ಆತ ಊಟ-ನೀರಿಲ್ಲದೆ ತಂದೆ ಶವದ ಬಳಿಯೇ ಐದು ದಿನ ಇದ್ದ
ಆ ಮನೆಯಲ್ಲಿ ಇಬ್ಬರೇ ಇದ್ದರು-ತಂದೆ, ಮಗ. ಆ ಪೈಕಿ ತಂದೆ ಸಾವನ್ನಪ್ಪಿದರು. ಮಾನಸಿಕ ಅಸ್ವಸ್ಥನಾದ ಮಗನಿಗೆ ಆ ಬಗ್ಗೆ ಪರಿವೇ ಇಲ್ಲದ ಐದು ದಿನ ತಂದೆಯ ಶವದ ಬಳಿಯೇ ಊಟ-ನೀರು ಇಲ್ಲದೆ ಕೂತಿದ್ದ. ಮನಕಲಕುವ ಈ ವರದಿ ತಮಿಳುನಾಡಿನ ಮದುರೈನದು
ಮದುರೆ, ಮೇ 2: ಆತನಿಗೆ ತನ್ನ ತಂದೆ ಸಾವನ್ನಪ್ಪಿದ್ದಾರೆ ಅಂತಲೂ ಗೊತ್ತಿರಲಿಲ್ಲ. ಐದು ದಿನಗಳಿಂದ ತಂದೆ ಶವದ ಬಳಿಯೇ ಇದ್ದ ಆತನನ್ನು ಪೊಲೀಸರು ರಕ್ಷಿಸಿದ್ದಾರೆ. ಎಪ್ಪತ್ಮೂರು ವರ್ಷದ ಅರುಳ್ ರಾಜ್ ಮೃತರು. ನಲವತ್ತು ವರ್ಷದ ಬ್ರಿಟ್ಟೋ ಮಾನಸಿಕವಾಗಿ ಅಸ್ವಸ್ಥ. ಅದಾಗಲೇ ಮೃತಪಟ್ಟು ಐದು ದಿನವಾಗಿದ್ದ ತಂದೆ ಶವದ ಬಳಿಯೇ ಆತ ಇದ್ದ.
ಈ ಘಟನೆ ನಡೆದಿರುವುದು ಮದುರೈನ ಜೀವನಗರ್ ನಲ್ಲಿ. ಮನೆಯಿಂದ ಯಾವಾಗ ಶವ ದುರ್ನಾತ ಬರಲಾರಂಭಿಸಿತೋ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಪೊಲೀಸರು ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಅಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬ್ರಿಟ್ಟೋ ಕಂಡುಬಂದಿದ್ದಾನೆ. ಐದು ದಿನಗಳಿಂದ ಊಟ-ನೀರಿಲ್ಲದೆ ಆತ ಸಂಪೂರ್ಣ ನಿತ್ರಾಣನಾಗಿದ್ದ.[ಬೈಕ್ ನಲ್ಲಿ ಮಗುವಿನ ಶವವನ್ನು ತೆಗೆದುಕೊಂಡು ಹೋದ ಅಸಹಾಯಕ ತಂದೆ]
ಇನ್ನೂ ಹೃದಯ ಕಲಕುವ ಸಂಗತಿ ಏನೆಂದರೆ, ಆ ವ್ಯಕ್ತಿಗೆ ತನ್ನ ತಂದೆ ಮೃತಪಟ್ಟಿದ್ದಾರೆ ಎಂದು ಕೂಡ ಗೊತ್ತಾಗಿಲ್ಲ. ಪೊಲೀಸರು ಮನೆ ಪ್ರವೇಶಿಸಿದ ನಂತರ ಗೊತ್ತಾಗಿರುವುದು ಏನೆಂದರೆ, ಏಪ್ರಿಲ್ 25ರ ನಂತರ ಕ್ಯಾಲೆಂಡರ್ ಕೂಡ ಬದಲಾಗಿರಲಿಲ್ಲ.ಆ ದಿನ ಅರುಳ್ ರಾಜ್ ಅವರು ನೀರು ತರಲು ಆಚೆ ಬಂದಿದ್ದನ್ನು ಅಕ್ಕಪಕ್ಕದವರು ಗಮನಿಸಿದ್ದಾರೆ.
ಆದ್ದರಿಂದ ಅದರ ಮರುದಿನ ಅರುಳ್ ರಾಜ್ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಬ್ರಿಟ್ಟೋನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.