ಅಯ್ಯರ್ ಕರೆದಿದ್ದ ಸಭೆಯಲ್ಲಿ ನಡೆದಿದ್ದಾದರೂ ಏನು?
Recommended Video
ನವದೆಹಲಿ, ಡಿಸೆಂಬರ್ 11 : ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡಿದಾಗ, ಕಾಂಗ್ರೆಸ್ಸಿನಿಂದ ಅಮಾನತಾಗಿರುವ ಮಣಿ ಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದ ಭೇಟಿಯಲ್ಲಿ ನಡೆದದ್ದು ಭಾರತ-ಪಾಕ್ ಸಂಬಂಧದ ವಿಚಾರವೋ, ಗುಜರಾತ್ ಚುನಾವಣೆಯನ್ನು ಕದಡುವ ವಿಚಾರವೋ?
ಇದು ಖಾಸಗಿಯಾದ ಸಭೆಯಾಗಿದ್ದರೂ, ಕಾಂಗ್ರೆಸ್ ನ ಹಲವಾರು ನಾಯಕರು ಡಿಸೆಂಬರ್ 6ರಂದು ಮಣಿ ಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದಿರುವುದು ಮತ್ತು ಅಲ್ಲಿ ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆದಿರುವುದು ಹಲವರು ಹುಬ್ಬೇರಿಸುವಂತೆ ಮಾಡಿದೆ.
ಪಾಕಿಸ್ತಾನ ರಾಯಭಾರಿ ಜತೆ ಅಯ್ಯರ್ ಸೀಕ್ರೇಟ್ ಮೀಟಿಂಗ್: ಮೋದಿ ಆರೋಪ
ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಮಾಡಿದ ಚುನಾವಣಾ ಪ್ರಚಾರಸಭೆಯಲ್ಲಿ, ಈ ಕುರಿತು ಪ್ರಸ್ತಾಪಿಸಿದ್ದರು. ಪಾಕಿಸ್ತಾನ ಅನವಶ್ಯಕವಾಗಿ ಗುಜರಾತ್ ಚುನಾವಣೆಯಲ್ಲಿ ಮೂಗು ತೂರಿಸುತ್ತಿದೆ. ಈ ಸಭೆಯ ನಂತರವೇ ಗುಜರಾತಿನ ಹಿಂದುಳಿದ ಸಮುದಾಯವನ್ನು ಮಣಿ ಶಂಕರ್ ಅಯ್ಯರ್ ಅವಮಾನಿಸಿದ್ದಾರೆ ಎಂದು ಮೋದಿ ಆರೋಪಿಸಿದ್ದರು.
ಮಣಿ ಶಂಕರ್ ಅಯ್ಯರ್ ಅವರ ಮನೆಯಲ್ಲಿ ಈ ವಿವಾದಾತ್ಮಕ ಸಭೆ ನಡೆದ ನಂತರವೇ, ಅಯ್ಯರ್ ಅವರು ನರೇಂದ್ರ ಮೋದಿಯನ್ನು 'ನೀಚ' ಎಂದು ಕಟಕಿಯಾಡಿದ್ದರು. ಭಾರೀ ವಿವಾದಕ್ಕೆ ಮತ್ತು ಚರ್ಚೆಗೆ ಆಸ್ಪದ ನೀಡಿದ್ದ ಈ ಹೇಳಿಕೆಯ ನಂತರ, ಅಯ್ಯರ್ ಅವರನ್ನುಕಾಂಗ್ರೆಸ್ಸಿನಿಂದ ಅಮಾನತು ಮಾಡಲಾಗಿತ್ತು. ಈ ಅಮಾನತಿನ ನಂತರ ಅಯ್ಯರ್ ನಡೆಸಿರುವ ಸಭೆ ಭಾರೀ ಬಿರುಗಾಳಿ ಎಬ್ಬಿಸಿದೆ.
ಎಲ್ಲಕ್ಕಿಂತ ಕಳವಳಕಾರಿ ಸಂಗತಿಯೆಂದರೆ, ಅಯ್ಯರ್ ಅವರು ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಕಸೂರಿ ಅವರಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತು ಮಾಜಿ ಸೇನಾಧಿಕಾರಿ ದೀಪಕ್ ಕಪೂರ್, ನಟವರ ಸಿಂಗ್, ಸಲ್ಮಾನ್ ಹೈದರ್, ಟಿಸಿಎ ರಾಘವನ್, ಶರತ್ ಸಭರವಾಲ್, ಶಂಕರ್ ಬಾಜಪೈ ಮತ್ತು ಕೆಲ ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸಿದ್ದರು.
ನನ್ನನ್ನು ಇಲ್ಲವಾಗಿಸುವುದಕ್ಕೆ ಪಾಕ್ ನಲ್ಲಿ ಅಯ್ಯರ್ ಸುಪಾರಿ: ಮೋದಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ, ಮಾಜಿ ಸೇನಾಧಿಕಾರಿ ದೀಪಕ್ ಕಪೂರ್ ಅವರು, ಹೌದು ನಾನು ಆ ಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧದ ಬಗ್ಗೆ ಮಾತ್ರ ಮಾತನಾಡಲಾಯಿತು. ಭಾರತದ ರಾಜಕೀಯದ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಉಳಿದವರು ದಯವಿಟ್ಟು ನಮ್ಮನ್ನು ಯಾವುದೇ ವಿವಾದಕ್ಕೆ ಎಳೆಯಬೇಡಿ ಎಂದು ಕೋರಿದ್ದರು.
ಗುಜರಾತ್ ಚುನಾವಣೆಯಲ್ಲಿ ಗೊಂದಲ ಎಬ್ಬಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕರುಗಳು ಪಾಕಿಸ್ತಾನದ ಮಾಜಿ ವಿದೇಶಾಂಕ ಸಚಿವ ಮತ್ತು ಹಲವಾರು ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ ಎಂಬ ವಾದ ಆರಂಭವಾಗಿದೆ. ಇದು ಕಾಂಗ್ರೆಸ್ಸಿಗೂ ಸಾಕಷ್ಟು ಮುಜುಗರ ತಂದಿದೆ.