ಪ್ರಧಾನಿಯ ಮನ್ ಕೀ ಬಾತ್ : ರಾಹುಲ್ ಗಾಂಧಿ ನೀಡಿದ ವ್ಯಂಗ್ಯ ಸಲಹೆ!
ನವದೆಹಲಿ, ಫೆ 21: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ 'ಮನ್ ಕೀ ಬಾತ್' ಬಾನುಲಿ ಕಾರ್ಯಕ್ರಮವನ್ನು ನಮ್ಮ ಸಿದ್ರಾಮಣ್ಣ 'ಚೌಚೌ ಬಾತ್' ಎಂದು ಲೇವಡಿ ಮಾಡಿದ್ದುಂಟು. ಈಗ ಅವರ ಪಕ್ಷದ ರಾಹುಲ್ ಗಾಂಧಿ ಇದನ್ನು ದೊಡ್ಡ ನಾಟಕ ಎಂದು ಲೇವಡಿ ಮಾಡಿದ್ದಾರೆ.
ಮಂಗಳವಾರ (ಫೆ 21) ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಐಡಿಯಾ ಕೊಡಿ ಎಂದು ಮೋದಿ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಳೆದ ತಿಂಗಳು ನಾನು ಕೊಟ್ಟ ಸಲಹೆಯನ್ನು ನೀವು ಪರಿಗಣಿಸಲಿಲ್ಲ. ಈ ಬಾರಿಯಾದರೂ ನಾನು ಕೊಡುವ ಸಲಹೆಯ ಬಗ್ಗೆ ಮಾತನಾಡಿ ಎಂದು ಕಾಲೆಳೆದಿದ್ದಾರೆ.
ದೇಶದ ಪ್ರತೀ ಪ್ರಜೆಗಳು ನಿಮ್ಮಿಂದ ಇದಕ್ಕೆ ಉತ್ತರ ನಿರೀಕ್ಷಿಸುತ್ತಿದ್ದಾರೆ ಎನ್ನುವ ಸತ್ಯ ತಿಳಿದಿದ್ದರೂ, ಜನರಿಂದ ಸಲಹೆಗಳನ್ನು ಯಾಕೆ ಕೇಳುತ್ತಿದ್ದೀರಾ ಎಂದು ಪ್ರಶ್ನಿಸಿರುವ ರಾಹುಲ್, ನೀರವ್ ಮೋದಿಯ 22 ಸಾವಿರ ಕೋಟಿ ಲೂಟಿ ಮತ್ತು ಪರಾರಿ, ರಾಫೇಲ್ ಬಹುಕೋಟಿ ಹಗರಣದ ಬಗ್ಗೆ ಮನ್ ಕೀ ಬಾತ್ ನಲ್ಲಿ ಮಾತನಾಡಿ ಎಂದು ರಾಹುಲ್ ಗಾಂಧಿ, ಮೋದಿ ವಿರುದ್ದ ವ್ಯಂಗ್ಯವಾಡಿದ್ದಾರೆ.
ಫೆಬ್ರವರಿ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಲಹೆಗಳನ್ನು ನೀಡಿ ಎಂದು ಮೋದಿ ಎಂದಿನಂತೆ ಕೇಳಿದ್ದರು. ಕಳೆದ ತಿಂಗಳೂ ಮೋದಿಗೆ ಸಲಹೆ ನೀಡಿದ್ದ ರಾಹುಲ್, ಯುವಕರಿಗೆ ಕೆಲಸ ಕೊಡಿ, ಚೀನಾ ಪಡೆಗಳನ್ನು ದೋಕ್ಲಾಂ ನಿಂದ ಓಡಿಸಿ ಮತ್ತು ಹರ್ಯಾಣದಲ್ಲಿ ಅತ್ಯಾಚಾರ ತಡೆಯಲು ಕ್ರಮತೆಗೆದುಕೊಳ್ಳಿ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ಕಳೆದ ವಾರ 'ಪರೀಕ್ಷಾ ಪೇ ಚರ್ಚಾ' ಬಗ್ಗೆಯೂ ಲೇವಡಿ ಮಾಡಿದ್ದ ರಾಹುಲ್, ವಿದ್ಯಾರ್ಥಿಗಳಲ್ಲಿ ಎರಡು ಗಂಟೆ ಪರೀಕ್ಷೆಯ ಬಗ್ಗೆ ಮಾತನಾಡುವ ಪ್ರಧಾನಿಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಗ್ಗೆ ಮಾತನಾಡಲು ಎರಡು ನಿಮಿಷ ಸಮಯವಿಲ್ಲವೇ ಎಂದು ಕಿಡಿಕಾರಿದ್ದರು. ರಾಹುಲ್ ಗಾಂಧಿ ಟ್ವೀಟಿಗೆ, ಟ್ವಿಟ್ಟಿಗರು ತಮಾಷೆಯಾಡಿದ್ದು ಹೀಗೆ, ಮುಂದೆ ಓದಿ..
1800-11-7800 ಸಂಖ್ಯೆಗೆ ಕರೆಮಾಡಿ, ಎನ್ಎಂ ಆಪ್ ಮೂಲಕ ಸಲಹೆ
ಇದೇ ತಿಂಗಳು 25ನೇ ತಾರೀಕಿನಂದು ನಡೆಯುವ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ, 1800-11-7800 ಸಂಖ್ಯೆಗೆ ಕರೆಮಾಡಿ ಅಥವಾ ಎನ್ಎಂ ಆಪ್ ಮೂಲಕ ನಿಮ್ಮ ಸಲಹೆಗಳನ್ನು ತಿಳಿಸಿ ಎಂದು ಪ್ರಧಾನಿ ಮೋದಿ ಮಾಡಿದ ಟ್ವೀಟಿಗೆ, ರಾಹುಲ್ ಮಾಡಿರುವ ರಿಪ್ಲೈ.
ಯುವರಾಜರು ಹೇಳುತ್ತಿರುವುದು 22ಸಾವಿರ ಕೋಟಿ
ಸರಕಾರದ ಡೇಟಾ ಪ್ರಕಾರ ಹನ್ನೊಂದು ಸಾವಿರ ಕೋಟಿ, ಯುವರಾಜರು ಹೇಳುತ್ತಿರುವುದು 22ಸಾವಿರ ಕೋಟಿ.. ಅಮ್ಮ, ಮಗ ಮತ್ತು ಇವರ ಕುಟುಂಬದವರಿಗೆ ದೊಡ್ದ ದೊಡ್ಡ ಹಗರಣವನ್ನು ಮಾಡಿ ಅನುಭವವಿದೆ. ಯುಪಿಎ ಅವಧಿಯಲ್ಲಿ ನೀಡಿರುವ ಸಾಲದ ಬಗ್ಗೆ ಅಂಕಿಅಂಶದ ಟ್ವೀಟ್
ಕಲ್ಲಿದ್ದಲು, ಕಾಮನ್ವೆಲ್ತ್, ಐಪಿಎಲ್, ಎಲ್ ಐಸಿ ಹೌಸಿಂಗ್ ಲೋನ್
ಅಲ್ಫಾಬೆಟಿಕಲ್ ಆರ್ಡರ್ ನಲ್ಲಿ ಒಂದೊಂದು ಕಾಂಗ್ರೆಸ್ ಹಗರಣ, ಕಲ್ಲಿದ್ದಲು, ಕಾಮನ್ವೆಲ್ತ್, ಐಪಿಎಲ್, ಎಲ್ ಐಸಿ ಹೌಸಿಂಗ್ ಲೋನ್, ಗಣಿ, ಮೇವು ಹಗರಣ ಮುಂತಾದವುಗಳನ್ನು ಪಟ್ಟಿಮಾಡಿ ಹೋಗು 10, ಜನಪಥ್ ಗೆ ಎಂದು ಲೇವಡಿ ಮಾಡಿರುವ ಟ್ವೀಟ್.
ಬಿಜೆಪಿಯವರು ಹಗರಣವನ್ನು ಮಾಡಿ, ಅದನ್ನು ಕಾಂಗ್ರೆಸ್ ಮೇಲೆ ಹೊರಿಸಿ
ರಾಹುಲ್ ಗಾಂಧಿ ವಿಪಕ್ಷದಲ್ಲಿ ಇರುವುದೇ ಸೂಕ್ತ, ಮೋದಿ ಮಾಡದೇ ಇರುವುದನ್ನು ಇವರು ಮಾಡುತ್ತಾರೆ. ಒಂದು ಗಾದೆಯಿದೆ, ಬಿಜೆಪಿಯವರು ಹಗರಣವನ್ನು ಮಾಡಿ, ಅದನ್ನು ಕಾಂಗ್ರೆಸ್ ಮೇಲೆ ಹೊರಿಸುತ್ತಾರೆ ಎನ್ನುವ ಟ್ವೀಟ್.
ಹಗರಣ ಮಾಡಿದವರು ದೇಶ ಬಿಟ್ಟು ಹೋಗುತ್ತಿರುವುದು 2014ರ ನಂತರ
ಹಗರಣಗಳೇನೂ ಭಾರತಕ್ಕೆ ಹೊಸದಲ್ಲ, 1950ರಂದಲೂ ಇದೆ. ಆದರೆ ಹಗರಣ ಮಾಡಿದವರು ದೇಶ ಬಿಟ್ಟು ಹೋಗುತ್ತಿರುವುದು 2014ರ ನಂತರ. ಒಪ್ಪಿಕೊಳ್ಳೋಣ ಮೋದಿ ಕಳ್ಳರನ್ನು ತಡವಾಗಿ ಹಿಡಿದರು, ಆದರೆ ಕಳ್ಳತನ ಮಾಡಿದ್ದು ಯಾರು ಎನ್ನುವ ಟ್ವೀಟ್.