'ಬ್ಯಾಂಕಿಗೆ ಹಣ ಹಾಕಬಹುದು, ಆದ್ರೆ ವಾಪಸ್ ತಗಳಂಗಿಲ್ಲ' - ತಕ್ಕಳಪ್ಪ!
"ಅಪನಗದೀಕರಣದಿಂದ ದೀರ್ಘಕಾಲೀನ ಲಾಭವಿದೆ ಎಂದು ಅಂದುಕೊಳ್ಳುವವರು ಈ ಹೇಳಿಕೆಯನ್ನು ಗಮನಿಸಬೇಕು. ಅದೇನೆಂದರೆ, ಆ ಸುದೀರ್ಘ ಪಯಣದಲ್ಲಿ ನಾವು ಸತ್ತೇ ಹೋಗಿರುತ್ತೇವೆ." - ಡಾ. ಮನಮೋಹನ ಸಿಂಗ್.
ನವದೆಹಲಿ, ನವೆಂಬರ್ 24 : ಅಪನಗದೀಕರಣದ ಬಗ್ಗೆ ಮಾತನಾಡಲು ಕಡೆಗೂ ಅವಕಾಶ ಪಡೆದ ಮಾಜಿ ಪ್ರಧಾನಿ, ಖ್ಯಾತ ಅರ್ಥಜ್ಞಾಸ್ತ್ರಜ್ಞ ಡಾ. ಮನಮೋಹನ ಸಿಂಗ್ ಅವರು, ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ನೋಟು ನಿಷೇಧ ಯಜ್ಞದ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.
"ಅಪನಗದೀಕರಣದಿಂದ ದೀರ್ಘಕಾಲೀನ ಲಾಭವಿದೆ ಎಂದು ಅಂದುಕೊಳ್ಳುವವರು ಈ ಹೇಳಿಕೆಯನ್ನು ಗಮನಿಸಬೇಕು. ಅದೇನೆಂದರೆ, ಆ ಸುದೀರ್ಘ ಪಯಣದಲ್ಲಿ ನಾವು ಸತ್ತೇ ಹೋಗಿರುತ್ತೇವೆ" ಎಂದು ಮನಮೋಹನ ಸಿಂಗ್ ಅವರು ಮಾರ್ಮಿಕವಾಗಿ ನುಡಿದು, ನರೇಂದ್ರ ಮೋದಿಯವರನ್ನು ಕುಟುಕಿದ್ದಾರೆ.
ತಮ್ಮ ಮಾತಿನ ವರಸೆಯನ್ನು ಮುಂದುವರಿಸಿದ ಅವರು, ನಾನು ಪ್ರಧಾನಿಯನ್ನು ಕೇಳಬಯುತ್ತೇನೆ. ಬ್ಯಾಂಕಿಗೆ ನಮ್ಮ ಹಣವನ್ನು ಹಾಕಿ ಹಿಂತೆಗೆಯಲು ಸಾಧ್ಯವಾಗದಂತಹ ಒಂದೇ ಒಂದು ರಾಷ್ಟ್ರದ ಹೆಸರನ್ನು ಹೇಳಿ ನೋಡೋಣ ಎಂದು ಮಾಜಿ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು. [ಕಪ್ಪು ಹಣದ ಕರಾಳ ಜಾಲ, ಸರಕಾರಕ್ಕಿರುವ ಸವಾಲು]
ಇನ್ನೂ 50 ದಿನ ಕಾಯಿರಿ, ಎಲ್ಲ ಸರಿಹೋಗುತ್ತದೆ ಎಂದು ಜನತೆಯನ್ನು ಪ್ರಧಾನಿಯವರು ಕೇಳಿಕೊಂಡಿದ್ದಾರೆ. ಆದರೆ, ಅದೇ 50 ದಿನಗಳು ಭಾರತದ ಬಡಜನತೆಯ ಪಾಲಿಗೆ ಕಷ್ಟಕರವಾಗಿರುತ್ತವೆ ಎಂದು ಅವರು ರಾಜ್ಯಸಭೆಯಲ್ಲಿ ಗುರುವಾರ ನುಡಿದರು.
ನೋಟು ನಿಷೇಧವನ್ನು ಜಾರಿಗೊಳಿಸುವಾಗ ಭಾರೀ ತಿದ್ದುಪಡಿ ಮಾಡಲಾಗದ ತಪ್ಪುಗಳು ನಡೆದುಹೋಗಿವೆ. ಕಷ್ಟ ಅನುಭವಿಸುತ್ತಿರುವ ಜನರಿಗೆ ಪರಿಹಾರ ನೀಡಲು ನರೇಂದ್ರ ಮೋದಿ ಅವರು ಪ್ರಾಯೋಗಿಕ ವಿಧಾನಗಳನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. [ಧೈರ್ಯವಿದ್ರೆ ಲೋಕಸಭೆ ವಿಸರ್ಜಿಸಿ, ನರೇಂದ್ರ ಮೋದಿಗೆ ಮಾಯಾವತಿ ಚಾಲೆಂಜ್]
ಹಳ್ಳಿಗಳಲ್ಲಿ ಜನರು ಅನುಭವಿಸುತ್ತಿರುವ ತೊಂದರೆಯ ಬಗ್ಗೆ ಗಮನ ಸೆಳೆದ ಅವರು, ಗ್ರಾಮಗಳಲ್ಲಿ ಹಲವಾರು ಸಹಕಾರಿ ಬ್ಯಾಂಕುಗಳು ಜನರ ಸೇವೆ ಸಲ್ಲಿಸುತ್ತಿವೆ. ಆದರೆ, ಅವೇ ಈಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಈಗಾಗಲೆ 60-65 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ನಡೆಯುತ್ತಿರುವುದರಿಂದ ರುಪಾಯಿ ಮತ್ತು ಬ್ಯಾಂಕುಗಳ ಮೇಲೆ ಜನರ ವಿಶ್ವಾಸ ಕುಂದಬಹುದು, ಈ ನಡೆಗಳು ಜನರನ್ನು ಮತ್ತಷ್ಟು ಬಲಹೀನ ಮಾಡಬಹುದು ಎಂದು ಅವರು ನುಡಿದರು.