ಮಣಿಪುರದಲ್ಲಿ ಬಿಜೆಪಿ, ಆರೆಸ್ಸೆಸ್ ಮೇಲೆ ರಾಹುಲ್ ಗಾಂಧಿ ಮಾತಿನ ಪ್ರಹಾರ
ಇಂಫಾಲ್, ಮಾರ್ಚ್ 20: "ಬಿಜೆಪಿ ಮತ್ತು ಆರೆಸ್ಸೆಸ್ ಗಳು ಎಲ್ಲ ಸಂಸ್ಕೃತಿಯನ್ನೂ ಗೌರವಿಸುವುದಾಗಿ ಹೇಳುತ್ತವೆ. ಆದರೆ ಅಸಲಿಗೆ ಅವಕ್ಕೆ ಬೇರೆ ಸಂಸ್ಕೃತಿಗಳೆಂದರೆ ಭಯ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಮಾತಿನ ಪ್ರಹಾರ ನಡೆಸಿದರು.
ಮಣಿಪುರದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಅವರು, ಮಾತು ಆರಂಭಿಸುವಾಗಲೇ ಎಂದಿನಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು.
ಕರ್ನಾಟಕದಿಂದ ಸ್ಪರ್ಧೆ : ರಾಹುಲ್ ಗಾಂಧಿ ಹೇಳಿದ್ದೇನು?
ಸಾಂಸ್ಕೃತಿಯ ಸಾಮ್ರಾಜ್ಯಶಾಹಿತ್ವವನ್ನು ಕಾಂಗ್ರೆಸ್ ಎಂದಿಗೂ ನಂಬುವುದಿಲ್ಲ. ದೇಶದ ಒಂದು ಭಾಗ ಇನ್ನೊಂದು ಭಾಗವನ್ನು ಆಳಬೇಕು ಎಂಬುದನ್ನು ನಾವು ನಂಬುವುದಿಲ್ಲ. ಈ ದೇಶದ ಎಲ್ಲಾ ಭಾಗಗಳೂ ಅವಕ್ಕೆ ಇಷ್ಟವಾದಂತೆ ಬದುಕುವುದನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ದುಬಾರಿ ಶಿಕ್ಷಣ
ಕೇಂದ್ರ ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ಅನುದಾನ ನೀಡುತ್ತಿಲ್ಲವಾದ ಕಾರಣ ಶಿಕ್ಷಣ ಕ್ಷೇತ್ರ ದುಬಾರಿಯಾಗಿದೆ. ಕೇಂದ್ರ ಸರ್ಕಾರದ ಯಾವ ನಿರ್ಧಾರಗಳಲ್ಲೂ ಹುರುಳಿಲ್ಲ. ಅಪನಗದೀಕರಣವೂ ಅಷ್ಟೆ. ನಿಜ ಹೇಳಬೇಕೆಂದರೆ ಪ್ರಧಾನಿ ಮೋದಿ ಅವರಿಗೆ ಅರ್ಥಶಾಸ್ತ್ರ ಎಂದರೆ ಏನು ಎಂಬುದೇ ಗೊತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಉತ್ತರ ಪ್ರದೇಶ ಬಿಟ್ಟು ಹೊರಬಂದರಷ್ಟೇ ರಾಹುಲ್ ಗಾಂಧಿಗೆ ಚಾನ್ಸ್?
ಭಯವನ್ನು ದ್ವೇಷವಾಗಿ ಬದಲಿಸಿಕೊಳ್ಳಬೇಡಿ
ದ್ವೇಷದಿಂದ ಜೀವನದಲ್ಲಿ ಏನನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಪ್ರೀತಿ, ಅಕ್ಕರೆ ಮತ್ತು ಮಾನವೀಯತೆಯಿಂದ ಅದು ಸಾಧ್ಯ. ನನಗೆ ಗೊತ್ತು ನೀವೆಲ್ಲರೂ ನಿಮ್ಮ ಭವಿಷ್ಯದ ಬಗ್ಗೆ ಕಂಗಾಲಾಗಿದ್ದೀರಿ. ಆದರೆ ನಾವೆಲ್ಲರೂ ಒಟ್ಟಾಗಿ ಆ ಸಮಸ್ಯೆಯನ್ನು ನಿವಾರಿಸೋಣ. ನಿಮ್ಮ ಭಯವನ್ನು ನೀವು ದ್ವೇಷವನ್ನಾಗಿ ಬದಲಾಯಿಸಿಕೊಳ್ಳಬೇಡಿ ಎಂದು ರಾಹುಲ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಗಬ್ಬರ್ ಸಿಂಗ್ ಟ್ಯಾಕ್ಸ್
ಜಿಎಸ್ಟಿಯ ಮೂಲ ಉದ್ದೇಶ ತೆರಿಗೆಯನ್ನು ಮತ್ತಷ್ಟು ಸರಳ ಮಾಡುವುದು ಮತ್ತು ಕನಿಷ್ಠ ತೆರಿಗೆ ನೀಡುವಂತೆ ಮಾಡುವುದಾಗಿತ್ತು. ಆದರೆ ಮೋದಿಯವರು ಜಿಎಸ್ಟಿಗಾಗಿ ದೇಶವನ್ನು ಮಾರಿದರು. ಆ ಜಿಎಸ್ಟಿ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.
ನಾಗರಿಕತ್ವ ತಿದ್ದುಪಡಿ ವಿಧೇಯಕ
ನಾಗರಿಕತ್ವ ತಿದ್ದುಪಡಿ ವಿಧೇಯಕದ ವಿರುದ್ಧ ನಾವು ಸಂಸತ್ತಿನಲ್ಲಿ ಹೋರಾಡಿದೆವು. ಈಶಾನ್ಯ ರಾಜ್ಯವನ್ನು ಯಾರೂ ಅತಿಕ್ರಮಣ ಮಾಡದಂತೆ ನಾವು ನೋಡಿಕೊಳ್ಳುತ್ತೇವೆ. ನಾಗರಿಕತ್ವ ತಿದ್ದುಪಡಿ ವಿದೇಯಕ ಕಾನೂನಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅವರು ಈಶಾನ್ಯ ಜನತೆಗೆ ಅಭಯ ನೀಡಿದರು.