ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಮುಂದಿರುವ ಸವಾಲುಗಳು
ಬೆಂಗಳೂರು, ಡಿಸೆಂಬರ್ 16 : ದೇಶದ ಮೂವತ್ತು ರಾಜ್ಯಗಳಲ್ಲಿ ಕೇವಲ ಎರಡು ರಾಜ್ಯಗಳಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿರುವ ವಿಷಮ ಸ್ಥಿತಿಯಲ್ಲಿ, 132 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೊಗವನ್ನು ನಲವತ್ತೇಳು ವರ್ಷದ ರಾಹುಲ್ ಗಾಂಧಿ ಹೊತ್ತಿದ್ದಾರೆ.
ನೆಹರೂ ಕುಟುಂಬದ ಆರನೇ ವ್ಯಕ್ತಿಯಾಗಿ ಕಾಂಗ್ರೆಸ್ಸನ್ನು ಮುನ್ನಡೆಸುವ ಭಾರವನ್ನು ರಾಹುಲ್ ಹೊತ್ತಿದ್ದಾರೆ. ಈ ಹೊತ್ತು ದೇಶದೆಲ್ಲೆಡೆ ಡೋಲು, ಪಟಾಕಿ ಸದ್ದುಗಳು ಕೇಳಿಬರುತ್ತಿವೆ, ಗುಲಾಲು ರಂಗು ಚೆಲ್ಲಾಪಿಲ್ಲಿಯಾಗಿದೆ, ಮೋತಿಚೂರ್ ಲಾಡು ಲಕ್ಷಾಂತರ ಜನರ ಬಾಯಿ ಸಿಹಿ ಮಾಡಿದೆ.
ಯುವರಾಜ ರಾಹುಲ್: ಅಚ್ಚರಿ ತಿರುವುಗಳ ಸರಮಾಲೆ
ಅವರು ಸಕ್ರೀಯವಾಗಿ ರಾಜಕಾರಣಕ್ಕೆ ಇಳಿದ ನಂತರ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾಗಿದ್ದಾರೆ. ಅಪಹಾಸ್ಯಕ್ಕೀಡಾಗುತ್ತಿದ್ದ ಅವರ ಮಾತುಗಳಲ್ಲಿ ಕವನ ನಲಿದಾಡುತ್ತಿವೆ, ತೀವ್ರ ಟೀಕೆಗೆ ಗುರಿಯಾಗುತ್ತಿದ್ದ ಅವರ ನಡೆಗಳಲ್ಲಿ ಪ್ರಬುದ್ಧತೆ ಕಾಣಿಸಿಕೊಂಡಿದೆ. ಪೂರಕವಾಗುವಂತೆ ಸಮರ್ಥ ಯುವಪಡೆಯನ್ನು ಅವರು ಕಟ್ಟಿಕೊಂಡಿದ್ದಾರೆ.
ಆದರೆ, ಕಾಂಗ್ರೆಸ್ ಅಧ್ಯಕ್ಷರಾಗುವುದು ಸುಮ್ಮನೆ ಮಾತಲ್ಲ. 1885ರಲ್ಲಿ ವೋಮೇಶ್ ಚಂದರ್ ಬ್ಯಾನರ್ಜಿ ಅವರಿಂದ ಹಿಡಿದು ಸೋನಿಯಾ ಗಾಂಧಿಯವರೆಗೆ 86 ಅಧ್ಯಕ್ಷರನ್ನು ಕಾಂಗ್ರೆಸ್ ಕಂಡಿದೆ. ರಾಹುಲ್ ಅವರು 87ನೇ ಅಧ್ಯಕ್ಷ. ಕಳೆದೊಂದು ದಶಕದಲ್ಲಿ ಹಲವಾರು ಬಾರಿ ಅಧ್ಯಕ್ಷರಾಗಲು ಅವರಿಗೆ ಅವಕಾಶ ಕೂಡಿಬಂದಿದ್ದರೂ, ರಾಹುಲ್ ಆ ಅವಕಾಶವನ್ನು ಮುಂದೂಡುತ್ತಲೇ ಬಂದಿದ್ದರು.
ಹಳೆ ಕಟ್ಟಡ ಕಾಂಗ್ರೆಸ್ ಗೆ ಹೊಸ ಎಂಜಿನಿಯರ್ ರಾಹುಲ್ ಗಾಂಧಿ
2014ರಲ್ಲಿ ಲೋಕಸಭೆ ಚುನಾವಣೆ ನಡೆದ ನಂತರ, ದೇಶದಾದ್ಯಂತ ಭಾರತೀಯ ಜನತಾ ಪಕ್ಷ ಧೂಳೆಬ್ಬಿಸಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಮುಂದೆ ಅಗಾಧವಾದ ಸವಾಲುಗಳು ಎದುರಾಗಲಿವೆ.
ಭಲೇ ಅನ್ನುವಂತೆ ಒಂದೂ ಚುನಾವಣೆ ಗೆದ್ದಿಲ್ಲ
ರಾಹುಲ್ ಗಾಂಧಿಯವರು ಪ್ರತಿ ಚುನಾವಣೆಯಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದ ಮೂಲೆಮೂಲೆ ಸುತ್ತುತ್ತಿದ್ದಾರಾದರೂ ಒಂದೇ ಒಂದು ಚುನಾವಣೆಯನ್ನು ತಮ್ಮ ಸಾಮರ್ಥ್ಯದಿಂದ ಗೆಲ್ಲದಿರುವುದು ಅವರ ವತ್ತಿಜೀವನದ ಕಪ್ಪುಚುಕ್ಕೆ. ಇದೀಗ ಅಧ್ಯಕ್ಷರಾದ ಮೇಲೆ ಅವರು ಒಂದಾದರೂ ಚುನಾವಣೆಯನ್ನು 'ಭಲೇ' ಅನ್ನುವ ರೀತಿಯಲ್ಲಿ ಗೆದ್ದೇ ಇಲ್ಲ. ಗೆದ್ದು ತೋರಿಸುವ ಸವಾಲು ಈಗ ಅವರ ಮುಂದಿದೆ.
ಯಶಸ್ಸು ಕಾಣದ ಮೈತ್ರಿ ಪ್ರಯೋಗ
16ನೇ ಲೋಕಸಭೆ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ 543 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಡೆದಿದ್ದು ಕೇವಲ 44 ಸೀಟುಗಳು. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ ಅವರ ಜೊತೆ ಸೇರಿ ನಡೆಸಿದ ಮೈತ್ರಿ ಪ್ರಯೋಗ ಕೂಡ ಯಶಸ್ಸು ಕಾಣಲಿಲ್ಲ. ಮಹಾರಾಷ್ಟ್ರ, ಉತ್ತರಾಖಂಡ, ಆಸ್ಸಾಂ, ಹರ್ಯಾಣ, ಕೇರಳದಲ್ಲಿಯೂ ಪಕ್ಷ ಹೀನಾಯವಾಗಿ ಸೋತಿದೆ.
2018 ರಾಹುಲ್ ಅವರಿಗೆ ಮಹತ್ವದ ವರ್ಷ
ಗುಜರಾತ್ ಚುನಾವಣೆಯಲ್ಲಿ ಏನಾಗುತ್ತೋ ಏನೋ, ಆದರೆ, 2018 ಅವರಿಗೆ ಮಹತ್ವದ ವರ್ಷವಾಗಬಲ್ಲದು. ಏಪ್ರಿಲ್ ಅಥವಾ ಮೇನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ನಂತರ ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ, ಮಧ್ಯಪ್ರದೇಶ, ಛತ್ತೀಸಘಡ ರಾಜಸ್ತಾನದಲ್ಲಿಯೂ 2018ರಲ್ಲಿ ಚುನಾವಣೆ ನಡೆಯಬೇಕಿದೆ. ರಾಹುಲ್ ಗಾಂಧಿ ಅವರ ಸಾಮರ್ಥ್ಯ ಪರೀಕ್ಷೆಗೆ ಇನ್ನೇನು ಬೇಕು?
ಅಮ್ಮನ ನೆರಳಿನಿಂದ ಹೊರಬರಬೇಕಿದೆ ರಾಹುಲ್
ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಉಪಾಧ್ಯಕ್ಷರಾಗಿ ಅವರ ತಾಯಿ ಸೋನಿಯಾ ಗಾಂಧಿ ಅಡಿಯಲ್ಲಿ 13 ವರ್ಷ ಸಾಕಷ್ಟು ಅನುಭವಗಳನ್ನು ಪಡೆದಿದ್ದಾರೆ, ರಾಜಕೀಯದ ಕುಸುರಿಗಾರಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದೀಗ, ಸೋನಿಯಾ ಆಶೀರ್ವಾದ, ಬೆಂಬಲ, ಸಲಹೆಗಳು ಇರುತ್ತವಾದರೂ, ಅವರ ನೆರಳಿನಿಂದ ಹೊರಬಂದು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಸಾಬೀತು ಮಾಡಬೇಕಿದೆ ರಾಹುಲ್.
ರಾಹುಲ್ ಸುತ್ತ ಯುವಪಡೆಯ ಭದ್ರ ಕೋಟೆ
ಕಾಂಗ್ರೆಸ್ಸನ್ನು ಬುಡಮಟ್ಟದಿಂದ ಸಂಘಟಿಸಿ, ಬಲಪಡಿಸಿ, ಮೇಲೆತ್ತುವ ಗುರುತರ ಜವಾಬ್ದಾರಿ ರಾಹುಲ್ ಗಾಂಧಿ ಅವರ ಹೆಗಲ ಮೇಲಿದೆ. ಅವರ ಸುತ್ತ ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್, ಮಿಲಿಂದ್ ದೇವೋರಾ, ಕೃಷ್ಣ ಭೈರೇಗೌಡ ಯುವಪಡೆಯ ಕೋಟೆಯಿದೆ. ಶಶಿ ತರೂರ್ ರಂಧ ಬ್ರಿಲಿಯೆಂಟ್ ವಾಕ್ಪಟು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರುವ ದಿವ್ಯಾ ಸ್ಪಂದನಾ (ರಮ್ಯಾ) ಅವರ ಬೆನ್ನೆಲುಬಾಗಿದ್ದಾರೆ. ಆದರೆ, ಬುನಾದಿಯೇ ಶಿಥಿಲವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಶಿಥಿಲವಾಗಿದ್ದೇಕೆ?
ಸುಮಾರು 6 ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಶಿಥಿಲವಾಗಿದ್ದೇಕೆ? ದೇಶದ ಜನರು ಪ್ರತಿಯೊಂದು ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ತಿರಸ್ಕರಿಸುತ್ತಿದ್ದಾರೇಕೆ? ದೇಶದ ಹಳ್ಳಿಹಳ್ಳಿಯಲ್ಲಿರುವ ಮನೆಮನೆಯ ಬಾಗಿಲು ತಟ್ಟಿ ಈ ಸತತ ಸೋಲಿಗೆ ಕಾರಣ ಕಂಡುಕೊಳ್ಳಬೇಕಿದೆ ರಾಹುಲ್. ಸ್ಥಳೀಯ ಕಾರ್ಯಕರ್ತರನ್ನು, ನಾಯಕರನ್ನು ಸಂಘಟಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ತುರ್ತು ಅಗತ್ಯವೂ ಅವರಿಗಿದೆ.
ಕರ್ನಾಟಕದಲ್ಲಿ ಸುವರ್ಣ ಅವಕಾಶ ಕೂಡಿಬಂದಿದೆ
ಕರ್ನಾಟಕದಲ್ಲಿ ಕಾಂಗ್ರೆಸ್ ಕಳೆದ ನಾಲ್ಕೂ ಮುಕ್ಕಾಲು ವರ್ಷಗಳಿಂದ ಆಡಳಿತ ನಡೆಸಿದೆ. ಇಲ್ಲಿ ಕೂಡ ರಾಹುಲ್ ಗಾಂಧಿಯವರಿಗೆ ಬಹುದೊಡ್ಡ ಸವಾಲು ಎದುರಾಗಲಿದೆ. ಅವರು ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್ ಸೋತಿದೆ ಎನ್ನುವ ಕಳಂಕವನ್ನು ತೊಡೆದುಹಾಕಲು ಅವರಿಗೆ ಸುವರ್ಣ ಅವಕಾಶ ಕೂಡಿಬಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯನವರ ಆಡಳಿತ ವೈಖರಿ ಅವರಿಗೆ ಪ್ಲಸ್ ಆಗಲಿದೆ. ಮೋದಿ ಅಲೆ ಇಲ್ಲಿ ನಡೆಯುವುದಿಲ್ಲ ಎಂಬುದನ್ನೂ ಅವರು ಸಾಬೀತುಪಡಿಸಬೇಕಿದೆ.
ಮೋದಿ ವಿರೋಧಿ ಅಲೆಯನ್ನು ಹೇಗೆ ಸೃಷ್ಟಿಸುತ್ತಾರೆ?
ಎಂಟು ರಾಜ್ಯಗಳ ಚುನಾವಣೆ ಮುಗಿಯುವುದರೊಳಗೆ 17ನೇ ಲೋಕಸಭೆ ಚುನಾವಣೆ ರಾಹುಲ್ ಗಾಂಧಿಯವರಿಗೆ ಬಹುದೊಡ್ಡ ಸವಾಲು ಒಡ್ಡಲಿದೆ. ಯಾರೂ ನಿರೀಕ್ಷಿಸಿರದ ನರೇಂದ್ರ ಮೋದಿಯವರ ಗೆಲುವು, ಕಳಂಕರಹಿತ ಆಡಳಿತ, ಅವರು ಕೈಗೊಂಡಿರುವ ಹಲವಾರು ಅಭಿವೃದ್ಧಿ ಕೆಲಸವನ್ನೆಲ್ಲ ಮೀರಿ ಮೋದಿ ವಿರೋಧಿ ಅಲೆಯನ್ನು ಹೇಗೆ ಎಬ್ಬಿಸಲಿದ್ದಾರೆ ಎಂಬುದನ್ನು ಎಲ್ಲರೂ ಎದಿರುನೋಡುತ್ತಿದ್ದಾರೆ.
ವಿರೋಧಿಗಳನ್ನು ಒಟ್ಟುಗೂಡಿಸುವುದು ಹೇಗೆ
ಮೋದಿ ಸರಕಾರದ ವಿರುದ್ಧ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವುದು ರಾಹುಲ್ ಅವರಿಗೆ ಚುನಾವಣೆ ಗೆಲ್ಲುವುದಕ್ಕಿಂತ ದೊಡ್ಡ ಸವಾಲು. ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್, ಬಹುಜನ ಸಮಾಜವಾದಿ ಪಕ್ಷ, ಡಿಎಂಕೆ, ಜೆಡಿಯು ಮತ್ತು ಜೆಡಿಎಸ್ ಪಕ್ಷಗಳನ್ನು ಒಟ್ಟುಗೂಡಿಸಿದರೆ ಮೋದಿಯವರನ್ನು ಎದುರಿಸುವುದು ಬಹುದೊಡ್ಡ ಸವಾಲು ಆಗಲಾರದು. ಆದರೆ, ರಾಹುಲ್ ಮನದಲ್ಲೇನಿದೆ ಬಲ್ಲವರಾರು?