ಆರ್ಥಿಕ ಕುಸಿತ ಎದುರಿಸುವುದು ಹೇಗೆ?: ಮೋದಿಗೆ ಆರು ಸಲಹೆ ನೀಡಿದ ಮನಮೋಹನ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 12: ಆರ್ಥಿಕತೆಯು ಸಹಜ ಸ್ಥಿತಿಗೆ ಬರಲು ಸರ್ಕಾರವು ಮೊದಲು ಜಿಎಸ್ಟಿಯನ್ನು ಸರಳ ಹಾಗೂ ಸುಧಾರಣೆ ಮಾಡಬೇಕು. ಗ್ರಾಮೀಣ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಬಂಡವಾಳ ಸೃಷ್ಟಿಯ ಸಾಲದ ಕೊರತೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ.
ಭಾರತವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ವಲಯವಾರು ಚೂರು ಚೂರು ಗಮನ ನೀಡುವಂತಹ ರಾಜಕೀಯ ಬಂಡವಾಳವನ್ನು ವ್ಯರ್ಥ ಮಾಡುವ ಬದಲು ಅಥವಾ ಅಪನಗದೀಕರಣದಂತಹ ಶಾಶ್ವತ ಬ್ಲಂಡರ್ಗಳನ್ನು ಎಸಗುವ ಬದಲು ಈಗ ರಚನಾತ್ಮಕ ಸುಧಾರಣೆಯ ಮುಂದಿನ ಪೀಳಿಗೆಯನ್ನು ನಡೆಸಬೇಕಾದ ಹೊಣೆ ಸರ್ಕಾರದ ಮೇಲಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ಮೋದಿ, ಮತ್ತವರ ಸಂಪುಟದ ಬಗ್ಗೆ ಸ್ವಾಮಿ ವ್ಯಾಪಕ ಟೀಕೆ!
'ನಾನು ಹಣಕಾಸು ಸಚಿವನಾಗಿದ್ದಾಗ ಮತ್ತು ಪ್ರಧಾನಿಯಾಗಿದ್ದಾಗ ನಮಗೆ ಸಂಪೂರ್ಣ ಬಹುಮತ ಸಿಕ್ಕಿರಲಿಲ್ಲ. ಈಗ ಮೋದಿ ಸರ್ಕಾರ ಸತತ ಎರಡು ಬಾರಿ ಬೃಹತ್ ಬಹುಮತದೊಂದಿಗೆ ಆಯ್ಕೆಯಾಗಿದೆ. ಹೀಗಿದ್ದರೂ ನಾವು 1991 ಮತ್ತು 2008ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದೆವು' ಎಂದು ಅವರು ತಿಳಿಸಿದ್ದಾರೆ. 'ದಿ ಬಿಜಿನೆಸ್ ಲೈನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ.
ಕಳವಳಕಾರಿ ಆರ್ಥಿಕ ಕುಸಿತ
ಭಾರತವು ಅತ್ಯಂತ ಕಳವಳಕಾರಿಯಾಗಿ ಆರ್ಥಿಕ ಕುಸಿತ ಅನುಭವಿಸುತ್ತಿದೆ. ಈ ಕುಸಿತ ಆರ್ಥಿಕತೆಯ ಪ್ರಮುಖ ವಲಯಗಳಿಗೆ ಭಾರಿ ಹೊಡೆತ ನೀಡಿದೆ. ಈ ಸಮಸ್ಯೆಗಳಿಗೆ ಸರ್ಕಾರವು ಪಾರದರ್ಶಕ ರೀತಿಯಲ್ಲಿ ಪರಿಹಾರ ಹುಡುಕಲು ಮುಂದಾಗಬೇಕು. ಪರಿಣತರ ಸಲಹೆ ಪಡೆದುಕೊಳ್ಳಬೇಕು. ಮುಖ್ಯವಾಗಿ ಸರ್ಕಾರವು ಜನರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಜತೆಗೆ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಬೇಕು. ದುರದೃಷ್ಟವಶಾತ್ ಮೋದಿ ಸರ್ಕಾರದಿಂದ ಅಂತಹ ಯಾವುದೇ ಪ್ರಯತ್ನ ಇದುವರೆಗೂ ನಡೆದಿರುವುದು ಕಂಡಿಲ್ಲ ಎಂದು ಸಿಂಗ್ ಟೀಕಿಸಿದರು.
ಆರ್ಥಿಕತೆ ಬಗ್ಗೆ ಮನಮೋಹನ್ ಸಿಂಗ್ ಎಚ್ಚರಿಕೆ ಆಲಿಸಿ: ಶಿವಸೇನೆ
ಕೃಷಿಗೆ ಹೊಡೆತ ನೀಡಿದ ನೋಟ್ ರದ್ದತಿ
ಆರ್ಥಿಕತೆಯ ಪ್ರಮುಖ ಭಾಗಗಳು ಆರ್ಥಿಕ ಸಮಸ್ಯೆಗೆ ಸಿಲುಕಿವೆ. ಉದಾಹರಣೆಗೆ ಕೃಷಿ ವಲಯವು ಜಿಡಿಪಿಯ ಶೇ 15ರಷ್ಟು ಕೊಡುಗೆ ನೀಡುತ್ತದೆ. ಅದು ಮುಖ್ಯವಾಗಿ ನಡೆಯುವುದು ನಗದು ರೂಪದಲ್ಲಿ. ಮುಖ್ಯವಾಗಿ ಅದು ತೆರಿಗೆ ರಹಿತವಾದದ್ದು. ಆದರೆ ಅಪಗನಗದೀಕರಣದ ಸಮಯದಲ್ಲಿ ನಗದು ಹಣವನ್ನು ಹಠಾತ್ತಾಗಿ ಹಿಂದಕ್ಕೆ ಪಡೆದುಕೊಂಡ ಪರಿಣಾಮ ಕೃಷಿ ಆರ್ಥಿಕತೆಗೆ ಹೊಡೆತ ಬಿದ್ದಿತು ಎಂದು ಸಿಂಗ್ ಅರೋಪಿಸಿದ್ದಾರೆ.
ಅಪನಗದೀಕರಣದ ಆತಂಕ ನಿಜವಾಗಿದೆ
ಅಪನಗದೀಕರಣದ ನಂತರದ ವರ್ಷದಲ್ಲಿ ಜಿಡಿಪಿಯಲ್ಲಿ ಕಾರ್ಪೊರೇಟ್ ಹೂಡಿಕೆಯ ಪ್ರಮಾಣ ಶೇ 7.5ರಿಂದ ಶೇ 2.7ಕ್ಕೆ ಕುಸಿದಿದೆ. ಇದು 2010-11ರಲ್ಲಿ ಜಿಡಿಪಿಯ ಶೇ 15ರಷ್ಟಿತ್ತು. ಇದರ ಅರ್ಥ, ಕೃಷಿಯಂತಹ ಅಸಂಘಟಿತ ವಲಯ ಮಾತ್ರವಲ್ಲ, ಸಂಘಟಿತ ವಲಯ ಕೂಡ ಅಪನಗದೀಕರಣದಿಂದ ಸಂಕಷ್ಟಕ್ಕೆ ಸಿಲುಕಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಅತ್ಯಂತ ಕೆಟ್ಟ ಹೊಡೆತ ತಿಂದಿವೆ. ಅಪನಗದೀಕರಣದ ನಿರ್ಧಾರದಿಂದ ಉಂಟಾಗುವ ಪರಿಣಾಮವು ದೀರ್ಘಾವಧಿ ಮತ್ತು ತೀವ್ರವಾಗಿರಲಿದೆ ಎಂಬ ನಮ್ಮ ಕಳವಳ ಸತ್ಯವಾಗಿದೆ.
ಜಿಎಸ್ಟಿಯ ಕಳಪೆ ಅನುಷ್ಠಾನ
ಅಪನಗದೀಕರಣದ ಆಘಾತದ ಬಳಿಕವೂ ಸರ್ಕಾರ ತರಾತುರಿಯಲ್ಲಿ ಜಿಎಸ್ಟಿ ಜಾರಿ ಮಾಡಿತ್ತು ಆರ್ಥಿಕತೆಗೆ ನೀಡಿದ ಮತ್ತೊಂದು ದೊಡ್ಡ ಪೆಟ್ಟು. ಜಿಎಸ್ಟಿ ಒಂದು ರಚನಾತ್ಮಕ ಸುಧಾರಣೆ. ಯುಪಿಎ ಸರ್ಕಾರದ ಅವಧಿಯಲ್ಲಿಯೇ ಅದನ್ನು ಜಾರಿಗೆ ತರಲು ಪ್ರಯತ್ನಿಸಿದ್ದೆವು. ನಾವು ಸುಧಾರಣೆಯ ಬೆಂಬಲಿಗರು. ಆದರೆ, ಅದನ್ನು ತುಂಬಾ ಕೆಟ್ಟದಾಗಿ ಅಳವಡಿಸಲಾಯಿತು. ದೊಡ್ಡ ಕಂಪೆನಿಗಳು ಜಿಎಸ್ಟಿ ರಸೀದಿ ನೀಡಬಲ್ಲ ಪೂರೈಕೆದಾರರಿಂದ ಖರೀದಿ ಮಾಡಲು ಆದ್ಯತೆ ನೀಡಿದ್ದರಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದವು.
ಮೋದಿ ಸರ್ಕಾರದಿಂದ ಆರ್ಥಿಕತೆಯ ಕೆಟ್ಟ ನಿರ್ವಹಣೆ: ಮನಮೋಹನ್ ಸಿಂಗ್
ಸಣ್ಣ ಮತ್ತು ಮಧ್ಯಮ ಉದ್ಯಮ ತತ್ತರ
ಜಿಎಸ್ಟಿ ಅಡಿಯಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವ ಭಾರತದ ಸಣ್ಣ ಕಂಪೆನಿಗಳಿಗೆ ಹೂಡುವ ಬದಲು ಆಮದಿಗೆ ಆದ್ಯತೆ ನೀಡಲಾಯಿತು. ಇಡೀ ಪೂರೈಕೆಯ ಸರಪಳಿಯನ್ನೇ ತುಂಡರಿಸಲಾಯಿತು. ಈಗ ನಮ್ಮ ಮಾರುಕಟ್ಟೆಗಳಲ್ಲಿ ಚೀನಾದ ಆಮದು ವಸ್ತುಗಳೇ ತುಂಬಿವೆ ಎನ್ನುವುದು ನಮಗೆ ತಿಳಿದಿದೆ.
ಇಷ್ಟಲ್ಲದೆ ತೆರಿಗೆ ಅಧಿಕಾರಿಗಳು ತೆರಿಗೆದಾರರಿಗೆ ಕಿರುಕುಳ ನೀಡುತ್ತಿರುವ ವರದಿಗಳೂ ಬಂದಿವೆ. ಜಿಎಸ್ಟಿಯ ಸಂಕೀರ್ಣ, ಬಹುಬಗೆಯ ತೆರಿಗೆಗಳು, ನಿರಂತರ ಬದಲಾಗುವ ಮತ್ತು ಸೃಷ್ಟಿಯಾಗುವ ನಿಯಮಗಳು ಮುಂತಾದವು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಗಾಸಿಯುಂಟು ಮಾಡಿವೆ.
ಜಿಎಸ್ಟಿಯನ್ನು ಸರಳಗೊಳಿಸಿ
ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವು ತಮ್ಮ 'ಶೀರ್ಷಿಕೆ ನಿರ್ವಹಣೆ'ಯ ಹವ್ಯಾಸದಿಂದ ಹೊರಬರಬೇಕು. ತನ್ನ ಆದ್ಯತೆಗಳಲ್ಲಿ ಮೊದಲನೆಯದಾಗಿ ಜಿಎಸ್ಟಿಯನ್ನು ಸರಳ ಮತ್ತು ಸುಧಾರಣೆ ಮಾಡಬೇಕಿದೆ. ಇದರಿಂದ ಆದಾಯ ಅಲ್ಪಾವಧಿಗೆ ನಷ್ಟವಾದರೂ ತೊಂದರೆಯಿಲ್ಲ. ಎರಡನೆಯದಾಗಿ ಗ್ರಾಮೀಣ ಬಳಕೆಯನ್ನು ವೃದ್ಧಿಸಲು ಮತ್ತು ಕೃಷಿಯನ್ನು ಪುನರುಜ್ಜೀವನಗೊಳಿಸಲು ಸೂಕ್ತ ಮಾರ್ಗಗಳನ್ನು ಹುಡುಕಬೇಕು. ಮೂರನೆಯದಾಗಿ, ಬಂಡವಾಳ ಸೃಷ್ಟಿಗೆ ಎದುರಾಗಿರುವ ಸಾಲದ ಕೊರತೆಯನ್ನು ಬಗೆಹರಿಸಬೇಕು. ಇದು ಸಾರ್ವಜನಿಕವಲಯದ ಬ್ಯಾಂಕುಗಳು ಮಾತ್ರವಲ್ಲ, ಎನ್ಬಿಎಫ್ಸಿಗಳನ್ನೂ ಉಳಿಸಬೇಕಿದೆ.
ರಫ್ತು ಮಾರುಕಟ್ಟೆ ಪ್ರಯೋಜನ ಬಳಸಿಕೊಳ್ಳಿ
ನಾಲ್ಕನೆಯದಾಗಿ ಜವಳಿ, ಆಟೋ, ಎಲೆಕ್ಟ್ರಾನಿಕ್ಸ್ ಮತ್ತು ದುಬಾರಿಯಲ್ಲದ ಮನೆ ನಿರ್ಮಾಣದಂತಹ ಮುಖ್ಯ ಉದ್ಯೋಗ ಸೃಷ್ಟಿಯ ವಲಯಗಳನ್ನು ಸುಧಾರಣೆ ಮಾಡಬೇಕು. ಮುಖ್ಯವಾಗಿ ಎಂಎಸ್ಎಂಇಗಳಿಗೆ ಆದ್ಯತೆ ನೀಡಬೇಕು. ಐದನೆಯದಾಗಿ, ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ತೆರೆದುಕೊಂಡಿರುವ ರಫ್ತು ಮಾರುಕಟ್ಟೆಯನ್ನು ಬಳಸಿಕೊಳ್ಳಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.
ಕೊನೆಯದಾಗಿ, ಬೃಹತ್ ಮಟ್ಟದ ಸಾರ್ವಜನಿಕ ಮೂಲಸೌಕರ್ಯದ ಅಭಿವೃದ್ಧಿಗೆ ವಿಶ್ವಾಸಾರ್ಹ ಮಾರ್ಗಸೂಚಿಯನ್ನು ರೂಪಿಸಬೇಕು. ಇದರಲ್ಲಿ ಖಾಸಗಿ ಹೂಡಿಕೆಗೂ ಗಮನ ಹರಿಸಬೇಕು. ಇವುಗಳು ರಚನಾತ್ಮಕವಾಗಿ ಸುಧಾರಣೆಯಾಗಬೇಕು. ಇವೆಲ್ಲವನ್ನೂ ಸರಿಯಾದ ರೀತಿಯಲ್ಲಿ ನಿಭಾಯಿಸಿದರೆ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿಯೇ ನಾವು ಅತ್ಯುತ್ತಮ ಬೆಳವಣಿಗೆಗೆ ಮರಳಬಹುದು ಎಂದು ಸಿಂಗ್ ತಿಳಿಸಿದ್ದಾರೆ.