ಕರ್ನಾಟಕ , ತಮಿಳುನಾಡಿಗೆ ನೈರುತ್ಯ ಮುಂಗಾರು ಲಗ್ಗೆ: ಬೆಂಗಳೂರಲ್ಲಿ ಮಳೆ ಸಂಭವ
ನೈರುತ್ಯ ಮುಂಗಾರು ಕರ್ನಾಟಕ, ತಮಿಳುನಾಡಿನ ಕೆಲವು ಭಾಗಗಳು ಹಾಗೂ ದೇಶದ ಕರಾವಳಿಯ ಇತರೆ ಭಾಗಗಳನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ವರದಿ ತಿಳಿಸಿದೆ.
ಇದರಿಂದ ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಒಳನಾಡಿನ ಇತರೆ ಭಾಗಗಳಲ್ಲಿ ಅಲ್ಪ ಪ್ರಮಾಣದಿಂದ ಸಾಧಾರಣ ಮಳೆಯಾಗುವ ಸಂಭವವಿದೆ.
'ನೈರುತ್ಯ ಮುಂಗಾರು ಕರ್ನಾಟಕದ ಒಳನಾಡಿನ ಇನ್ನಷ್ಟು ಭಾಗಗಳು, ತಮಿಳುನಾಡು ಮತ್ತು ಪುದುಚೆರಿಯ ಉಳಿದ ಪ್ರದೇಶಗಳು, ರಾಯಲಸೀಮೆ ಮತ್ತು ಆಂಧ್ರಪ್ರದೇಶದ ಕರಾವಳಿಯ ಕೆಲವು ಭಾಗಗಳು, ಬಂಗಾಳ ಕೊಲ್ಲಿಯ ನೈರುತ್ಯದ ಉಳಿದ ಪ್ರದೇಶಗಳು ಹಾಗೂ ಬಂಗಾಳ ಕೊಲ್ಲಿಯ ಪೂರ್ವಕೇಂದ್ರದ ಇನ್ನಷ್ಟು ಭಾಗಗಳನ್ನು ಪ್ರವೇಶಿಸಿದೆ' ಎಂದು ಐಎಂಡಿಯ ಇತ್ತೀಚಿನ ವರದಿ ಮಾಹಿತಿ ನೀಡಿದೆ.
ಕೇಂದ್ರ ಅರೇಬಿಯನ್ ಸಮುದ್ರ, ಕರ್ನಾಟಕ ಮತ್ತು ರಾಯಲಸೀಮೆಯ ಉಳಿದ ಭಾಗಗಳು, ದಕ್ಷಿಣ ಕೊಂಕಣ ಮತ್ತು ಗೋವಾ, ತೆಲಂಗಾಣದ ಕೆಲವು ಭಾಗಗಳು, ಆಂಧ್ರಪ್ರದೇಶದ ಕರಾವಳಿ ಮತ್ತು ಬಂಗಾಳ ಕೊಲ್ಲಿಯ ಕೇಂದ್ರದ ಮತ್ತಷ್ಟು ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ನೈರುತ್ಯ ಮುಂಗಾರು ಬಲಗೊಳ್ಳಲು ಪರಿಸ್ಥಿತಿ ಪೂರಕವಾಗುತ್ತಿದೆ.
ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಕರಾವಳಿಯಲ್ಲಿನ ಇನ್ನಷ್ಟು ಪ್ರದೇಶಗಳಲ್ಲಿ ಇನ್ನು 2-3 ದಿನಗಳಲ್ಲಿ ನೈರುತ್ಯ ಮುಂಗಾರು ಪ್ರಬಲವಾಗುವ ಸಾಧ್ಯತೆ ಇದೆ.
ಭಾರತದ ವಿವಿಧ ಭಾಗಗಳು, ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಮೇಲ್ಭಾಗದಲ್ಲಿ ಆವರಿಸಿರುವ ಮೋಡದ ವಾತಾವರಣವನ್ನು ಐಎಂಡಿ ಜೂನ್ 5ರಂದು ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರ ತೋರಿಸುತ್ತಿದೆ.
ಉಪಖಂಡ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಹವಾಮಾನ ಪರಿಸ್ಥಿತಿಯನ್ನು ತೋರಿಸುವ ಐಎಂಡಿಯ ಉಪಗ್ರಹ ಚಿತ್ರ
ಕೊಂಕಣ ಮತ್ತು ಗೋವಾದಲ್ಲಿ ಚಂಡಮಾರುತ ಬೀಸುವ ಲಕ್ಷಣಗಳು ಕಂಡುಬರುತ್ತಿವೆ. ಇದು ಕ್ರಮೇಣ ಮಹಾರಾಷ್ಟ್ರ ಕರಾವಳಿ ಮೂಲಕ ಉತ್ತರ ಭಾಗಕ್ಕೆ ಚಲಿಸಲಿದೆ ಎಂದು ಸ್ಕೈಮೆಟ್ ತಿಳಿಸಿದೆ.
ಮುಂಗಾರು ಮಾರುತಗಳು ಮೇ 29ರಂದು ಕೇರಳವನ್ನು ಪ್ರವೇಶಿಸಿದ್ದವು. ಜೂನ್ 1 ರಂದು ಕರ್ನಾಟಕವನ್ನು ಪ್ರವೇಶಿಸಲಿದೆ ಎಂದು ನಿರೀಕ್ಷೆ ಹೊಂದಲಾಗಿತ್ತು. ಆದರೆ, ವಾತಾವರಣ ವೈಪರೀತ್ಯದಿಂದ ಮೂರು ದಿನ ವಿಳಂಬವಾಗಿ ಪ್ರವೇಶಿಸಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡುಗಳಲ್ಲಿ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ ಪೂರ್ವ ಮುಂಗಾರು ಶೇ 40ರಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರಿಗಿಂತ ಮುನ್ನವೇ ಮಳೆ ಸುರಿದಿರುವುದರಿಂದ ಭೂಮಿ ಹಸನಾಗಿದ್ದು, ಬಿತ್ತನೆ ಕಾರ್ಯ ಮತ್ತು ಉಳುಮೆಗೆ ಪೂರಕವಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ.