ರಸ್ತೆ ಬದಿ ಮೂತ್ರ ಮಾಡಿದ ಮಹಾರಾಷ್ಟ್ರ ಬಿ.ಜೆ.ಪಿ ಸಚಿವ
ಮಹಾರಾಷ್ಟ್ರ, ನವೆಂಬರ್ 20 : ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚಭಾರತ ಅಭಿಯಾನದ ಮೂಲಕ ಸ್ವಚ್ಚ ಭಾರತ ನಿರ್ಮಾಣ ಮಾಡಲು ಹೊರಟಿದ್ದರೆ ಅವರದೇ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಯೋಜನೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ.
ರಸ್ತೆ ಬದಿಯಲ್ಲಿ ಮೂತ್ರ ಮಾಡಿದವರಿಗೆ ಹೂವಿನ ಹಾರ ಹಾಕಿ ಸನ್ಮಾನ!
ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ರಾಮ್ ಶಿಂಧೆ ಅವರು ರಸ್ತೆ ಬದಿ ಮೂತ್ರ ಮಾಡಿ ಸಿಕ್ಕಿಬಿದ್ದಿದ್ದಾರೆ. ಸಚಿವರು ರಸ್ತೆ ಬದಿ ಮೂತ್ರ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಚಿವ ರಾಮ್ ಶಿಂಧೆ ಅವರು ಕಾರಿನಲ್ಲಿ ಸೊಲ್ಲಾಪುರದಿಂದ ಬರ್ಶಿ ಗೆ ಹೋಗುವ ದಾರಿಯಲ್ಲಿ ರಸ್ತೆ ಬದಿ ಮೂತ್ರ ಮಾಡಿದ್ದು, ಯಾರೊ ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
125 ಕೋಟಿ ಜನರಿಂದ ಮಾತ್ರ ಸ್ವಚ್ಛ ಭಾರತ ಸಾಧ್ಯ : ನರೇಂದ್ರ ಮೋದಿ
ರಸ್ತೆ ಬದಿಯಲ್ಲಿ ಮೂತ್ರ ಮಾಡಿರುವುದನ್ನು ಒಪ್ಪಿಕೊಂಡಿರುವ ಸಚಿವ ರಾಮ್ ಶಿಂಧೆ, ನಾನು ಕಳೆದ ಒಂದು ತಿಂಗಳಿನಿಂದ 'ಜಲಯುಕ್ತ ಶಿವರ್' ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ, ಹೀಗಾಗಿ ಅನಾರೋಗ್ಯಕ್ಕೆ ಒಳಗಾಗಿದ್ದೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೌಚಾಲಯ ಕೂಡ ಸಿಗಲಿಲ್ಲ ಹಾಗಾಗಿ ಬಯಲಿನಲ್ಲಿ ಮೂತ್ರ ವಿಸರ್ಜಿಸಿದೆ' ಎಂದು ತಮ್ಮ 'ಘನಕಾರ್ಯವನ್ನು' ಸಮರ್ತಿಸಿಕೊಂಡಿದ್ದಾರೆ.
ಸಚಿವರ ಈ ಮೂತ್ರವಿಸರ್ಜನಾ ಘಟನೆಯನ್ನು ಅಸ್ತ್ರವಾಗಿ ಬಳಸುತ್ತಿರುವ ವಿರೋಧ ಪಕ್ಷಗಳು, 'ಹೈವೆಯಲ್ಲಿ ಸಚಿವರಿಗೆ ಶೌಚಾಲಯ ದೊರಕಲಿಲ್ಲವೆಂದರೆ ಇದು ಮೋದಿ ಅವರ ಸ್ವಚ್ಚ ಭಾರತ ಯೋಜನೆ ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂಬುದಕ್ಕೆ ಉದಾಹರಣೆ' ಎಂದು ಟೀಕಿಸುತ್ತಿವೆ.
"ತಮ್ಮದೇ ಪಕ್ಷದ ಸಚಿವರು ಶಿಸ್ತು ಪಾಲನೆ ಮಾಡದೆ ಬೇಕಾ ಬಿಟ್ಟಿ ವರ್ತಿಸುತ್ತಿರುವಾಗ, ಸಾಮಾನ್ಯ ಜನರು ಶಿಸ್ತು ಪಾಲಿಸಿ, ಶೌಚಾಲಯಗಳನ್ನು ಬಳಸಿ ಎಂದು ದೇಶದ ಪ್ರಧಾನಿಗಳು ಹೇಗೆ ತಾನೆ ಹೇಳುತ್ತಾರೆ, ಮೊದಲು ಅವರು ಅವರ ಪಕ್ಷದ ಸಚಿವರಿಗೆ ಶಿಸ್ತು ಕಲಿಸಲಿ ಆಮೇಲೆ ಸಾಮಾನ್ಯ ಜನರಿಗೆ ಬುದ್ಧಿ ಹೇಳಲಿ, ಹೈವೆಯಲ್ಲಿ ಸಚಿವರಿಗೆ ಶೌಚಾಲಯ ಸಿಗಲಿಲ್ಲವೆಂದರೆ ಸ್ವಚ್ಚ ಭಾರತ ಸೆಸ್ ಹಣವೆಲ್ಲಾ ಎಲ್ಲಿ ಹೋಯಿತು' ಎಂದು ವಿರೋಧ ಪಕ್ಷ ಎನ್.ಸಿ.ಪಿ ಮುಖಂಡ ಮಲಿಕ್ ಹೇಳಿದ್ದಾರೆ.