ಸಮ್ಮತಿಯ ಸಂಬಂಧದಲ್ಲಿ ಮದುವೆಗೆ ನಿರಾಕರಿಸಿದರೆ ಪರಿಹಾರ ತೆರಬೇಕೆ?
ನವದೆಹಲಿ, ಜುಲೈ 3: ಮಹಿಳೆಯರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಸಹಮತದ ಸಂಬಂಧಗಳಿಗೆ ಮದುವೆಯ ಹೊಣೆಗಾರಿಕೆ ನೀಡುವ ಕುರಿತು ಸುಪ್ರೀಂಕೋರ್ಟ್ ಚಿಂತನೆ ನಡೆಸಿದೆ.
ಗಂಡು ಮತ್ತು ಹೆಣ್ಣಿನ ನಡುವಣ ಸಮ್ಮತಿಯ ಲೈಂಗಿಕ ಸಂಬಂಧವನ್ನು ಮದುವೆ ಎಂದು ಪರಿಗಣಿಸಬೇಕೇ ಮತ್ತು ಜತೆಗೆ ಬಾಳಿದ ಹೆಣ್ಣಿಗೆ ಗಂಡು ಜೀವನಾಂಶದ ಪರಿಹಾರ ನೀಡಬೇಕೇ ಎಂಬ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ಅನಿವಾಸಿ ಭಾರತೀಯ ಜೋಡಿಗಳಿಗೆ ಮದುವೆ ನೋಂದಣಿ ಕಡ್ಡಾಯ
ಸಮ್ಮತಿಯ ಸಂಬಂಧಗಳಲ್ಲಿ ಲೈಂಗಿಕ ಸಂಪರ್ಕ ಹೊಂದಿದ್ದರೆ ಅದು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ವಾದದ ಅನೇಕ ಪ್ರಕರಣಗಳಿವೆ.
ಅತ್ಯಾಚಾರ ಅಪರಾಧ ಪ್ರಕರಣಗಳಾಚೆ, ಸಮ್ಮತಿಯ ಲೈಂಗಿಕ ಸಂಬಂಧ ಎಂಬ ಕಾರಣಕ್ಕೆ ಮಹಿಳೆಯರ ಸಮಸ್ಯೆಗೆ ಪರಿಹಾರ ನೀಡದೆ ಇರಲು ಸಾಧ್ಯವಿಲ್ಲ. ಆದರೆ, ದೀರ್ಘಕಾಲ ಒಟ್ಟಿಗೆ ಬಾಳಿದರೆ ಮದುವೆಯ ಕೆಲವು ಹೊಣೆಗಾರಿಕೆಗಳು ಗಂಡಿಗೆ ಅನ್ವಯ ಆಗಬಹುದು ಎಂದು ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್ ಗೋಯೆಲ್ ಮತ್ತು ಅಬ್ದುಲ್ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಗೊಂದಲದ ಮಹತ್ವವನ್ನು ಪರಿಗಣಿಸಿರುವ ನ್ಯಾಯಪೀಠ, ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ (ನ್ಯಾಯಾಲಯದ ಸಹಾಯಕ) ನೇಮಿಸಿದೆ. ಅವರಿಗೆ ನೆರವು ನೀಡಲು ವಕೀಲರೊಬ್ಬರನ್ನು ನೇಮಿಸುವಂತೆ ಅಟಾರ್ನಿ ಜನರಲ್ ಅವರಿಗೆ ಸೂಚಿಸಿದೆ.
ಬೆಂಗಳೂರಿನ ಉತ್ತರ ತಾಲ್ಲೂಕಿನ ಅಲೋಕ್ ಕುಮಾರ್ ಎಂಬುವವರು ತಮ್ಮ ವಿರುದ್ಧ ಮಹಿಳೆಯೊಬ್ಬರ ತಾಯಿ ಮಾಡಿರುವ ಅತ್ಯಾಚಾರ ಹಾಗೂ ಇತರೆ ಆರೋಪಗಳ ಪ್ರಕರಣವನ್ನು ಕೈಬಿಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆರು ವರ್ಷ ತನ್ನ ಮಗಳ ಜತೆ ವಾಸವಿದ್ದ ಅಲೋಕ್ ಕುಮಾರ್ ಮದುವೆಯ ಭರವಸೆ ನೀಡಿದ್ದರು. ಆದರೆ ಈಗ ಮದುವೆಗೆ ನಿರಾಕರಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.
ತಮ್ಮ ನಡುವೆ ಸಮ್ಮತಿಯ ಲೈಂಗಿಕ ಸಂಬಂಧವಿತ್ತು. ಹೀಗಾಗಿ ಅದನ್ನು ಅತ್ಯಾಚಾರ ಎಂದು ಕರೆಯಲು ಸಾಧ್ಯವಿಲ್ಲ ಎಂಬುದಾಗಿ ಅಲೋಕ್ ವಾದಿಸಿದ್ದಾರೆ.
ದೀರ್ಘಕಾಲದ ಸಹಮತದ ಲೈಂಗಿಕ ಸಂಬಂಧದಲ್ಲಿ ಗಂಡಿನ ವಿರುದ್ಧ ಆರೋಪ ಹೊರಿಸಲು ಸಾಧ್ಯವಾಗುವುದಿಲ್ಲ. ಆದರೆ, ಹೆಣ್ಣು ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.