ಕೇರಳ ಪ್ರವಾಹ, ಅಟಲ್ ಜೀ ಬಗ್ಗೆ ಮನ್ ಕೀ ಬಾತ್ ನಲ್ಲಿ ಮೋದಿ ಪ್ರಸ್ತಾವ
ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಿಗೇ ಚುನಾವಣೆ ನಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯಕರ ಮತ್ತು ಭಾರತದ ರಾಜಕೀಯ ಸಂಸ್ಕೃತಿಯನ್ನೇ ಬದಲಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲಿಸುವ ಸರಿಯಾದ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್'ನಲ್ಲಿ ಅಭಿಪ್ರಾಯಪಟ್ಟರು.
ಭಾರತೀಯ ಜನತಾ ಪಕ್ಷ ಮತ್ತು ಅದರ ಎನ್ ಡಿಎ ಮಿತ್ರಕೂಟ ಶಿರೋಮಣಿ ಅಕಾಲಿ ದಳ ಹಾಗೂ ಎಐಎಡಿಎಂಕೆ, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ ಒಂದೇ ಕಾಲಕ್ಕೆ ಚುನಾವಣೆ ನಡೆಸುವುದನ್ನು ಬೆಂಬಲಿಸುತ್ತಿವೆ. ಆದರೆ ಕಾಂಗ್ರೆಸ್, ಟಿಎಂಸಿ, ಆಮ್ ಆದ್ಮಿ ಪಕ್ಷ, ಡಿಎಂಕೆ, ಟಿಡಿಪಿ, ಎಡ ಪಕ್ಷಗಳು ಹಾಗೂ ಜೆಡಿಎಸ್ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದರು.
'ಶೂನ್ಯ ಆವರಿಸಿದೆ', ವಾಜಪೇಯಿ ಅಗಲಿಕೆ ನೋವಲ್ಲಿ ಮೋದಿ
ಉತ್ತಮ ಆಡಳಿತ ವ್ಯವಸ್ಥೆಯನ್ನು ತಂದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ ಮೋದಿ, ಅಟಲ್ ಜೀ ಅವರು ಭಾರತಕ್ಕೆ ನೀಡಿದ ರಾಜಕೀಯ ಸಂಸ್ಕೃತಿಯನ್ನು ನೆನೆಯುತ್ತೇನೆ. ರಾಜಕೀಯ ಸಂಸ್ಕೃತಿಯಲ್ಲಿ ಬದಲಾವಣೆ ತರಲು ಪಟ್ಟ ಶ್ರಮವನ್ನು ಸ್ಮರಿಸುತ್ತೇನೆ ಎಂದು ಮೋದಿ ಹೇಳಿದರು.
ಭಾರತದಲ್ಲಿ ಬಹಳ ವರ್ಷಗಳ ಕಾಲ ದೊಡ್ಡ ಗಾತ್ರದ ಸಂಪುಟ ರಚನೆ ಮಾಡುವ ಪದ್ಧತಿ ಇತ್ತು. ಆ ಮೂಲಕ ರಾಜಕೀಯ ಮುಖಂಡರನ್ನು ಓಲೈಸಲಾಗುತ್ತಿತ್ತು. ಅದನ್ನು ಬದಲಿಸಿದವರು ಅಟಲ್ ಜೀ. ಅವರ ಪ್ರಯತ್ನದ ಫಲವಾಗಿ ಹಣ ಹಾಗೂ ಸಂಪನ್ಮೂಲದ ಉಳಿತಾಯವಾಯಿತು. ಜತೆಗೆ ದಕ್ಷತೆ ಕೂಡ ಹೆಚ್ಚಾಯಿತು ಎಂದರು.
ಪಕ್ಷಾಂತರ ಕಾಯ್ದೆಗೆ ಮುಂಚೆ ಮೂರನೇ ಒಂದರಷ್ಟು ಎಂದಿದ್ದ ನಿಯಮವನ್ನು ಮೂರನೇ ಎರಡರಷ್ಟು ಎಂದು ತಿದ್ದುಪಡಿ ತಂದರು. ಈ ಹಿಂದೆ ಬ್ರಿಟಿಷರ ಕಾಲದಂತೆ ಇದ್ದ ಬಜೆಟ್ ಮಂಡನೆ ಸಮಯದಲ್ಲೂ ಬದಲಾವಣೆ ತಂದರು. ರಾಷ್ಟ್ರ ಧ್ವಜ ಬಳಕೆ ವಿಚಾರದಲ್ಲೂ ಬದಲಾವಣೆಗಳನ್ನು ತಂದು ಜನಸಾಮಾನ್ಯರಿಗೆ ತಿರಂಗಾವನ್ನು ಮತ್ತಷ್ಟು ಹತ್ತಿರ ಮಾಡಿದವರು ಅಟಲ್ ಎಂದು ಮೋದಿ ಹೇಳಿದರು.
ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ
ಕೇರಳ ಪ್ರವಾಹ ಪರಿಸ್ಥಿತಿಗೆ ಖೇದ ವ್ಯಕ್ತಪಡಿಸಿದ ಮೋದಿ, ಭಾರತೀಯ ಸೇನೆ, ವಾಯು ಹಾಗೂ ನೌಕಾ ದಳ, ಬಿಎಸ್ ಎಫ್. ಸಿಐಎಸ್ ಎಫ್ ಹಾಗೂ ಆರ್ ಎಎಫ್ ನ ಪರಿಹಾರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಈ ದೇಶ ಸಹಿಸುವುದಿಲ್ಲ. ಮಹಿಳೆಯರು ಹಾಗೂ ಯುವತಿಯರ ಮೇಲೆ ನಡೆಯುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸಂಸತ್ ನಲ್ಲಿ ಕಾನೂನು ಅಂಗೀಕಾರ ಮಾಡಲಾಗುವುದು ಎಂದರು.
ತ್ರಿವಳಿ ತಲಾಖ್ ರದ್ದು ಮಾಡುವ ವಿಚಾರವಾಗಿ ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಇಡೀ ದೇಶವು ಅವರ ಬೆನ್ನಿಗೆ ನಿಂತಿದೆ ಎಂದು ಹೇಳಿದರು.
ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದ ಎಲ್ಲ ಜಾಲದಲ್ಲಿ ಪ್ರಸಾರವಾಗುವ ನರೇಂದ್ರ ಮೋದಿ ಅವರ ಪ್ರತಿ ತಿಂಗಳ ಕಾರ್ಯಕ್ರಮವಾಗಿದ್ದು, ಈ ಭಾನುವಾರ ಪ್ರಸಾರ ಆಗಿದ್ದು ನಲವತ್ತೇಳನೇ ಕಾರ್ಯಕ್ರಮವಾಗಿದೆ.