ಗಾಂಧಿ ಮತ್ತು ಕಿಂಗ್ ಅಹಿಂಸಾ ಪ್ರಿಯರಿಗೆ ಪ್ರಾತ:ಸ್ಮರಣೀಯರು
ಯುದ್ಧ, ಯುದ್ಧೋನ್ಮತ್ತತೆಯ ಉಯ್ಯಾಲೆಯಲ್ಲಿ ಮೇಲೆ ಕೆಳಗೆ ಜೀಕುತ್ತಾ ಮಾನವಕುಲ ಹೊಂದುತ್ತಿರುವ ಸ್ಥಿತ್ಯಂತರಗಳ ಪರಾಕಾಷ್ಠೆಯ ಈ ದಿನಗಳಲ್ಲಿ ' ಶಾಂತಿ, ಅಹಿಂಸೆ' ಎಂಬ ಎರಡು ಪದಗಳ ಮಂತ್ರ ನಮ್ಮನ್ನು ಉಳಿಸಬಲ್ಲ ಮಂತ್ರದಂಡ ಆದೀತೇ?
ಜನಾಂಗಗಳ ಆಂತರಿಕ ತಲ್ಲಣಗಳ ಪರಾಕಾಷ್ಠೆ, ಕುಟಿಲೋದ್ದೇಶಗಳಿಗಾಗಿ ನಡೆದಿರುವ ಹಿಂಸೆಯಿಂದಾಗಿ ಹರಿಯುತ್ತಿರುವ ರಕ್ತದ, ಕಣ್ಣೀರಿನ ಕಾಲುವೆಗಳನ್ನು ನಿಲ್ಲಿಸುವ ತಡೆಯೊಡ್ಡು ಆದೀತೇ? ಹಿಂಸೆಯೇ ಹಿಂಸೆಗೆ ಉತ್ತರವೇ?ಅಥವಾ ಕ್ರೌರ್ಯಕ್ಕೆ ಮೌನ ಸಹನೆ ಉತ್ತರವೇ?
"ಅಪ್ ಜುಲ್ಮ್ ಢಾತೇ ಜಾವೋ ಹಮ್ ಸೆಹತೇ ಜಾಯೇಂಗೆ..." ಅನ್ನುವ ಸಾಲುಗಳೀಗ ಪ್ರಸ್ತುತವೇ...ಹಿಂದೊಮ್ಮೆ ಇತಿಹಾಸದಲ್ಲಿ ತನ್ನ ಛಾಪನ್ನು ಬಲವಾಗಿ ಒತ್ತಿ ಪರಿಣಾಮಗಳನ್ನು ಕೈಗೆಟುಕಿಸಿದ್ದ ಈ 'ಅಹಿಂಸಾ ಮಾರ್ಗ ಪ್ರಯೋಗ' ಇಂದಿಗೂ ಸೂಕ್ತವೇ?
ಪ್ರಶ್ನೆಗಳ ಮೂಲೋದ್ದೇಶವನ್ನು ಶೋಧಿಸಿದಷ್ಟೂ ಉತ್ತರ ಕಂಡುಕೊಳ್ಳುವುದು ಕಠಿಣವೇ ಆದೀತು. ಆದರೂ ಯಾವ ಕಾಲಕ್ಕೆ ಯಾವುದು ಸೂಕ್ತವೋ ಅದನ್ನು ಕೈಗೊಳ್ಳುವುದೇ ವಿಹಿತ.
ಅಸಮಾನತೆ, ಅಸ್ಪ್ರಶ್ಯತೆ ಎರಡೂ ಮನುಷ್ಯಕುಲದ ಕಳಂಕಗಳೇ ಹೌದಲ್ಲವೇ...ಗಾಂಧಿಯವರು ಅಸ್ಪ್ರಶ್ಯತೆ ತೊಡೆಯಲು ನಡೆಸಿದ ಹೋರಾಟದಷ್ಟೇ ಮುಖ್ಯವಾಗಿತ್ತು ಆಫ್ರಿಕನ್ ಅಮೆರಿಕನ್ ಕಪ್ಪು ಜನಾಂಗದವರಿಗೆ ಅವರನ್ನು ಶತಮಾನಗಳ ವರೆಗೆ ಬೃಹದ್ಭೂತದಂತೆ ಕಾಡಿದ್ದು ಬಿಳಿಬಣ್ಣದವರ 'ಅಪಾರ್ಥೀಡ್' ಅಥವಾ ವರ್ಣಭೇದ ನೀತಿ.
ಈ ಎರಡೂ ಶಾಪಗಳ ನಿವಾರಣಾ ಕಾಳಗವನ್ನೇ ತಮ್ಮ ಉಸಿರಾಟ ಆಗಿಸಿಕೊಂಡ ಈ ಚೇತನಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜ್ಯೂ. ನಮಗೆ ಗಾಂಧೀಜಿ ಆಪ್ತರಾಗಿರುವಷ್ಟೇ ಸಶಕ್ತವಾಗಿ- ಅಮೇರಿಕಾ ಸ್ಥಿತ ಆಫ್ರಿಕನ್ ಅಮೆರಿಕನ್ ಪೀಳಿಗೆಯ ಆರಾಧ್ಯ ದೈವ ಅಗಿರುವುದರಲ್ಲಿ ಅಚ್ಚರಿ ಇಲ್ಲ.
ಈ ಇಬ್ಬರಲ್ಲೂ ಇರುವ ಯೋಚನಾಧಾಟಿಗಳ ಸಾಮ್ಯತೆಯ ಬಗ್ಗೆ ಕೇಳಿ, ಓದಿ ನೋಡಿದಾಗ ಒಂದಿನಿತು ಅಚ್ಚರಿ ಸಹಜ. ನಮ್ಮ ಮಹಾತ್ಮ ಬಾಪೂ ಯಾರೆಲ್ಲಾ ಮಾನವಹಕ್ಕುಗಳ ಹೋರಾಟಗಾರರಿಗೆ ಮೂಲಸ್ರೋತವಾಗಿ, ಪ್ರೇರಣೆ ಆಗಿ ಬೆಳಕು ತೋರಿದನೆಂಬುದರ ಬಗ್ಗೆ ತಿಳಿದಾಗ ಇನ್ನೂ ಅಚ್ಚರಿಯಾದೀತು.
ಮಾರ್ಟಿನ್ ಲೂಥರ್ ಕಿಂಗ್ ಹಾಗೆ ನಮ್ಮ ರಾಷ್ಟ್ರಪಿತನಿಂದ ಹೋರಾಟದ ಮಾರ್ಗಕ್ಕೆ ಬೆಳಕು ನೀಡಿಸಿಕೊಂಡ ವಿದ್ಯಾರ್ಥಿ 'ಸತ್ಯಾಗ್ರಹ' ಎನ್ನುವ ಸಾತ್ವಿಕ ಯುದ್ಧದಿಂದ ಪ್ರೇರಿತರಾಗಿ ಮುನ್ನಡೆದ ವ್ಯಕ್ತಿ. ಈತನ ಜನನ, ಓದು, ವರ್ಣದ್ವೇಷದ ವಿರುದ್ದದ ಹೋರಾಟಗಳ ಮೂಲನೆಲೆ, ನೆಲ ಅಮೆರಿಕ, ರಾಜ್ಯ ಜಾರ್ಜಿಯಾ, ನಗರ ಅಟ್ಲಾಂಟಾ.
ಮಾರ್ಟಿನ್ ಲೂಥರ್
ಅದು 1963ರ 'ಮಾರ್ಚ್ ಆನ್ ವಾಷಿಂಗ್ಟನ್ 'ಆಂದೋಲನದ ಸಮಯ "I have a dream" ಎಂದು ಘಂಟಾಘೋಷಿಸಿದ ಮಾರ್ಟಿನ್ ಲೂಥರ್ ಕಿಂಗ್ ಧ್ವನಿಗೆ ಅಮೆರಿಕನ್ ಶ್ವೇತವರ್ಣರ ಗುಂಡಿಗೆ ನಡುಗಿತು ಎಂದು ಇತಿಹಾಸ ಹೇಳಿದೆ.
ಆಫ್ರಿಕನ್ ಅಮೆರಿಕನ್ನರ ಮೇಲಿನ ವರ್ಣಭೇದ
ದಶಕಾವಧಿಗಳಕಾಲ ಬಿಳಿಯರಿಂದ ನಡೆದು ಬಂದಿದ್ದ ಆಫ್ರಿಕನ್ ಅಮೆರಿಕನ್ನರ ಮೇಲಿನ ವರ್ಣಭೇದ, ಲಿಂಗ ಅಸಮಾನತೆ, ಸಾಮಾಜಿಕ ಸಮಾನತೆಯ ಹಕ್ಕಿನ ಉಲ್ಲಂಘನೆ ಎಲ್ಲವನ್ನೂ ಎದುರಿಸಿ ನಿಂತು ಕೊಟ್ಟ ಸಂದೇಶ ಅದು... ಮಾನವ ಹಕ್ಕುಗಳ ಬಗ್ಗೆ, ಸವರ್ಣೀಯರ ಸ್ಥಾನಮಾನದ ಬಗ್ಗೆ ಹೋರಾಟ ಅಮೆರಿಕಾದಲ್ಲಿ ಈ ಮೊದಲೇ ಆರಂಭವಾಗಿತ್ತು.
ಬಿಳಿಯರ ಕಪ್ಪು ಮುಖವಾಡ
ರೋಸಾ ಪಾರ್ಕ್ಸ್ ಕರಿಯಳಾಗಿ ಬಿಳಿಯನೊಬ್ಬನಿಗೆ ಬಸ್ಸಿನಲ್ಲಿ ತನ್ನ ಸೀಟನ್ನು ಬಿಟ್ಟು ಕೊಡದಿದ್ದುದಕ್ಕಾಗಿ ಅವಳನ್ನು ಬಸ್ಸಿನಿಂದ ಹೊರದೂಡಿ ಬಂಧಿಸಿದ ಘಟನೆ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಅನುಭವಿಸಿದಂಥದೇ ಕ್ರೌರ್ಯ.. ಈ ಹಿಂದೆಯೂ ಕರಿಯರು ಇಂತಹ ಅಸಮಾನತೆಯನ್ನು ಪ್ರತಿಭಟಿಸಿ ಬಿಳಿಯರ ಕಪ್ಪು ಮುಖವಾಡವನ್ನು ಕಳಚಲು ನೋಡಿದ್ದನ್ನು ಇತಿಹಾಸ ಹೇಳಿದೆ..
ಆಫ್ರಿಕನ್ ಅಮೆರಿಕನ್ನರು ಸಾಧಿಸಿದ ಗೆಲುವು
ಮಾರ್ಟಿನ್ ಲೂಥರ್ ಕಿಂಗ್ ಜ್ಯೂ. ಕರಿಯರ ಈ ಎಲ್ಲಾ ಹೋರಾಟಗಳಿಗೆ ಅಹಿಂಸಾತ್ಮಕ ಆಂದೋಲನದ ಚೌಕಟ್ಟನ್ನು ಹಾಕಿ ಮುಂದಾಳುವಾಗಿ ಅಂದಿನ ಅಮೆರಿಕನ್ ಸರಕಾರ, ಕೋರ್ಟುಗಳು ಬಗ್ಗುವಂತೆ ಮಾಡಿದ್ದು ಆಫ್ರಿಕನ್ ಅಮೆರಿಕನ್ನರು ಸಾಧಿಸಿದ ಗೆಲುವು. ಮೊಂಟೆಗೋಮರಿ ಅಹಿಂಸಾತ್ಮಕ ಬಸ್ ಆಂದೋಲನಕ್ಕೆ ಮಹಾತ್ಮಾ ಗಾಂಧೀಜಿಯೇ ಕಿಂಗ್ ರ ಪ್ರೇರಣೆ...
ಕಿಂಗ್, ಗಾಂಧಿ ಅಹಿಂಸಾ ಪ್ರಿಯರಿಗೆ ಪ್ರಾತ:ಸ್ಮರಣೀಯರು
ಅಸ್ಪ್ರಶ್ಯತೆಯೆದುರಿನ ಅವರ ಹೋರಾಟ ಹಾಕಿಕೊಟ್ಟದ್ದು ಸಾಮಾಜಿಕ, ಆರ್ಥಿಕ ಅಸಮಾನತೆಯ ವಿರುದ್ಧದ ಕಿಂಗ್ ರ ಕಾಳಗದ ಬುನಾದಿ.... ಮತ್ತು ಅಲ್ಲಿಂದಲೇ ಮುಂದುವರಿದು ಹೋರಾಟದಲ್ಲಿ ಗೆದ್ದ ಆಫ್ರಿಕನ್ ಅಮೆರಿಕನ್ ಜನ ಬಾಪೂಜಿ ಯ ಪ್ರತಿಮೆಯನ್ನು ಅಟ್ಲಾಂಟಾದ ಡೌನ್ ಟೌನ್ ಸ್ಥಿತ ಮಾಟಿ೯ನ್ ಲೂಥರ್ ಕಿಂಗ್ ಮ್ಯೂಸಿಯಂನಲ್ಲಿ ಸ್ಥಾಪಿಸಿ ತಮ್ಮ ಪ್ರೀತ್ಯಾದರಗಳ ಕುರುಹಿಟ್ಟಿದ್ದಾರೆ. 1959ರಲ್ಲಿ ಭಾರತ, ಸಾಬರಮತಿಗೆ ಬಂದಿಳಿದು ಕಿಂಗ್ ತನ್ನ ಮಾನಸಿಕ , ಆಧ್ಯಾತ್ಮಿಕ, ಅಹಿಂಸಾ ಮಾರ್ಗ ಗುರುವಿಗೆ ನಮನ ಸಲ್ಲಿಸಿದ್ದರು. ಕಿಂಗ್ ಮತ್ತು ಗಾಂಧಿ ಇಬ್ಬರೂ ಅಹಿಂಸಾ ಪ್ರಿಯರಿಗೆ ಪ್ರಾತ:ಸ್ಮರಣೀಯರು.