ಬಿಜೆಪಿಗೆ ಮಣಿಪುರದಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವ ವಿಶ್ವಾಸ
ಇಂಫಾಲ, ಡಿಸೆಂಬರ್ 30: ಬಿಜೆಪಿಯ ಮೈತ್ರಿ ಕೂಟವು ಮುಂದಿನ ಮಣಿಪುರ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಅಸ್ಸಾಂ ಸಚಿವ ಹಾಗೂ ಮಣಿಪುರದ ಬಿಜೆಪಿಯ ಚುನಾವಣಾ ಉಸ್ತುವಾರಿ ಅಶೋಕ್ ಸಿಂಘಲ್ ಹೇಳಿದ್ದಾರೆ. ಮಣಿಪುರವು ಒಟ್ಟು 60 ವಿಧಾನಸಭೆ ಕ್ಷೇತ್ರವನ್ನು ಹೊಂದಿದೆ.
ಈ ನಡುವೆ ಕೆಲವು ತಜ್ಞರು ಬಿಜೆಪಿ ಒಂದೇ ಪಕ್ಷ ಮಣಿಪುರದಲ್ಲಿ ಬಹುಮತ ಪಡೆಯಲಿದೆ. 60 ವಿಧಾನಸಭೆ ಕ್ಷೇತ್ರಗಳ ಪೈಕಿ 40 ರಲ್ಲಿ ಬಹುಮತ ಸಾಬೀತುಪಡಿಸಲಿದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಹೇಳಿಕೆ ನೀಡಿರುವ ಅಶೋಕ್ ಸಿಂಘಲ್ ಒಂದೆರಡು ಸ್ಥಾನಗಳು ಇಳಿಕೆ ಆಗಬಹುದು ಅಥವಾ ಏರಿಕೆ ಆಗಬಹುದು ಎಂದಿದ್ದಾರೆ. "ಐದು ವರ್ಷಗಳ ಶಾಂತಿ ಹಾಗೂ ಅಭಿವೃದ್ಧಿಯನ್ನು ಜನರು ನೋಡಿರುವ ಹಿನ್ನೆಲೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ದೊರೆಯಲಿದೆ," ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಬಿಜೆಪಿಗೆ ಬಹುಮತ ನೀಡಿ: ಜನರಲ್ಲಿ ಸ್ಪೀಕರ್ ಮನವಿ
2017 ರಲ್ಲಿ ಮಣಿಪುರದಲ್ಲಿ ಬಿಜೆಪಿಯು ಒಟ್ಟು 21 ವಿಧಾನಸಭೆ ಸ್ಥಾನಗಳೊಂದಿಗೆ ಸರ್ಕಾರವನ್ನು ನಡೆಸುತ್ತಿದೆ. ಈಗ 40 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿಯನ್ನು ಮಣಿಪುರ ಬಿಜೆಪಿಯು ಹೊಂದಿದೆ. ಕಳೆದ ಚುನಾವಣೆಯಲ್ಲಿ 28 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಬಿಜೆಪಿ ಎನ್ಪಿಪಿ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿದೆ.
ಹಲವು ಮಂದಿ ಬಿಜೆಪಿ ಸೇರ್ಪಡೆ
ಇನ್ನು ಇತ್ತೀಚೆಗೆ ಹಲವಾರು ಕಾಂಗ್ರೆಸ್ ಹಾಗೂ ಎನ್ಸಿಪಿ ನಾಯಕರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಗೋವಿಂದಾಸ್ ಕೂಡಾ ಆಗಸ್ಟ್ನಲ್ಲಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಇನ್ನು ಮಣಿಪುರ ಎನ್ಪಿಪಿ ನಾಯಕ ಹಾಗೂ ಕ್ರೀಡಾ ಸಚಿವ ಲೆಟ್ಪಾವೊ ಹಾಕಿಪ್ ಕೂಡಾ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
"ಎಲ್ಲಾ ಏರಿಳಿತದಲ್ಲೂ ಬಿಜೆಪಿ ಸದೃಢವಾಗಿದೆ. ಬಿಜೆಪಿಗೆ ಸೇರ್ಪಡೆ ಆದವರಿಗೆ ಬಿಜೆಪಿಯ ಜನಪರ ಕಾರ್ಯವು ಸ್ಪೂರ್ತಿಯಾಗಿದೆ," ಎಂದು ತಿಳಿಸಿದ್ದಾರೆ. ಇನ್ನು "ಮಣಿಪುರದಲ್ಲಿ ಯಾವುದೇ ವಿರೋಧ ಪಕ್ಷ ಎಂಬುವುದೇ ಇಲ್ಲ," ಎಂದು ಕೂಡಾ ಹೇಳಿದ್ದಾರೆ. "ನಮಗೆ ಸ್ಪರ್ಧೆ ನೀಡಲು ಯಾವುದೇ ವಿರೋಧ ಪಕ್ಷಗಳು ಇಲ್ಲ. ಕಾಂಗ್ರೆಸ್ ಈಗಾಗಲೇ ಇಲ್ಲಿ ನಾಶವಾಗಿದೆ. ಇನ್ನು ಎನ್ಪಿಪಿಯಂತಹ ಪಕ್ಷಗಳು ನಾಶ ಆಗುವ ಹಂತದಲ್ಲಿ ಇದೆ," ಎಂದಿದ್ದಾರೆ. "ಎನ್ಪಿಪಿ ಬಿಜೆಪಿಯನ್ನು ಹೊಡೆಯುವ ನಿಟ್ಟಿನಲ್ಲಿ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಿತ್ತು. ಆದರೆ ಜನರಿಗೆ ಆ ಪಕ್ಷದ ಬಗ್ಗೆ ತಿಳಿಯಿತು," ಎಂದು ಹೇಳಿ ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ನ ನಾಯಕರು ಬಿಜೆಪಿಯಿಂದ ಯಾರಾದರೂ ಪಕ್ಷ ತೊರೆದು ಬರಲಿ ಎಂದು ಕಾಯುತ್ತಿದ್ದಾರೆ ಎಂದರು.
ಈ ನಡುವೆ ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾನೂನು (AFSPA) ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ. ನಾಗಾಲ್ಯಾಂಡ್ನಲ್ಲಿ ಈ ಅಧಿಕಾರದಿಂದಾಗಿಯೇ 14 ನಾಗರಿಕರು ಸಾವನ್ನಪ್ಪಿದ ಬಳಿಕ ಮಣಿಪುರದಲ್ಲಿ ಈ ಕಾನೂನು ಭಾರೀ ಸದ್ದು ಮಾಡುತ್ತಿದೆ. ಅದಕ್ಕೆ ಮುಖ್ಯ ಕಾರಣ ವಿಧಾನಸಭೆ ಚುನಾವಣೆ ಆಗಿದೆ. ಮುಂದಿನ ವರ್ಷ ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನಾಗಾಲ್ಯಾಂಡ್ನಂತೆಯೇ ಮಣಿಪುರದಲ್ಲಿಯೂ ಈ AFSPA ಕಾನೂನು ಇದೆ. ನಾಗಾಲ್ಯಾಂಡ್ನಲ್ಲಿ ಹತ್ಯಾಕಾಂಡ ನಡೆದ ಬಳಿಕ ಮಣಿಪುರದಲ್ಲಿ ಈ ಕಾನೂನನ್ನು ರದ್ದು ಮಾಡಬೇಕು ಎಂಬುವುದು ಪ್ರಮುಖ ಚುನಾವಣಾ ವಿಚಾರವಾಗಿದೆ. "2022 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಮೊದಲ ಕ್ಯಾಬಿನೆಟ್ ಸಭೆಯಲ್ಲಿ AFSPA ರದ್ಧತಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)
Recommended Video