ಮನ್ ಕೀ ಬಾತ್ ನಲ್ಲಿ ಶಾಂತಿ ಕಾಯುವ ಯೋಧರ ಸ್ಮರಣೆ
ಬೆಂಗಳೂರು, ಅಕ್ಟೋಬರ್ 29: ವಿಶ್ವಸಂಸ್ಥೆಯ ಶಾಂತಿ ಕಾಪಾಡುವ ಯೋಜನೆಯಲ್ಲಿ ನಮ್ಮ ಯೋಧರ ಪಾಲ್ಗೊಳ್ಳುವಿಕೆ ಮಹತ್ವದ ಪಾತ್ರವನ್ನು ವಹಿಸಿದೆ. ವಿಶ್ವ ಸಂಸ್ಥೆಯ ದಿನಾಚರಣೆಯ ಅಂಗವಾಗಿ ಜಗತ್ತಿನಾದ್ಯಂತ ಶಾಂತಿ ಕಾಯುವ ಯೋಧರು, ವಿಶ್ವಸಂಸ್ಥೆಯ ಪಾತ್ರವನ್ನು ಸ್ಮರಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವನ್ನು ಹೇಳಿದರು.
37ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸೋದರಿ ನಿವೇದಿತಾ ಅವರ 150ನೇ ಜನ್ಮ ವಾರ್ಷಿಕೋತ್ಸವ ಸಮಾರಂಭವನ್ನು ಸ್ಮರಿಸಿದ ಮೋದಿ ಅವರು, ನಮ್ಮ ಪುಣ್ಯ ಭೂಮಿಯಲ್ಲಿ ಅನೇಕ ಪವಿತ್ರಾತ್ಮಗಳು, ಸ್ವಾರ್ಥರಹಿತ ಸೇವೆ ಸಲ್ಲಿಸುವ ಮೂಲಕ ಮಾನವೀಯತೆಗೆ ಬೆಲೆ ತಂದಿವೆ.
ಸಿಸ್ಟರ್ ನಿವೇದಿತಾ ಅವರು ಈ ಪೈಕಿ ಒಂದು ಪವಿತ್ರ ವ್ಯಕ್ತಿಯಾಗಿದ್ದಾರೆ. ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಇಂಥ ವ್ಯಕ್ತಿಗಳ ಸ್ಮರಣೆ ಸಾಕು ಎಂದರು.
ಖಾದಿ ಮತ್ತು ಗ್ರಾಮೋದ್ಯಮದಿಂದ ಬಡವರ ಸಬಲೀಕರಣ ಸಾಧ್ಯವಾಗಿದೆ. ದೀಪಾವಳಿ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಗುರೇಜ್ ನಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ್ದು ಅವಿಸ್ಮರಣೀಯ ಕ್ಷಣ ಎಂದರು.
ಸೂರ್ಯ ಹಾಗೂ ನೀರಿನ ಮಹತ್ವ ಸಾರುವ ಛಾತ್ ಪೂಜಾದ ಬಗ್ಗೆ ಮಾತನಾಡಿದ ಮೋದಿ, ದೇಶವನ್ನು ಧಾರ್ಮಿಕ ಭಾವನೆಗಳ ಮೂಲಕ ಹಬ್ಬಗಳು ಹೇಗೆ ಬಂಧಿಸಿವೆ ಎಂಬುದನ್ನು ಸ್ಮರಿಸಿದರು.