ಕತುವಾ ದುರಂತದ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೆಲಸ ಕಳೆದುಕೊಂಡ ಕೇರಳಿಗ
ತಿರುವನಂತಪುರಂ, ಏಪ್ರಿಲ್ 14: ಕತುವಾ ಅತ್ಯಾಚಾರ ಮತ್ತು ಕೊಲೆಯ ಕುರಿತು ಇಡೀ ದೇಶವೂ ಆತಂಕ ವ್ಯಕ್ತಪಡಿಸುತ್ತಾ, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಸಿಗುವಂತೆ ಒಕ್ಕೊರಲಿನಿಂದ ಕೂಗುತ್ತಿರುವಾಗ ಕೇರಳದ ಬ್ಯಾಂಕ್ ಉದ್ಯೋಗಿಯೊಬ್ಬ ನೀಡಿದ ಬೇಜವಾಬ್ದಾರಿ ಹೇಳಿಕೆ ವಿವಾದ ಸೃಷ್ಟಿಸಿದೆ.
ಕಾಮುಕರಿಗೆ ಬಲಿಯಾದ ಮುಗ್ಧ ಬಾಲಕಿ ಪರ ಒಗ್ಗೂಡಿದ ಧ್ವನಿ
ಇಲ್ಲಿನ ಬ್ಯಾಂಕ್ ವೊಂದರಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಷ್ಣು ಎಂಬಾತ ಕತುವಾ ಅತ್ಯಾಚಾರದ ಬಗ್ಗೆ ತಮ್ಮ ಫೇಸ್ ಬುಕ್ ಗೋಡೆಯಲ್ಲಿ ಬರೆದುಕೊಂಡಿದ್ದ. ಈ ಸ್ಟೇಟಸ್ ನಲ್ಲಿ, "ಸದ್ಯ, ಆಕೆಯನ್ನು ಈ ವಯಸ್ಸಿನಲ್ಲಿಯೇ ಸಾಯಿಸಿದ್ದು ಒಳ್ಳೆಯದಾಯ್ತು. ಇಲ್ಲದಿದ್ದರೆ ಆಕೆ ಬೆಳೆದ ಮೇಲೆ ಭಾರತಕ್ಕೇ ಬಾಂಬ್ ಹಾಕುತ್ತಿದ್ದಳು" ಎಂದು ಅವರು ಬರೆದಿದ್ದ!
ಆತನ ಈ ಸ್ಟೇಟಸ್ ಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇಂಥವರನ್ನು ಯಾಕಿನ್ನೂ ಸಂಸ್ಥೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದೀರಿ ಎಂದು ಬ್ಯಾಂಕಿನ ಮೇಲಧಿಕಾರಿಗಳನ್ನು ಜನ ದಬಾಯಿಸುವುದಕ್ಕೆ ಆರಂಭಿಸಿದರು. ಇದೀಗ ಅವರನ್ನು ಬ್ಯಾಂಕು ಕೆಲಸದಿಂದ ಕಿತ್ತುಹಾಕಿದೆ.
ಮುಗ್ಧ ಬಾಲಕಿಯೊಬ್ಬಳು ಯಮಯಾತನೆಪಟ್ಟು ಸತ್ತರೆ, ಅದಕ್ಕೂ ಕೋಮುವಾದದ, ಜಾತಿ-ಮತದ ಬಣ್ಣ ಹಚ್ಚುವ ನಿಮ್ಮಂಥವರಿಗೆ ನಾಚಿಕೆಯಾಗಬೇಕು ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.