ಹೊಡೆತಕ್ಕೆ ನಲುಗುತ್ತಿವೆ.