ಯೋಧ ನಿರಂಜನ್ ಅವಹೇಳನ ಮಾಡಿದವನಿಗೆ ಪೊಲೀಸ್ ಆತಿಥ್ಯ
ಮಲಪ್ಪುರಂ, ಜನವರಿ, 05: ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ವೀರ ಮರಣ ಅಪ್ಪಿದ ಯೋಧ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿ ಕಮೆಂಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮಲಪ್ಪುರಂ ನಿವಾಸಿ ಅನ್ವರ್ ಸಾದಿಕ್(24) ಎಂಬಾತನನ್ನು ಬಂಧಿಸಲಾಗಿದೆ.
ಪಠಾಣ್ ಕೋಟ್ ನ ವಾಯನೆಲೆಯಲ್ಲಿ ಭಾನುವಾರ ಗ್ರೆನೇಡ್ ಸ್ಫೋಟಗೊಂಡು ನಿರಂಜನ್ ಉಗ್ರಗಾಮಿಗಳ ಕುತಂತ್ರಕ್ಕೆ ಬಲಿಯಾಗಿದ್ದರು. ಧೀರ ಯೋಧರಿಗಾಗಿ ಇಡೀ ದೇಶವೇ ಗೌರವ ಸಲ್ಲಿಸುತ್ತಿದ್ದರೆ, ಮಲಪ್ಪುರಂನ ಯುವಕ ಪುಂಡಾಟ ತೋರಿಸಿದ್ದ.[ಎಂಥಾ ಘೋರ ವಿಧಿ ಲಿಖಿತ,ನಿರಂಜನ್ ಸಾವಿನ ಆಘಾತ]
ಮಲಪ್ಪುರಂನ ಕೋಡುರ್ ನಿವಾಸಿಯನ್ನು ಕೋಝಿಕೋಡ್ ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ಜೋಸೈ ಚೆರಿಯನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿ ಆತನ ವಿರುದ್ಧ ಸೆಕ್ಷನ್ 124, ಎ ಕಲಂ ಅನ್ವಯ ದೂರು ದಾಖಲಿಸಿಕೊಂಡಿದೆ.
ಹುತಾತ್ಮ ಯೋಧ ನಿರಂಜನ್ ಕುರಿತು ಅನ್ವರ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ, ಅವಮಾನಕರ ರೀತಿಯಲ್ಲಿ ಮಲಯಾಳಂನಲ್ಲಿ ಕಮೆಂಟ್ ಹಾಕಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು.[ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]
ಅನ್ವರ್ ಸಾದಿಕ್ ತಾನು ಮಲಯಾಳಂ ದೈನಿಕದಲ್ಲಿ ಕಾರ್ಯನಿರ್ವಹಿಸುದಾಗಿ ಬರೆದುಕೊಂಡಿದ್ದ. ಪೊಲೀಸರು ಪತ್ರಿಕಾ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದಾಗ, ಆ ಹೆಸರಿನ ಯಾವ ವ್ಯಕ್ತಿಯೂ ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದರು. ನಂತರ ಪತ್ರಿಕಾ ಕಚೇರಿಯ ಆಡಳಿತ ಮಂಡಳಿಯೇ ಆತನ ಬಗ್ಗೆ ಪೂರ್ಣವಾಗಿ ತನಿಖೆ ಕೈಕೊಳ್ಳುವಂತೆ ಮನವಿ ಮಾಡಿತ್ತು. ಯೋಧರ ಬಗ್ಗೆ, ಯೋಧರ ಬಲಿದಾನದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದವ ಸದ್ಯ ಪೊಲೀಸರ ವಶದಲ್ಲಿದ್ದಾನೆ.