ಗಂಟಲಲ್ಲಿ ಸಿಕ್ಕಿಕೊಂಡ ಇಡ್ಲಿ ವ್ಯಕ್ತಿಯ ಪ್ರಾಣ ತಿಂದಿತು!
ತಿರುವನಂತಪುರಂ, ಸೆ.9 : ಗಂಟಲಲ್ಲಿ ಇಡ್ಲಿ ಸಿಕ್ಕಿಹಾಕಿಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಗೆ ತಿನ್ನುವ ಭರದಲ್ಲಿ ಇಡ್ಲಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತ್ತು, ಅದು ಅವನ ಪ್ರಾಣವನ್ನೇ ತಿಂದು ಹಾಕಿದೆ.
ಇಡ್ಲಿ ತಿಂದು ಜೀವ ಕಳೆದುಕೊಂಡ ವ್ಯಕ್ತಿಯನ್ನು ಕಂದ ಮುತನ್ (55) ಎಂದು ಗುರುತಿಸಲಾಗಿದೆ. ಓಣಂ ಹಬ್ಬದ ಅಂಗವಾಗಿ ಪಾಲಕ್ಕಾಡ್ ಸಮೀಪದ ಹಳ್ಳಿಯೊಂದರಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮುತನ್ ಗಂಟಲಲ್ಲಿ ಇಡ್ಲಿ ಸಿಕ್ಕಿಕೊಂಡಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. [ಕೇರಳಿಗರ ಹೊನ್ನಿನ ಹಬ್ಬ ಓಣಂ]
ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದು, ಹಳ್ಳಿಯ ಆಟ್ರ್ಸ್ ಕ್ಲಬ್ ಓಣಂ ಹಬ್ಬದ ಅಂಗವಾಗಿ ಈ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕಂದ ಮುತನ್ ಗಬಗಬನೆ ಇಡ್ಲಿ, ತಿನ್ನಲು ಆರಂಭಿಸಿದ. ಆ ಸಮಯದಲ್ಲಿ ಅದು ಅವನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತು. [ಇಡ್ಲಿ-ಸಾಂಬಾರ್ ಬೆಳಗ್ಗಿನ ತಿಂಡಿಗೆ ಬೆಸ್ಟ್!]
ಕಂದ ಮುತನ್ ಸ್ಥಿತಿ ಗಂಭೀರವಾಗಿರುದನ್ನು ಅರಿತ ಸ್ಪರ್ಧೆಯ ಆಯೋಜಕರು ತಕ್ಷಣ ಅವನನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಆಯೋಜಕರು ಬಿರುದು ನೀಡುತ್ತಿದ್ದರು.