ಗೋಕಳ್ಳನೆಂಬ ಆರೋಪ: ಹರ್ಯಾಣದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
ಪಲ್ವಾಲ(ಹರ್ಯಾಣ), ಆಗಸ್ಟ್ 4: ಗೋಕಳ್ಳನೆಂದು ದೂರಿ ವ್ಯಕ್ತಿಯೊಬ್ಬನನ್ನು ಜನರು ಥಳಿಸಿ, ಕೊಂದ ಬರ್ಬರ ಘಟನೆ ಹರ್ಯಾಣದ ಪಲ್ವಾಲದಲ್ಲಿ ನಡೆದಿದೆ.
ಆಗಸ್ಟ್ 2 ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹರ್ಯಾಣದ ಹಳ್ಳಿಯೊಂದರಲ್ಲಿ, ಸಂಜೆ ನಡೆದುಹೋಗುತ್ತಿದ್ದ ಮೂವರ ಮೇಲೆ ಸಂಶಯ ವ್ಯಕ್ತಪಡಿಸಿದ ಜನರು ಅವರನ್ನು ಗೋಕಳ್ಳರೆಂದು ಶಂಕಿಸಿದ್ದಾರೆ. ಅವರನ್ನು ಹಿಡಿಯಲು ಪ್ರಯತ್ನಿಸಿದ ಸಮಯದಲ್ಲಿ ಮೂವರಲ್ಲಿ ಇಬ್ಬರು ಪರಾರಿಯಾಗಿದ್ದು, ಓರ್ವ ಜನರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಆತನನ್ನು ಕಂಬಕ್ಕೆ ಕಟ್ಟಿ, ಜನರೇ ಹೊಡೆದು ಕೊಂದಿದ್ದು ಓರ್ವ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ: ಗೋಕಳ್ಳನೆಂದು ವ್ಯಕ್ತಿಯನ್ನು ಹೊಡೆದು ಕೊಂದ ಜನ
ಮೃತ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇತ್ತೀಚೆಗಷ್ಟೇ ರಾಜಸ್ಥಾನ ಅಲ್ವಾರ್ ಎಂಬಲ್ಲಿ ರಕ್ಬರ್ ಖಾನ್ ಎಂಬುವವರನ್ನು ಜನರು ಇದೇ ರೀತಿ ಹೊಡೆದು ಕೊಂದಿದ್ದರು. ಈ ಘಟನೆಗೆ ದೇಶದಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಗೋ ರಕ್ಷಣೆಯ ಹೆಸರಿನಲ್ಲಿ ಗುಂಪುಗೂಡಿಕೊಂಡು ಹೊಡೆಯುವುದು, ಕೊಲ್ಲುವುದು ಅಪರಾಧ. ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದರೂ ದೇಶದಲ್ಲಿ ಮತ್ತೆ ಮತ್ತೆ ಇಂಥದೇ ಘಟನೆ ನಡೆಯುತ್ತಿರುವುದು ವಿಪರ್ಯಾಸ.