ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೇರಿದ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, ಫೆಬ್ರವರಿ 12: ರಾಜ್ಯಸಭೆಯಿಂದ ನಿವೃತ್ತರಾದ ಹಿರಿಯ ಸದಸ್ಯ ಗುಲಾಂ ನಬಿ ಅಜಾದ್ ಅವರ ಸ್ಥಾನವನ್ನು ಕರ್ನಾಟಕದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ತುಂಬುತ್ತಿದ್ದಾರೆ. ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಸಭಾ ಸಭಾಪತಿಗಳಿಗೆ ಕಾಂಗ್ರೆಸ್ ತಿಳಿಸಿದೆ.
ಕಾಂಗ್ರೆಸ್ ಪಕ್ಷ 37 ಸದಸ್ಯರನ್ನು ಹೊಂದಿದ್ದು, ಈ ಪೈಕಿ ಎ.ಕೆ.ಆಂಟನಿ, ಪಿ.ಚಿದಂಬರಂ, ಆಸ್ಕರ್ ಫರ್ನಾಂಡಿಸ್, ದೀಪೇಂದರ್ ಸಿಂಗ್ ಹೂಡಾ, ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್, ಮನಮೋಹನ್ ಸಿಂಗ್ , ಕೆ.ಸಿ. ವೇಣುಗೋಪಾಲ್ ಮುಂತಾದ ಹಿರಿಯ ನಾಯಕರಲ್ಲಿ ಯಾರನ್ನು ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲ ಮೂಡಿತ್ತು. ಲೋಕಸಭಾ ವಿಪಕ್ಷ ನಾಯಕರಾಗಿ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗ ರಾಜ್ಯಸಭೆ ವಿಪಕ್ಷ ನಾಯಕರಾಗುವ ಅವಕಾಶ ಸಿಕ್ಕಿದೆ.
ಜಮ್ಮು ಮತ್ತು ಕಾಶ್ಮೀರದ ಗುಲಾಂ ನಬಿ ಅಜಾದ್ ಅವರ ಸದಸ್ಯತ್ವ ಅವಧಿ ಫೆ.15ಕ್ಕೆ ಕೊನೆಗೊಳ್ಳಲಿದೆ. ಕಣಿವೆ ರಾಜ್ಯಕ್ಕೆ ವಿಶೇಷ ಹಕ್ಕು ನೀಡುವ ಸಂವಿಧಾನದ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ಇನ್ನೂ ಹೊಂದಿಲ್ಲ.
ಖರ್ಗೆ ಅವರು ಕರ್ನಾಟಕ ಮೂಲದ ದಲಿತ ಮುಖಂಡರಾಗಿದ್ದು, 2014ರಿಂದ 2019ರ ಅವಧಿಯಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ, ಈ ಬಾರಿ ಖರ್ಗೆ ಅವರು ಲೋಕಸಭೆಗೆ ಆಯ್ಕೆಯಾಗಿರಲಿಲ್ಲ, ಮೇಲಾಗಿ ವಿಪಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ಸಿಗೆ ಬೇಕಾದ ಸದಸ್ಯ ಬಲವೂ ಇರಲಿಲ್ಲ. ಖರ್ಗೆ ಅವರು ನಂತರ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಈಗ ವಿಪಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.