ಮಧ್ಯಪ್ರದೇಶದಲ್ಲಿ ಮೇಲ್ಜಾತಿಯ ವೋಟಿನತ್ತ ಕಾಂಗ್ರೆಸ್ ಕಣ್ಣು!
ನವದೆಹಲಿ, ಅಕ್ಟೋಬರ್ 13: ಕಾಂಗ್ರೆಸ್ ಪಾಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲೂ ಗೆಲ್ಲುವ ಹುಮ್ಮಸ್ಸಿನಲ್ಲಿ ಪಕ್ಷವಿದೆ. ಕೆಲವು ಸಮೀಕ್ಷೆಗಳೂ ಕಾಂಗ್ರೆಸ್ ಪರವೇ ಅಲೆಯಿದೆ ಎಂದಿದೆ.
ಆದರೆ ಈ ನಡುವೆ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರು ಕಾಂಗ್ರೆಸ್ ನೊಂದಿಗೆ ಕೈಜೋಡಿಸಲು ಒಲ್ಲೆ ಎಂದ ಮೇಲೆ ಬೇರೆಯದೇ ರೀತಿಯ ಯೋಜನೆಯನ್ನು ರೂಪಿಸಲು ಕಾಂಗ್ರೆಸ್ ಮುಂದಾಗಿದೆ.
ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ
ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿದೆ ಎಂಬುದನ್ನು ಅರಿತಿರುವ ಕಾಂಗ್ರೆಸ್, ಆ ರಾಜ್ಯದಲ್ಲಿ ಮೇಲ್ಜಾತಿಯ ಮತಗಳ ಮೇಲೆ ಕಣ್ಣು ಹಾಕಿದೆ. ಈ ಮೂಲಕ ಹೊಸ ಸ್ಟ್ರಾಟಜಿಯೊಂದನ್ನು ಕಾಂಗ್ರೆಸ್ ತನ್ನ ಭತ್ತಳಿಕೆಯಲ್ಲಿ ಭದ್ರವಾಗಿರಿಸಿಕೊಂಡಿದೆ, ಚುನಾವಣೆಗೂ ಮುನ್ನ ಪ್ರಯೋಗಿಸುವುದಕ್ಕೆ!
ಮೇಲ್ಜಾತಿಯ ಮತದ ಮೇಲೆ ಕಣ್ಣು
ಮಧ್ಯಪ್ರದೇಶದಲ್ಲಿ ಒಟ್ಟು 13 ಪ್ರತಿಶತ ಮೇಲ್ಜಾತಿಯ ಮತವಿದೆ. ಅಲ್ಲದೆ ಮೇಲ್ಜಾತಿಯ ಮತದಾರರಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ಮೇಲೆ ಉತ್ತಮ ಅಭಿಪ್ರಾಯವಿದ್ದಂತಿಲ್ಲ. ಸರ್ಕಾರದ ವಿರುದ್ಧ ಮೇಲ್ಜಾತಿಯ ಮತದಾರರಲ್ಲಿರುವ ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಅದಕ್ಕಾಗಿ ಏನೆಲ್ಲ ಉಪಾಯಗಳನ್ನು ಹೆಣೆಯಬೇಕೋ ಅದನ್ನು ಕಾಂಗ್ರೆಸ್ ಈಗಾಗಲೇ ಹೆಣಿದಿದೆ.
ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ತಿಳಿಯಬೇಕಾದ 7 ಸಂಗತಿ
ಕಾಂಗ್ರೆಸ್ ನ ಉಪಾಯವೇನು?
ಈಗಾಗಲೇ ಕಾಂಗ್ರೆಸ್ ಪಕ್ಷದ ಮೇಲ್ಜಾತಿಯ ನಾಯಕರನ್ನು ಪಕ್ಷದ ವರಿಷ್ಠರು ಭೇಟಿಯಾಗಿದ್ದಾರೆ. ಅವರ ಮೂಲಕ ಮೇಲ್ಜಾತಿಯ ಮತದಾರರನ್ನು ಓಲೈಸುವ ಉಪಾಯವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಇರಲೀ, ಬಿಜೆಪಿಯೇ ಇರಲಿ ಎಲ್ಲ ಪಕ್ಷಗಳೂ ಇದುವರೆಗೂ ಮೇಲ್ಜಾತಿಯ ಜನರ ಉದ್ಧಾರಕ್ಕಾಗಿ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿಲ್ಲ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೇಲ್ಜಾತಿಯವರಿಗಾಗಿಯೇ ಹಲವು ಯೋಜನೆಗಳನ್ನು ತರಲು ಮುಂದಾಗುವ ಭರವಸೆಯನ್ನು ನೀಡುತ್ತಿದೆ.
ಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳು
ಮಾಯಾವತಿ ಕೈಕೊಟ್ಟಿದ್ದಕ್ಕೆ ಪರ್ಯಾಯ!
ಕಾಂಗ್ರೆಸ್ ಪಕ್ಷ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸುವುದಕ್ಕೆ ಬಹುಮುಖ್ಯ ಕಾರಣವೆಂದರೆ, ಮಾಯಾವತಿಯರ ಪರವಿದ್ದ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಮತಗಳು. ಮೈತ್ರಿಯಾದರೆ ಆ ಮತಗಳು ಕಾಂಗ್ರೆಸ್ ಗೂ ಲಾಭ ನೀಡಲಿದ್ದವು. ಆದರೆ ಬದಲಾದ ಸನ್ನಿವೇಶದಲ್ಲಿ ಮಾಯಾವತಿಯವರು ಮೈತ್ರಿಗೆ ಒಲ್ಲೆ ಎಂದಿದ್ದಾರೆ. ಹಿಂದುಳಿದ ವರ್ಗಗಳ ಮತಗಳ ಬದಲು ಮೇಲ್ಜಾತಿಯ ಮತಗಳ ಮೇಲೆ ಕಣ್ಣು ಹಾಕಲು ಕಾಂಗ್ರೆಸ್ ನಿರ್ಧರಿಸಿರುವುದಕ್ಕೆ ಇದು ಮುಖ್ಯ ಕಾರಣ.
ಮಾಯಾ ಮೈತ್ರಿಯನ್ನು ರಾಹುಲ್ ಅವರೇ ತಿರಸ್ಕರಿಸಿದರೆ? 7 ಕಾರಣ ಇಲ್ಲಿವೆ
ಯಾವ ಜಾತಿಯಲ್ಲಿ ಎಷ್ಟು ಮತದಾರರು?
ಮಧ್ಯಪ್ರದೇಶದಲ್ಲಿ ಒಟ್ಟು 13% ರಷ್ಟು ಮೇಲ್ಜಾತಿಯ ಮತದಾರರಿದ್ದಾರೆ. ಅವರಲ್ಲಿ ಬ್ರಾಹ್ಮಣರು 5.7 ಪ್ರತಿಶತವಾದರೆ, 5.3 ರಷ್ಟು ರಜಪೂತ ಮತಗಳು ಮತ್ತು ಶೇ.2 ರಷ್ಟು ಬೈಶ್ಯ ಸಮುದಾಯದ ಮತಗಳಿವೆ. ಇತರ ಹಿಂದುಳಿದ ವರ್ಗಗಳ ಶೇ.42 ಮತಗಳಿದ್ದರೆ, 14% ಮತ್ತು 22% ರಷ್ಟು ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳಿವೆ.ಮಧ್ಯಪ್ರದೇಶದಲ್ಲಿ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 28 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 11, 2018 ರಂದು ಹೊರಬೀಳಲಿದೆ.