1,350 ಕಿ.ಮೀ. ನಡೆದರೂ ಸಿಗಲಿಲ್ಲ ಮೋದಿ ದರ್ಶನ ಭಾಗ್ಯ
ನವದೆಹಲಿ, ಜೂನ್ 29: ಒಡಿಶಾದ ರೂರ್ಕೆಲಾ ವಿವಿಧ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರಿಗೆ ಅವರ ಮಾತುಗಳನ್ನು ನೆನಪಿಸಲು ಬರೋಬ್ಬರಿ 1,350 ಕಿ.ಮೀ. ನಡೆದ ವ್ಯಕ್ತಿಗೆ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ದೊರೆತಿಲ್ಲ.
ಒಡಿಶಾದ ರೂರ್ಕೆಲಾಕ್ಕೆ 2015ರಲ್ಲಿ ಭೇಟಿ ನೀಡಿದ್ದ ನರೇಂದ್ರ ಮೋದಿ, ಅಲ್ಲಿನ ಇಸ್ಪಾಟ್ ಜನರಲ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸುವುದಾಗಿ ಮತ್ತು ಬ್ರಹ್ಮಣಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು.
ಪ್ರಧಾನಿಗೆ ತಮ್ಮ ಭರವಸೆಗಳನ್ನು ನೆನಪಿಸಲು 1,350 ಕಿ.ಮೀ. ಪಾದಯಾತ್ರೆ
ಆದರೆ ಮೂರು ವರ್ಷ ಉರುಳಿದರೂ ಮೋದಿ ಅವರ ಭರವಸೆ ಜಾರಿಯಾಗಿಲ್ಲ. ಇದರಿಂದ ಬೇಸೆತ್ತ 30 ವರ್ಷದ ಮುಕ್ತಿಕಂಠ ಬಿಸ್ವಾಲ್ ಎಂಬುವವರು ಮೋದಿ ಅವರ ಗಮನ ಸೆಳೆಯಲು ರೂರ್ಕೆಲಾದಿಂದ ದೆಹಲಿಗೆ ಪಾದಯಾತ್ರೆ ನಡೆಸಿದ್ದರು.
ಭಾರತದ ಬಾವುಟ ಹಿಡಿದು ಪಾದಯಾತ್ರೆ ಹೊರಟಿದ್ದ ಅವರು ಪ್ರಧಾನಿ ಕಚೇರಿಗೆ ತಲುಪಿ, ಮೋದಿ ಭೇಟಿಗೆ ಅನುಮತಿ ಕೋರಿ ಮನವಿ ನೀಡಿದ್ದರು.
'ಮೋದಿ ಭೇಟಿಗೆ ಯಾವಾಗ ಅನುಮತಿ ಸಿಗುತ್ತದೆ ಎಂದು ಕೇಳಿದಾಗ, ನಿತ್ಯ 2 ಸಾವಿರ ಪತ್ರಗಳು ಬರುತ್ತವೆ. ನಿಮಗೆ 15 ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು.
ಅದಕ್ಕೆ ನಾನು 1500 ಕಿ. ಮೀ ನಡೆದು ಬಂದಿದ್ದೇನೆ. ಹೀಗಾಗಿ ಮನವಿಯನ್ನು ಕೂಡಲೇ ಪರಿಗಣಿಸಿ ಎಂದು ಕೋರಿದೆ. ತಕ್ಷಣಕ್ಕೆ ಏನೂ ಹೇಳು ಸಾಧ್ಯವಿಲ್ಲ. ಭೇಟಿ ನಿಗದಿಯಾದರೆ ನಿಮಗೆ ಮಾಹಿತಿ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಇನ್ನು ಮೂರು ದಿನ ಕಾಯುತ್ತೇನೆ. ಅಷ್ಟರಲ್ಲಿ ಮೋದಿ ಅವರ ಭೇಟಿಗೆ ಅವಕಾಶ ನೀಡದೆ ಇದ್ದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ' ಎಂದು ಮುಕ್ತಿಕಂಠ ಅವರು ಹೇಳಿದ್ದಾರೆ.
ಈ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಮೋದಿ ಅವರ ವಿರುದ್ಧ ಹರಿಹಾಯ್ದಿದೆ.
PM Modi, as you lay the foundation stone of the National Centre for Aging at at AIIMS, PM Nehru’s brainchild, in Safdarjung, Delhi today, we ask you, when would you be visiting Rourkela? pic.twitter.com/DIfJZzRAlL
— Congress (@INCIndia) 29 June 2018
ಮುಕ್ತಿಕಂಠ ಅವರ ಕುರಿತ ವಿಡಿಯೋವೊಂದನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, 'ಮೋದಿ ಅವರೇ, ಮೊದಲು ನಿಮ್ಮ ಭರವಸೆಗಳನ್ನು ಈಡೇರಿಸಲು ಮರೆತಿರಿ. ಬಳಿಕ ನಾಗರಿಕರ ಮಾತುಗಳನ್ನು ಕೇಳಿಸಿಕೊಳ್ಳಲು ನಿರಾಕರಿಸುತ್ತಿದ್ದೀರಿ. ಇದು ಅಹಂಕಾರದ ಪರಮಾವಧಿ ಎಂದು ಟೀಕಿಸಿದೆ.
ದೆಹಲಿಯ ಸಫ್ದಾರ್ಜುಂಗ್ನಲ್ಲಿ ನೆಹರೂ ಅವರ ಕನಸಿನ ಕೂಸು ಎಐಐಎಂಎಸ್ನ ವಯಸ್ಕರ ರಾಷ್ಟ್ರೀಯ ಕೇಂದ್ರಕ್ಕೆ ಅಡಿಗಲ್ಲು ಹಾಕಿದ್ದೀರಿ. ನಮ್ಮ ಪ್ರಶ್ನೆ, ನೀವು ರೂರ್ಕೆಲಾಗೆ ಯಾವಾಗ ಭೇಟಿ ನೀಡುತ್ತೀರಿ? ಎಂದು ಅದು ಕೇಳಿದೆ.