ಮಲಯಾಳಂ ನಟಿ ಕಿಡ್ನಾಪ್ : ಕೊಯಮತ್ತೂರಿನಲ್ಲಿ 7 ಕಾಮುಕರ ಬಂಧನ
ಬಹುಭಾಷಾ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು 7 ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ. ಕೊಯಮತ್ತೂರಿನ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ, ಕೇರಳಕ್ಕೆ ಕರೆ ತರಲಾಗಿದೆ.
ಕೊಚ್ಚಿ, ಫೆಬ್ರವರಿ 19: ಬಹುಭಾಷಾ ನಟಿ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಏಳು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ. ಕೊಯಮತ್ತೂರಿನ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ, ಕೇರಳಕ್ಕೆ ಕರೆ ತರಲಾಗಿದೆ.
ಫೆಬ್ರವರಿ 17 ರ ರಾತ್ರಿ 10.30 ಸುಮಾರಿಗೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸುನಿಲ್ ಕುಮಾರ್ ನನ್ನು ಬಂಧಿಸಲಾಗಿದೆ. [ನಟಿ ಅಪಹರಣ, ಲೈಂಗಿಕ ಕಿರುಕುಳ?]
ನೆಂಡುಂಬಚ್ಚೆರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕ ಮಾರ್ಟಿನ್ ನನ್ನು ಶನಿವಾರವೇ ಬಂಧಿಸಲಾಗಿದೆ ಎಂದು ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಹೇಳಿದ್ದಾರೆ.
ನಟಿಯನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಅವರ ಮಾಜಿ ಕಾರು ಚಾಲಕ ಹಾಗೂ ಆತನ ಗುಂಪು ಈ ಕೃತ್ಯ ಎಸಗಿದೆ. ಬಲವಂತಾಗಿ ಫೋಟೋ ಮತ್ತು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ದೈಹಿಕವಾಗಿ ಹಲ್ಲೆ, ಕಿರುಕುಳ ನೀಡಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಲೋಕನಾಥ್ ಹೇಳಿದ್ದಾರೆ
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿಕೊಂಡಿರುವ ಸಿಎಂ ಪಿ ವಿಜಯನ್, ಇದೊಂದು ದುರದುಷ್ಟಕರ ಘಟನೆ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಚಿತ್ರರಂಗದ ಆಕ್ರೋಶ: ಈ ನಡುವೆ ನಟಿ ಅವರು ಧೃತಿಗೆಡಬಾರದು ನಾವು ನಿಮ್ಮೊಂದಿಗಿದ್ದೇವೆ ಎಂದು ಕೇರಳ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹೇಳಿದ್ದಾರೆ. ನಟ ಪೃಥ್ವಿರಾಜ್, ನಟಿ ಭಾಮಾ ಸೇರಿದಂತೆ ಸಾರ್ವಜನಿಕರು ಕೂಡಾ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.