ಮಮತಾ ಬ್ಯಾನರ್ಜಿ ಉದ್ದಟತನ: ಹೈಕೋರ್ಟ್ ಆದೇಶದ ವಿರುದ್ದ ಆಕ್ರೋಶ
ಮೊಹರಂ ದಿನದಂದು ದುರ್ಗಾ ವಿಸರ್ಜನೆಗಿದ್ದ ಅಡೆತಡೆಗಳನ್ನು ಕೊಲ್ಕತ್ತಾ ಉಚ್ಚನ್ಯಾಯಾಲಯ ತೆರವುಗೊಳಿಸಿದ ಕ್ರಮದ ವಿರುದ್ದ ತಿರುಗಿಬಿದ್ದಿರುವ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕೊಲ್ಕತ್ತಾ, ಸೆ 21: ಮೊಹರಂ ದಿನದಂದು ದುರ್ಗಾ ವಿಸರ್ಜನೆಗಿದ್ದ ಅಡೆತಡೆಗಳನ್ನು ಕೊಲ್ಕತ್ತಾ ಉಚ್ಚನ್ಯಾಯಾಲಯ ತೆರವುಗೊಳಿಸಿದ ಕ್ರಮಕ್ಕೆ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತ ಪಡಿಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಗಂಟಲನ್ನು ಕತ್ತರಿಸಿ ಹಾಕಿದರೂ ಪರವಾಗಿಲ್ಲ, ನಾನು ಏನು ಮಾಡಬೇಕು ಅನ್ನುವುದನ್ನು ಯಾರೂ ನನಗೆ ತಿಳಿಸಬೇಕಾಗಿಲ್ಲ. ಮುಂದಾಗುವ ಯಾವುದೇ ಅನಾಹುತಕ್ಕೆ ನಾನು ಜವಾಬ್ದಾರಳಲ್ಲ ಎನ್ನುವ ಮೂಲಕ ಮಮತಾ, ದುರ್ಗಾಪೂಜೆಯ ಈ ಸಮಯದಲ್ಲಿ ಕಾಳಿ ಅವತಾರ ತಾಳಿದ್ದಾರೆ.
ಮೊಹರಂ ದಿನದಂದು ದುರ್ಗಾ ಮೂರ್ತಿ ವಿಸರ್ಜನೆ ಅವಕಾಶ ನೀಡಿದ ಕೋರ್ಟ್
ಆದರೂ, ಮೊಹರಂ ಮತ್ತು ದುರ್ಗಾ ವಿಸರ್ಜನೆ ಶಾಂತ ರೀತಿಯಿಂದ ನಡೆಯಲು ಏನು ಕಾನೂನು, ಸುವ್ಯವಸ್ಥೆ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆಂದು ಮಮತಾ ಹೇಳಿದ್ದಾರೆ.
ಮೊಹರಂ ದಿನದಂದು ದುರ್ಗಾ ಮೂರ್ತಿ ವಿಸರ್ಜನೆಗೆ ಅವಕಾಶ ನಿರಾಕರಿಸಿ ಪಶ್ಚಿಮ ಬಂಗಾಳ ಸರಕಾರ ಹೊರಡಿಸಿದ್ದ ಆದೇಶವನ್ನು ಕೊಲ್ಕೊತ್ತಾ ಹೈಕೋರ್ಟ್ ತೆರವುಗೊಳಿಸಿತ್ತು. ಇದರಿಂದ ಮಮತಾ ಬ್ಯಾನರ್ಜಿ ಸರಕಾರ ತೀವ್ರ ಮುಖಭಂಗ ಎದುರಿಸಿತ್ತು.
ಮುಂಬೈ ಅಂತಹಾ ಮಹಾನಗರದಲ್ಲಿ ಗಣೇಶ ವಿಸರ್ಜನೆ ಮತ್ತು ಬಕ್ರೀದ್ ಮೆರವಣಿಗೆ ಶಾಂತ ರೀತಿಯಿಂದ ನಡೆದಿರಬೇಕಾದರೆ, ನೀವೂ ಮಹಾರಾಷ್ಟ್ರ ಸರಕಾರದ ರೀತಿಯಲ್ಲಿ ಯಾಕೆ ಕ್ರಮ ತೆಗೆದುಕೊಳ್ಲಬಾರದು. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಾಮರಸ್ಯದಿಂದ ಹಬ್ಬಗಳನ್ನು ಆಚರಣೆ ಮಾಡಲಿ ಎಂದು ಹೈಕೋರ್ಟ್, ಮಮತಾ ಸರಕಾರಕ್ಕೆ ಕಿವಿಹಿಂಡಿತ್ತು.
ದುರ್ಗಾ ಮೂರ್ತಿ ವಿಸರ್ಜನೆ ಮತ್ತು ಮೊಹರಂ ಮೆರವಣಿಗೆಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗ ನಿಗದಿಪಡಿಸುವಂತೆ ಕೊಲ್ಕತ್ತಾ ಪೊಲೀಸರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.