ಮೊಘಲರ ಕಾಲದಲ್ಲಿ ಚುನಾವಣೆ ಇತ್ತೆ? ಮೋದಿಗೆ ಅಯ್ಯರ್ ಪ್ರಶ್ನೆ
ನವದೆಹಲಿ, ಡಿಸೆಂಬರ್ 04: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು(ಡಿ.04) ನಾಪಮತ್ರ ಸಲ್ಲಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿ, 'ಉತ್ತಮ ಪ್ರದರ್ಶನ ತೋರದಿದ್ದರೂ ಪ್ರಮೋಶನ್ ಗಳಿಸಿದ ರಾಹುಲ್ ಗಾಂಧಿಯವರಿಗೆ ಅಭಿನಂದನೆಗಳು' ಎಂದು ವ್ಯಂಗ್ಯವಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ಸಿನ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್, ಮೊಘಲರ ರಾಜ್ಯಭಾರದ ಉದಾಹರಣೆ ನೀಡಿದ್ದಲ್ಲದೆ, ಪ್ರಧಾನಿ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಪಟ್ಟಾಭಿಷೇಕಕ್ಕೆ ದಿನಗಣನೆ: ಯಾರು, ಏನಂದರು?
ಒಂದೆಡೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೆಲ್ಲರು #IndiaWithRahulGandhi ಎಂಬ ಹ್ಯಾಶ್ ಟ್ಯಾಗ್ ನಲ್ಲಿ ರಾಹುಲ್ ಅವರನ್ನು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕರು ರಾಹುಲ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಮಹಾತ್ಮಾ ಗಾಂಧಿ ಅಲಂಕರಿಸಿದ ಸ್ಥಾನಕ್ಕೆ ರಾಹುಲ್ ಗಾಂಧಿ
ಪ್ರಧಾನಿ ಮೋದಿ ಅವರು ಒಬ್ಬ ದೊಡ್ಡ ಸರ್ವಾಧಿಕಾರಿ ಅವರು ನಮಗೆ ಪಾಠ ಮಾಡುತ್ತಿದ್ದಾರೆ. ಮೊಘಲರ ಕಾಲದಲ್ಲಿ ಜಹಂಗೀರನ ನಂತರ ಔರಂಗಜೇಬ ಅಧಿಕಾರಕ್ಕೆ ಬರುತ್ತಾನೆ. ಆದರೆ, ಇಲ್ಲಿ ಪ್ರಜಾಪ್ರಭುತ್ವದಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಲು ಎಲ್ಲರೂ ಅರ್ಹರು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಮೊಘಲರ ಕಾಲದಲ್ಲಿ ಚುನಾವಣೆ ನಡೆದಿತ್ತೆ?
ರಾಹುಲ್ ಬಗ್ಗೆ ಬಿಜೆಪಿಯವರು ಲೇವಡಿ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಇತಿಹಾಸ ಗೊತ್ತೆ? ಮೊಘಲರ ಕಾಲದಲ್ಲಿ ಚುನಾವಣೆ ನಡೆದಿತ್ತೆ? ಜಹಂಗೀರ, ಷಹಜಹಾನ್ ಅವರು ಚುನಾವಣೆ ಎದುರಿಸಿದ್ರಾ? ಷಹಜಹಾನ್ ನಂತರ ಔರಂಗಜೇಬ ಅಧಿಕಾರಕ್ಕೆ ಬರುತ್ತಾನೆ ಎಂಬುದು ತಿಳಿದ ಸಂಗತಿ ಎಂದಿದ್ದಾರೆ. ಔರಂಗಜೇಬನ ಮಾದರಿ ಕುಟುಂಬ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಬೇಕೆ ಎಂದು ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಪ್ರಶ್ನಿಸಿದ್ದಕ್ಕೆ ಅಯ್ಯರ್ ಈ ರೀತಿ ಉತ್ತರಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದೆ
ಕಾಂಗ್ರೆಸ್ ಇನ್ನೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿಕೊಂಡಿದೆ. ನಾನು ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಶೆಹಜಾದ್ ಪೂನಾವಾಲಾ ಅವರನ್ನು ಮುಕ್ತವಾಗಿ ಆಹ್ವಾನಿಸುತ್ತಿದ್ದೇನೆ. ರಾಹುಲ್ ವಿರುದ್ಧ ನಾಮಪತ್ರ ಸಲ್ಲಿಸಿ, ಸ್ಪರ್ಧಿಸಲಿ ಎಂದು ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಸವಾಲು ಹಾಕಿದ್ದಾರೆ.
ರಾಹುಲ್ ಪರವಾಗಿ ಮತ ಹಾಕುವವರು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಪರ ಸ್ವಾಮಿನಿಷ್ಠೆ ಹೊಂದಿರುವವರು, ಇಂಥವರ ವಿರುದ್ಧ ದನಿಯೆತ್ತಲು ಧೈರ್ಯ ಬೇಕು ಎಂದು ಕಾಂಗ್ರೆಸ್ಸಿಗ ಶೆಹಜಾದ್ ಬಂಡಾಯವೆದ್ದಿದ್ದಾರೆ. ಚಿತ್ರದಲ್ಲಿ :ಶೆಹಜಾದ್ ಪೂನಾವಾಲಾ.
ರಾಹುಲ್ ವಿರುದ್ಧ ಸೊಲ್ಲೆತ್ತಿದ ಶೆಹಜಾದ್ ಪೂನಾವಾಲಾ, ಪರಿಚಯ
ಧರಮ್ ಪುರ್ ಕ್ಷೇತ್ರದಲ್ಲಿ ಮೋದಿಯಿಂದ ಉತ್ತರ
ಗುಜರಾತಿನ ಧರಮ್ ಪುರ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಿರತ ಪ್ರಧಾನಿ ಮೋದಿ, ಮೊಘಲರ ಕಾಲದ ಕಥೆ ಹೇಳಿ ಮಣಿಶಂಕರ್ ಅವರು ತಮ್ಮ ಸ್ವಾಮಿನಿಷ್ಠೆ ತೋರಿದ್ದಾರೆ. ಷಹಜಹಾನ್ ನಂತರ ಆತನ ಸ್ಥಾನಕ್ಕೆ ಔರಂಗಜೇಬ ಬಂದಿದ್ದೇಕೆ? ಎಂಬ ಪ್ರಶ್ನೆಗೆ ಸರಳ ಉತ್ತರವಿದೆ. ರಾಜರ ಆಳ್ವಿಕೆಯಲ್ಲಿ ಅಪ್ಪನ ನಂತರ ಸಿಂಹಾಸನವನ್ನು ಏರುವ ಹಕ್ಕು ಅವನ ಮಗನಿಗೆ ಇರುತ್ತದೆ ಎಂದು ಮೋದಿ ಪ್ರತ್ಯುತ್ತರ ನೀಡಿದ್ದಾರೆ.
2014ರಲ್ಲಿ ಮೋದಿಗೆ ಚಹಾವಾಲ ಎಂದಿದ್ದ ಅಯ್ಯರ್
2014ರಲ್ಲಿ ಚಹಾವಾಲ ಎಂದು ಮೋದಿಯನ್ನು ಮಣಿಶಂಕರ್ ಅಯ್ಯರ್ ಅವರು ಮೂದಲಿಸಿದ್ದರು. ಇದನ್ನು ಅಸ್ತ್ರವಾಗಿ ಬಳಸಿಕೊಂಡ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಸಮರ್ಥವಾಗಿ ಬಳಸಿಕೊಂಡಿದ್ದರು. ಮೋದಿ ಅವರು ಚಹಾ ಮಾರಲು ಮಾತ್ರ ಸಮರ್ಥರು ಎಂದು ಅಯ್ಯರ್ ವ್ಯಂಗ್ಯವಾಡಿದ್ದರು. ಆದರೆ, ಮೋದಿ ಅವರ ಸರಳತೆ, ಛಲವನ್ನು ಎತ್ತಿಹಿಡಿದ ಬಿಜೆಪಿ ಇದರ ಲಾಭ ಪಡೆದುಕೊಂಡಿತ್ತು.