ಕೋಲ್ಕತ್ತಾದ ದುರ್ಗಾ ಪೂಜೆಯಲ್ಲಿ ಮಹಿಷಾಸುರನಂತೆ ಮಹಾತ್ಮಾ ಗಾಂಧಿಯ ಚಿತ್ರಣ; ವ್ಯಾಪಕ ಖಂಡನೆ
ಕೋಲ್ಕತ್ತಾ, ಅ.03: ರಾಷ್ಟ್ರಪಿತನ ಜನ್ಮದಿನದಂದು ಕೋಲ್ಕತ್ತಾದ ದುರ್ಗಾ ಪೂಜೆಯ ಪೆಂಡಾಲ್ನಲ್ಲಿ ಮಹಿಷಾಸುರನ ಬದಲಿಗೆ ಒರಟಾಗಿ ರಚಿಸಲಾದ ಮಹಾತ್ಮ ಗಾಂಧೀಜಿಯಂತೆ ಕಾಣುವ ಆಕೃತಿಯನ್ನು ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಕೋಲ್ಕತ್ತಾದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಆಯೋಜಿಸಿದ್ದ ದುರ್ಗಾ ಪೂಜೆಯಲ್ಲಿ ಅಸುರನನ್ನು ಕನ್ನಡಕಧಾರಿ, ಧೋತಿ ತೊಟ್ಟ ಬೋಳುತಲೆಯ ವ್ಯಕ್ತಿ ಕೋಲನ್ನು ಹಿಡಿದು ಮಹಾತ್ಮ ಗಾಂಧಿಯಂತೆಯೇ ಕಾಣುವಂತೆ ಚಿತ್ರಿಸಲಾಗಿದೆ. ಇದಕ್ಕೆ ಇಟ್ಟಿರುವ ಬಗ್ಗೆ ವ್ಯಾಪಕ ಆಕ್ರೋಶ ಉಂಟಾಗಿದೆ.
ಗಾಂಧೀಜಿ ಇಡೀ ದೇಶಕ್ಕೆ ಪ್ರೇರಣಾಶಕ್ತಿ:ಸಿಎಂ ಬೊಮ್ಮಾಯಿ
ನೈರುತ್ಯ ಕೋಲ್ಕತ್ತಾದ ರೂಬಿ ಕ್ರಾಸಿಂಗ್ ಬಳಿ ಭಾನುವಾರ ಗಾಂಧಿಜೀ ಜನ್ಮದಿನದಂದು ಪ್ರತಿಮೆಯನ್ನು ಸಾರ್ವಜನಿಕಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಘಟಕರು ಈ ಹೋಲಿಕೆಯನ್ನು "ಕಾಕತಾಳೀಯ" ಎಂದು ಪ್ರತಿಪಾದಿಸಿದ್ದಾರೆ. ಆದರೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಅವರ ಪಾತ್ರಕ್ಕಾಗಿ ಗಾಂಧಿಯನ್ನು ಟೀಕಿಸುವ ಅಗತ್ಯವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಕೃತ್ಯಕ್ಕೆ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ, ಸಿಪಿಐ-ಎಂ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.
ಸಾಮ್ಯತೆಗಳು "ಕೇವಲ ಕಾಕತಾಳೀಯ" ಎಂದ ಸಂಘಟಕರು!
ನೈರುತ್ಯ ಕೋಲ್ಕತ್ತಾದ ರೂಬಿ ಕ್ರಾಸಿಂಗ್ ಬಳಿ ಅಖಿಲ ಭಾರತೀಯ ಹಿಂದೂ ಮಹಾಸಭಾ ದುರ್ಗಾ ಪೂಜೆ ಹಮ್ಮಿಕೊಂಡಿದ್ದರು. ಈ ವೇಳೆ ಇಂತಹ ಕೃತ್ಯ ಎಸಗಲಾಗಿದೆ. ಘಟನೆ ಬಗ್ಗೆ ದೂರು ದಾಖಲಿಸಿದ ನಂತರ ಪೊಲೀಸರ ಸೂಚನೆಯಂತೆ ಗಾಂಧಿಯಂತೆ ಕಾಣುವ ವಿಗ್ರಹದ ರೂಪವನ್ನು ಬದಲಾಯಿಸಿದ್ದಾರೆ. ಈ ಸಾಮ್ಯತೆಗಳು "ಕೇವಲ ಕಾಕತಾಳೀಯ" ಎಂದು ಸಂಘಟಕರು ಹೇಳಿದ್ದಾರೆ.
"ಇಲ್ಲಿ ಪೂಜಿಸಲ್ಪಟ್ಟ ದುರ್ಗಾ ವಿಗ್ರಹವು ಆರಂಭದಲ್ಲಿ ಮಹಿಷಾಸುರನ ಮುಖವನ್ನು ಹೊಂದಿದ್ದು, ಅವರ ಮುಖವು ಮಹಾತ್ಮ ಗಾಂಧಿಯವರಂತೆಯೇ ಇತ್ತು. ಸಾಮ್ಯತೆಗಳು ಕೇವಲ ಕಾಕತಾಳೀಯವಾಗಿದೆ. ಅದರ ಫೋಟೋಗಳು ವೈರಲ್ ಆದ ನಂತರ, ಪೋಲೀಸ್ ತಂಡವು ಪೆಂಡಾಲ್ಗೆ ಭೇಟಿ ನೀಡಿ, ಬದಲಾಯಿಸುವಂತೆ ಹೇಳಿದೆ" ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ ತಿಳಿಸಿದ್ದಾರೆ.
ಉದ್ವಿಗ್ನತೆ ಉಂಟಾಗುತ್ತದೆ ಎಂದು ಫೋಟೋ ತೆಗಿಸಿದ ಪೊಲೀಸರು!
ಈ ಹಿಂದೆ ಪತ್ರಕರ್ತರೊಬ್ಬರು ಕೊಲ್ಕತ್ತಾ ಪೊಲೀಸರನ್ನು ಟ್ಯಾಗ್ ಮಾಡಿ ದುರ್ಗಾ ವಿಗ್ರಹದ ಛಾಯಾಚಿತ್ರವನ್ನು ಟ್ವೀಟ್ ಮಾಡಿದ್ದರು. ಹಬ್ಬದ ಸಮಯದಲ್ಲಿ ಉದ್ವಿಗ್ನತೆ ಉಂಟಾಗಬಹುದು ಎಂದು ಪೊಲೀಸರು ಪೋಟೋ ತೆಗೆಯುವಂತೆ ಕೇಳಿಕೊಂಡರು ಎಂದು ಹೇಳಿ ಅವರು ಪೋಸ್ಟ್ ಅನ್ನು ಅಳಿಸಿದ್ದಾರೆ.
"ಕೋಲ್ಕತ್ತಾದ ನಿರ್ದಿಷ್ಟ ಪೂಜೆಯ ಕುರಿತು ನನ್ನ ಟ್ವೀಟ್ ಅನ್ನು ಅಳಿಸಲು ಕೋಲ್ಕತ್ತಾ ಸೈಬರ್ ಸೆಲ್ನಿಂದ ನನಗೆ ವಿನಂತಿ ಮಾಡಲಾಗಿದೆ. ಏಕೆಂದರೆ ಅದು ಹಬ್ಬಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡಬಹುದು ಎಂದು ಅವರು ಭಾವಿಸಿದ್ದಾರೆ. ಜವಾಬ್ದಾರಿಯುತ ನಾಗರಿಕನಾಗಿ ನಾನು ಅವರ ಮನವಿಗೆ ಬದ್ಧನಾಗಿದ್ದೇನೆ" ಎಂದು ಆಲ್ಟ್ ನ್ಯೂಸ್ ಹಿರಿಯ ಸಂಪಾದಕ ಇಂದ್ರದೀಪ್ ಭಟ್ಟಾಚಾರ್ಯ ಹೇಳಿದ್ದಾರೆ.
ಘಟನೆ ಕಾಕತಾಳಿಯ ಎಂದ ಅಖಿಲ ಭಾರತೀಯ ಹಿಂದೂ ಮಹಾಸಭಾ
ಅಖಿಲ ಭಾರತೀಯ ಹಿಂದೂ ಮಹಾಸಭಾ ಸಂಘಟನೆಯು ಯಾರ ಭಾವನೆಗಳಿಗೂ ಧಕ್ಕೆ ತರಲು ಉದ್ದೇಶಿಸಿಲ್ಲ ಎಂದು ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ ಹೇಳಿದ್ದಾರೆ.
"ಪೊಲೀಸರು ಅದನ್ನು ಬದಲಾಯಿಸಲು ಕೇಳಿದರು, ನಾವು ಬದಲಾಯಿಸಿದ್ದೇವೆ. ಈಗ ನಾವು ಮಹಿಷಾಸುರನ ವಿಗ್ರಹಕ್ಕೆ ಮೀಸೆ ಮತ್ತು ಕೂದಲು ಹಾಕಿದ್ದೇವೆ" ಎಂದು ಅವರು ಹೇಳಿದರು.
ಪುರಾಣಗಳ ಪ್ರಕಾರ, ದುರ್ಗಾ ದೇವಿಯು ಮಹಿಷಾಸುರನ ದುಷ್ಟ ಆಳ್ವಿಕೆಯನ್ನು ಕೊನೆಗೊಳಿಸಲು ಯುದ್ಧದಲ್ಲಿ ಮಹಿಷಾಸುರರನನ್ನು ಕೊಂದಳು ಎಂಬುದು ಪ್ರತೀತಿ.
ಇದು ರಾಷ್ಟ್ರಪಿತನಿಗೆ ಮಾಡಿದ ಅವಮಾನ; ಟಿಎಂಸಿ
ಈ ಕ್ರಮಕ್ಕೆ ವಿವಿಧ ವಲಯಗಳಿಂದ ಖಂಡನೆ ವ್ಯಕ್ತವಾಗಿತ್ತು.
"ಅಖಿಲ ಭಾರತೀಯ ಹಿಂದೂ ಮಹಾಸಭಾ ಮಾಡಿದ್ದನ್ನು ನಾವು ಬೆಂಬಲಿಸುವುದಿಲ್ಲ. ನಾವು ಅದನ್ನು ಖಂಡಿಸುತ್ತೇವೆ. ನಮಗೂ ಗಾಂಧೀಜಿಯವರ ಅಭಿಪ್ರಾಯಗಳೊಂದಿಗೆ ಭಿನ್ನಾಭಿಪ್ರಾಯಗಳಿವೆ. ಆದರೆ, ಅದರ ವಿರುದ್ಧ ಪ್ರತಿಭಟಿಸಲು ಇದು ಒಂದು ಮಾರ್ಗವಲ್ಲ" ಎಂದು ಬಂಗಿಯ ಪರಿಷತ್ತು ಹಿಂದೂ ಮಹಾಸಭಾದ ಅಧ್ಯಕ್ಷ ಸಂದೀಪ್ ಮುಖರ್ಜಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಜಕೀಯ ಪಕ್ಷಗಳು ಕೂಡ ಗಾಂಧಿಯನ್ನು 'ಮಹಿಷಾಸುರ' ಎಂದು ಆರೋಪಿಸಿರುವುದಕ್ಕೆ ಟೀಕಿಸಿವೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ರಾಜ್ಯ ವಕ್ತಾರ ಕುನಾಲ್ ಘೋಷ್, "ಇದು ರಾಷ್ಟ್ರಪಿತನಿಗೆ ಮಾಡಿದ ಅವಮಾನ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಅವಮಾನ. ಇಂತಹ ಅವಮಾನದ ಬಗ್ಗೆ ಬಿಜೆಪಿ ಏನು ಹೇಳುತ್ತದೆ? ಗಾಂಧೀಜಿಯ ಹಂತಕ ಯಾವ ಸೈದ್ಧಾಂತಿಕ ಶಿಬಿರಕ್ಕೆ ಸೇರಿದವನು ಎಂದು ನಮಗೆ ತಿಳಿದಿದೆ" ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಕೂಡ ಇದನ್ನು ಟೀಕಿಸಿದ್ದು, "ಇಂತಹ ಕೆಲಸ ಮಾಡಿದ್ದರೆ ಅದು ದುರದೃಷ್ಟಕರ, ನಾವು ಅದನ್ನು ಖಂಡಿಸುತ್ತೇವೆ. ಇದು ಕಳಪೆ ಅಭಿರುಚಿಯಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ತಿಳಿಸಿದ್ದಾರೆ.