ಮಣಿಪುರ ಭೂಕುಸಿತ: 15 ಸೈನಿಕರು, 29 ನಾಗರಿಕರಿಗಾಗಿ ಶೋಧ
ಮಣಿಪುರ ಜೂನ್ 2: ಮಣಿಪುರದಲ್ಲಿ ಭೂಕುಸಿತದ ನಂತರ ನಾಪತ್ತೆಯಾಗಿರುವ 15 ಪ್ರಾದೇಶಿಕ ಸೇನಾ ಯೋಧರು ಮತ್ತು 29 ನಾಗರಿಕರ ಹುಡುಕಾಟ ನಿರಂತರವಾಗಿ ಮುಂದುವರಿದಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಮಣಿಪುರದ ನೋನಿ ಜಿಲ್ಲೆಯ ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಇದುವರೆಗೆ 17 ಶವಗಳನ್ನು ಹೊರ ತೆಗೆಯಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಎನ್ಡಿಆರ್ಎಫ್ ಶನಿವಾರ ತಿಳಿಸಿದೆ.
ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಸ್ಥಳದ ಸಮೀಪವಿರುವ 107 ಟೆರಿಟೋರಿಯಲ್ ಆರ್ಮಿ (ಟಿಎ) ಶಿಬಿರದಲ್ಲಿ ಬುಧವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿತ್ತು. ಭೂಕುಸಿತದ ಮಣ್ಣು ನದಿಗೆ ಅಡ್ಡಲಾಗಿ ಬಿದ್ದಿದ್ದು ಅಣೆಕಟ್ಟಿನಿಂದ ಭಾರಿ ಪ್ರಮಾಣದ ನೀರು ಪ್ರವಾಹವನ್ನು ಉಂಟು ಮಾಡಿದೆ. ಬಳಿಕ ಅನೇಕ ಸಾವು ನೋವುಗಳು ಸಂಭವಿಸಿವೆ. ನದಿಯಿಂದ ಮೃತದೇಹಗಳನ್ನು ಹೊರತೆಗೆಯಲು ಅಗೆಯುವ ಯಂತ್ರಗಳನ್ನು ಬಳಸಲಾಗುತ್ತಿದೆ. ಹಲವಾರು ಯೋಧರು ಸೇರಿದಂತೆ ಕನಿಷ್ಠ 55 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಗಾಯಾಳುಗಳು ಆಸ್ಪತ್ರೆಗೆ ದಾಖಲು
ಬುಧವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿದ ಪ್ರಾದೇಶಿಕ ಸೇನೆಯ ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಶಿಬಿರದಲ್ಲಿ ಒಟ್ಟು 3 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳು ಮತ್ತು ಸೇನೆ, ರಾಜ್ಯ ಪೊಲೀಸ್ ಮತ್ತು ಸ್ಥಳೀಯ ಆಡಳಿತದ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಕ್ತಾರರು ತಿಳಿಸಿದ್ದಾರೆ. ಜಂಟಿ ಕಾರ್ಯಾಚರಣೆಯಲ್ಲಿ ಇದುವರೆಗೆ 17 ಮೃತ ದೇಹಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ. NDRF ತಂಡಗಳ ಆಗಮನದ ಮೊದಲು ಅಂದರೆ ಜೂನ್ 30 ರಂದು 18 ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಇದಕ್ಕೂ ಮೊದಲು, ಈಸ್ಟರ್ನ್ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಆರ್ಪಿ ಕಲಿತಾ ಅವರು ಗಾಯಗೊಂಡ ಪ್ರಾದೇಶಿಕ ಸೇನಾ ಸಿಬ್ಬಂದಿಯನ್ನು ಗುರುವಾರ ಭೇಟಿಯಾಗಿದ್ದು ಅವರನ್ನು ಆರಂಭದಲ್ಲಿ ಲೀಮಾಕಾಂಗ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
|
ಸಿಎಂ ಜೊತೆ ಪರಿಸ್ಥಿತಿ ಮೇಲ್ವಿಚಾರಣೆ
ಘಟನೆ ತಿಳಿದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದು ತುರ್ತು ಕಾರ್ಯಚರಣೆಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವೊಂದು ಭೂಕುಸಿತ ಸ್ಥಳಕ್ಕೆ ತಲುಪಿದ್ದು, ಇನ್ನೂ ಎರಡು ತಂಡಗಳು ತೆರಳುತ್ತಿವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಮಣಿಪುರದ ತುಪುಲ್ ರೈಲು ನಿಲ್ದಾಣದ ಬಳಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಸಿಎಂ ಎನ್ ಬಿರೇನ್ ಸಿಂಗ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಎನ್ಡಿಆರ್ಎಫ್ ತಂಡ ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಇನ್ನೂ 2 ತಂಡಗಳು ತುಪುಲ್ಗೆ ತೆರಳುತ್ತಿವೆ ಎಂದು ಶಾ ಟ್ವೀಟ್ ಮಾಡಿದ್ದಾರೆ.
|
ಅಧಿಕ ಜನರು ಜೀವಂತ ಸಮಾಧಿ
ಭಾರಿ ಮಳೆಯಿಂದಾಗಿ ಇಜೆಯಿ ನದಿ ಉಕ್ಕಿ ಹರಿದು ತಗ್ಗು ಪ್ರದೇಶಗಳನ್ನು ಮುಳುಗಿಸಿ ಜಲಾಶಯವನ್ನು ಸೃಷ್ಟಿಸಿದೆ. ಈ ಘಟನೆಯ ಬಳಿಕ ನೋನಿ ಜಿಲ್ಲಾಧಿಕಾರಿ ಹೊರಡಿಸಿದ ಸಲಹೆಯಲ್ಲಿ, "ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಶಿಬಿರದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಸಾವುನೋವುಗಳು ವರದಿಯಾಗಿವೆ. ಜೊತೆಗೆ ಅಧಿಕ ಜನರು ಜೀವಂತ ಸಮಾಧಿಯಾಗಿದ್ದಾರೆ. ಇಜೆಯಿ ನದಿಯ ಹರಿವು ಸಹ ಅವಶೇಷಗಳನ್ನು ಆಕ್ರಮಿಸಿದೆ. ಇದರಿಂದ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಇಜೆಯಿ ನದಿ ಅಣೆಕಟ್ಟಿನ ಶೇಖರಣಾ ಸ್ಥಿತಿ ಮೀರಿ ಒಡೆದರೆ ನೋನಿ ಜಿಲ್ಲಾ ಕೇಂದ್ರದ ತಗ್ಗು ಪ್ರದೇಶಗಳಿಗೆ ಹಾನಿಯನ್ನುಂಟುಮಾಡುತ್ತದೆ. ಮಾತ್ರವಲ್ಲದೇ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಜೊತೆಗೆ ಸುರಕ್ಷಿತ ಸ್ಥಳಕ್ಕೆ ತೆರಳುವುದು ಉತ್ತಮ ಎಂದಿದ್ದಾರೆ. ವಿಶೇಷವಾಗಿ ಮಕ್ಕಳು ನದಿಯ ಬಳಿಗೆ ಬರದಂತೆ ನೋಡಿಕೊಳ್ಳಿ. ಯಾರು ಸ್ಥಳಾಂತರಿಸಬಹುದೋ ಅವರನ್ನು ಸ್ಥಳಾಂತರಿಸಲು ಸಹ ಸೂಚಿಸಲಾಗಿದೆ. ಸಾರ್ವಜನಿಕರಿಗೆ ಮತ್ತಷ್ಟು ಎಚ್ಚರಿಕೆ ವಹಿಸಲು ಮತ್ತು ಮಳೆಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಾಗ ಯಾವುದೇ ಸಹಾಯಕ್ಕೆ ಸಿದ್ಧರಾಗಿರಲು ಸೂಚಿಸಲಾಗಿದೆ'' ಎಂದಿದ್ದಾರೆ.
ವೈದ್ಯರೊಂದಿಗೆ ಆಂಬ್ಯುಲೆನ್ಸ್ ಸೇವೆ
ಮಾತ್ರವಲ್ಲದೆ ಅನೇಕ ರಸ್ತೆ ತಡೆಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ 37 ಅನ್ನು ತಪ್ಪಿಸಲು ಪ್ರಯಾಣಿಕರಿಗೆ ಸಲಹೆ ನೀಡಿದೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ತುರ್ತು ಸಭೆ ಕರೆದಿದ್ದಾರೆ. "ತುಪುಲ್ನಲ್ಲಿ ಇಂದು ಸಂಭವಿಸಿದ ಭೂಕುಸಿತದ ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ಸಭೆಯನ್ನು ಕರೆಯಲಾಗಿದೆ. ಈಗಾಗಲೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ವೈದ್ಯರೊಂದಿಗೆ ಆಂಬ್ಯುಲೆನ್ಸ್ಗಳನ್ನು ಸಹ ಕಳುಹಿಸಲಾಗಿದೆ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
Recommended Video