ಆತಂಕಕಾರಿ, ವಿನಾಶಕಾರಿ ಮೋದಿ ಸರಕಾರವನ್ನು ತೊಲಗಿಸಬೇಕು: ಮ.ಮೋ.ಸಿಂಗ್
ಪ್ರಧಾನಿ ನರೇಂದ್ರ ಮೋದಿಗೆ ಹೊರಡುವ ಬಾಗಿಲು ತೋರಿಸಲೇಬೇಕು. ಅವರ ಐದು ವರ್ಷದ ಆಡಳಿತಾವಧಿಯು ಭಾರತದ ಯುವ ಜನರು, ರೈತರು, ವ್ಯಾಪಾರಿಗಳು ಹಾಗೂ ಎಲ್ಲ ಪ್ರಜಾಪ್ರಭುತ್ವ ಸಂಸ್ಥೆಗಳ ಪಾಲಿಗೆ ಆಘಾತಕಾರಿ ಹಾಗೂ ವಿನಾಶಕಾರಿ ಆಗಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅಲೆ ಇಲ್ಲ ಎಂದರು. ಕೋಮು ಸೌಹಾರ್ದತೆ ಕಲುಕುವ ಮೂಲಕ ರಾಜಕಾರಣ ಮಾಡುವ ಚಿಂತೆಯಲ್ಲಿದ್ದಾರೆ. ಒಳಗೊಳ್ಳುವ ಅಭಿವೃದ್ಧಿ ಬಗ್ಗೆ ನಂಬಿಕೆ ಇಲ್ಲ. ಆದ್ದರಿಂದ ಸರಕಾರದ ವಿರುದ್ಧ ತಮ್ಮ ಮತ ಚಲಾಯಿಸಲು ಜನರು ನಿರ್ಧರಿಸಿದ್ದಾರೆ ಎಂದಿದ್ದಾರೆ.
ಯುಪಿಎ ಅವಧಿಯಲ್ಲಿ ಅನೇಕ ಸರ್ಜಿಕಲ್ ಸ್ಟ್ರೈಕ್ಸ್ ನಡೆದಿದ್ದವು: ಮನಮೋಹನ್ ಸಿಂಗ್
ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣ ಅಂದರೆ ಅದು ಅಪನಗದೀಕರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಬಿಜೆಪಿಯು ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಹಗರಣಗಳು ನಡೆದಿವೆ ಎಂದು ಆರೋಪಿಸಿತ್ತು.
ಪಾಕಿಸ್ತಾನದ ಬಗ್ಗೆ ಮೋದಿ ನೀತಿ ಸ್ಪಷ್ಟವಿಲ್ಲ
ಪಾಕಿಸ್ತಾನದ ಬಗ್ಗೆ ಪ್ರಧಾನಿ ಮೋದಿ ಅವರ ನೀತಿಯಲ್ಲಿ ಇಬ್ಬಗೆ ಇದೆ. ಆಹ್ವಾನವೇ ನೀಡದೆ ಪಾಕಿಸ್ತಾನಕ್ಕೆ ಹೋಗುವುದರಿಂದ ಶುರುವಾಗಿ, ಪಠಾಣ್ ಕೋಟ್ ವಾಯುಸೇನೆ ಮೇಲೆ ನಡೆದ ಭಯೋತ್ಪಾದನಾ ದಾಳಿ ವಿಚಾರಣೆಗೆ 'ದುಷ್ಟ' ಐಎಸ್ ಐ ಅನ್ನು ಆಹ್ವಾನಿಸುವ ತನಕ ಅವರ ನಡೆಯಲ್ಲೇ ಇಬ್ಬಗೆ ನೀತಿ ಇದೆ. ಇನ್ನು ಭಾರತದ ಆರ್ಥಿಕ ಪ್ರಗತಿ ನಿಧಾನವಾಗಿದೆ. ಮೋದಿ ಅಡಳಿತಾವಧಿಯಲ್ಲಿ ದೇಶದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ಜನರು ಈಗಿನ ಪರಿಸ್ಥಿತಿಯಿಂದ ರೋಸತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪುಲ್ವಾಮಾ ಭಯೋತ್ಪಾದನಾ ದಾಳಿಯು ಒಟ್ಟಾರೆ ಗುಪ್ತಚರ ಇಲಾಖೆ ವೈಫಲ್ಯ. ಈ ಸರಕಾರವು ಭಯೋತ್ಪಾದನೆ ನಿಗ್ರಹಕ್ಕೆ ಎಷ್ಟರ ಮಟ್ಟಿಗೆ ಸಂಸಿದ್ಧಗೊಂಡಿದೆ ಎಂದು ತಿಳಿದುಕೊಳ್ಳುವುದಕ್ಕೆ ಒಂದು ನಿದರ್ಶನ. ಎಲ್ಲಿಂದ ಎಲ್ಲಿವರೆಗೂ ನೋಡಿದರು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಮೋದಿ ವೈಫಲ್ಯ ಎದ್ದು ಕಾಣುತ್ತದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಚಿಂತೆ
ಒಂದೇ ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗಲ್ಲ. ಜಮ್ಮುಕಾಶ್ಮೀರ ಒಂದರಲ್ಲೇ ಭಯೋತ್ಪಾದನೆ ನೂರಾ ಎಪ್ಪತ್ತಾರು ಪರ್ಸೆಂಟ್ ಹೆಚ್ಚಾಗಿದೆ. ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಸಾವಿರ ಪರ್ಸೆಂಟ್ ಹೆಚ್ಚಿದೆ. ಇದು ಕಳೆದ ಐದು ವರ್ಷದ ಲೆಕ್ಕಾಚಾರ ಎಂದಿದ್ದಾರೆ. ಬಿಜೆಪಿಯ ಮತ್ತೊಂದು ಹೆಸರೇ ದ್ವೇಷ ಹಾಗೂ ವಿಭಜನೆ. ಈ ಸರಕಾರಕ್ಕೆ ಒಳಗೊಳ್ಳುವ ಪ್ರಗತಿಯಲ್ಲಿ ನಂಬಿಕೆ ಇಲ್ಲ. ಇದಕ್ಕೆ ಕೋಮು ಸೌಹಾರ್ದ ಕದಡಿ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಬಗ್ಗೆ ಮಾತ್ರ ಚಿಂತೆ. ಇದನ್ನು ತೊಲಗಿಸಲು ಬಾಗಿಲು ತೋರಿಸಲೇ ಬೇಕಿದೆ ಎಂದು ಅವರು ಹೇಳಿದ್ದಾರೆ.
ಆಡಳಿತ ಹಾಗೂ ಉತ್ತರದಾಯಿತ್ವದ ವೈಫಲ್ಯ
ಐದು ವರ್ಷಗಳ ಮೋದಿ ಸರಕಾರವು ಆಡಳಿತ ಮತ್ತು ಉತ್ತರದಾಯಿತ್ವ ವೈಫಲ್ಯದ ಕಥೆಯನ್ನು ಸಾರುತ್ತದೆ. ಐದು ವರ್ಷದ ಹಿಂದೆ ಮೋದಿ ಜೀ ಅಧಿಕಾರಕ್ಕೆ ಬಂದಾಗ ಅಚ್ಛೇ ದಿನ್ ನ ಭರವಸೆ ನೀಡಿದ್ದರು. ಅವರ ಐದು ವರ್ಷದ ಆಡಳಿತವು ಭಾರತದ ಯುವಜನರು, ರೈತರು, ವ್ಯಾಪಾರಿಗಳು, ವರ್ತಕರು ಹಾಗೂ ಪ್ರತಿ ಪ್ರಜಾಪ್ರಭುತ್ವ ಸಂಸ್ಥೆಗೆ ಅಘಾತಕಾರಿ ಹಾಗೂ ವಿನಾಶಕಾರಿ ಆಗಿದೆ ಎಂದು ಆರೋಪಿಸಿದ್ದಾರೆ. ಒಬ್ಬ ವ್ಯಕ್ತಿಯ ತನ್ನ ಅಲೋಚನಾ ಕ್ರಮ, ಮನಸ್ಥಿತಿಯನ್ನು ವೈವಿಧ್ಯಮಯವಾದ ಭಾರತದ ಮೇಲೆ ಹೇರಲು ಸಾಧ್ಯವಿಲ್ಲ್. ಆ ಮೂಲಕ ಜನರ ಭರವಸೆ, ಆಶಯಗಳಿಗೆ ಯಾವುದೇ ನ್ಯಾಯ ಒದಗಿಸುವುದು ಸಾಧ್ಯವಿಲ್ಲ. ಪ್ರತಿನಿಧಿಸುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಭಾರತದ ನೂರಾ ಮೂವತ್ತು ಕೊಟಿ ಜನರ ಆಶಯ ಪ್ರತಿನಿಧಿಸಬೇಕು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆ ನಿವಾರಿಸಬೇಕು ಎಂದು ಭಾರತಕ್ಕೆ ಅಧ್ಯಕ್ಷೀಯ ಮಾದರಿ ಚುನಾವಣೆ ಸೂಕ್ತ ಆಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದರು.
ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವುದು ಉದ್ದೇಶ
ವಿದೇಶಿ ನೀತಿ ಬಗ್ಗೆ ಮಾತನಾಡಿ, ಭಾರತವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿ ಹಾದಿಯಲ್ಲೇ ಸಾಗಿದೆ. ಸೂಕ್ಷ್ಮ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಅರಿತು ಮುಂದಕ್ಕೆ ಸಾಗಿದೆ. ಭಾರತದ ವಿದೇಶಾಂಗ ನೀತಿಯು ಯಾವುದೇ ಒಬ್ಬ ವ್ಯಕ್ತಿಯ ವರ್ಚಸ್ಸು ಹೆಚ್ಚಿಸುವುದಕ್ಕಾಗಿ ಅಲ್ಲ. ಆದರೆ ಈ ಸರಕಾರಕ್ಕೆ ಪ್ರಜಾಪ್ರಭುತ್ವದ ಸಮಗ್ರತೆ ಮೇಲೆ ಪ್ರಬುದ್ಧ ವಿದೇಶಾಂಗ ನೀತಿ ಇರುವುದು ಕಾಣುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.